News Karnataka Kannada
Sunday, May 12 2024
ಶಿವಮೊಗ್ಗ

ಆದವಳ್ಳಿ ಗ್ರಾಮಕ್ಕೆ ಸಂಪರ್ಕಸೇತುವಾದ ಕಾಲುಸಂಕ

Vaishali
Photo Credit : News Kannada

ಆದವಳ್ಳಿ : ಗ್ರಾಮೀಣ ಭಾಗದಲ್ಲಿ ಅದರಲ್ಲೂ ವಿಶೇಷವಾಗಿ ಮಲೆನಾಡಿನ ಗ್ರಾಮಗಳಲ್ಲಿ ಹಳ್ಳ, ಕಾಲುವೆ ಮತ್ತಿತರೆ ನೀರಿನ ಮೂಲಗಳನ್ನು ದಾಟಲು ಸೂಕ್ತ ವ್ಯವಸ್ಥೆಯಿಲ್ಲದೇ ಸುತ್ತುಬಳಸು ದಾರಿಗಳ ಮೂಲಕ ಸಾಗುವುದು ಕಷ್ಟವಾಗುತ್ತಿತ್ತು. ಜನರ ಈ ಸಂಕಷ್ಟವನ್ನು ನೀಗಿಸಲು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಲುಸಂಕಗಳನ್ನು ನಿರ್ಮಿಸಲಾಗುತ್ತಿದೆ.

ಗ್ರಾಮೀಣ ಭಾಗಗಳಲ್ಲಿ ಅವಶ್ಯಕತೆ ಇರುವೆಡೆ ಗ್ರಾಮ ಪಂಚಾಯ್ತಿ ಮೂಲಕ ಕಾಲುಸಂಕ ನಿರ್ಮಿಸುವ ಕಾರ್ಯ ನಡೆಯುತ್ತಿದ್ದು, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಆದವಳ್ಳಿ ಮತ್ತು ಕೊಳಗಿ ಊರಿನ ಗ್ರಾಮಸ್ಥರು ಸೊನಲೆಗೆ ಹೋಗಲು ಹಳ್ಳ ದಾಟಬೇಕಿತ್ತು. ಈ ಹಳ್ಳಕ್ಕೆ ಕಾಲು ಸಂಕ ಅಥವಾ ಸೇತುವೆ ಇಲ್ಲದ ಕಾರಣ ಜನರು ಸುತ್ತುಬಳಸು ದಾರಿಯಲ್ಲಿ ಸಾಗಲು ಕಷ್ಟಕರವಾಗಿತ್ತು.

ಆದವಳ್ಳಿ ಗ್ರಾಮವು ಸೊನಲೆ ಗ್ರಾಮಪಂಚಾಯತ್ ವ್ಯಾಪ್ತಿಗೆ ಒಳಪಟ್ಟಿದ್ದು, ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ಸುಮಾರು 75 ಕಿ.ಮೀ ಹಾಗೂ ಹೊಸನಗರ ತಾಲ್ಲೂಕು ಕೇಂದ್ರದಿಂದ 14 ಕಿ ಮೀ ದೂರವಿದೆ. ಗ್ರಾಮ ಪಂಚಾಯತಿಯಿಂದ ಸುಮಾರು 2 ಕಿ. ಮೀ ದೂರದಲ್ಲಿದೆ. ಈ ಗ್ರಾಮವು ಆರ್ಥಿಕವಾಗಿ ಹಿಂದುಳಿದ ಗ್ರಾಮವಾಗಿರುವುದರಿಂದ ಕೂಲಿ ಕೆಲಸವನ್ನು ಮಾಡುವ ಜನರ ಸಂಖ್ಯೆ ಹೆಚ್ಚಾಗಿದ್ದು ಜನರು ತಮ್ಮ ದೈನಂದಿನ ವ್ಯವಹಾರಕ್ಕಾಗಿ ಸೊನಲೆ ಗ್ರಾಮಕ್ಕೆ ಬರುವುದು ತೀರಾ ಅವಶ್ಯಕವಾಗಿತ್ತು.

ಆದವಳ್ಳಿ ಮತ್ತು ಕೊಳಗಿ ಗ್ರಾಮದ ಜನರ ಸಂಕಷ್ಟಕ್ಕೆ ಸ್ಪಂದಿಸಿದ ಸೊನಲೆ ಗ್ರಾ.ಪಂ 2019-20 ನೇ ಸಾಲಿನಲ್ಲಿ ಅಂದಾಜು ಮೊತ್ತ ರೂ.17,42,000 ಮೊತ್ತದಲ್ಲಿ ಆದವಳ್ಳಿ ಮತ್ತು ಕೊಳಗಿ ಗ್ರಾಮದಿಂದ ಸೊನಲೆಗೆ ಹಸೆಕೊಡಿಗೆ ಹಳ್ಳದ ಮೂಲಕ ಸಾಗಲು ಕಾಲುಸಂಕ ಕಾಮಗಾರಿಗೆ ಅನುಮೋದನೆ ನೀಡಿತು.

ಆದವಳ್ಳಿ ಗ್ರಾಮದಿಂದ ಸೊನಲೆಗೆ ಹೋಗುವ ಹಸೆಕೊಡಿಗೆ ಹಳ್ಳಕ್ಕೆ ಕಿರು ಸೇತುವೆ ನಿರ್ಮಾಣ ಕಾಮಗಾರಿಯನ್ನು ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ಅನುಮೋದನೆ ಪಡೆದು ನಂತರ ತಾಲ್ಲೂಕು ಪಂಚಾಯತಿ ಮುಖಾಂತರ ಕ್ರಿಯಾಯೋಜನೆ ಅನುಮೋದನೆ ಪಡೆದು ಅನುಷ್ಟಾನ ಮಾಡಲಾಗಿದೆ. ಕಿರು ಸೇತುವೆ ನಿರ್ಮಾಣದಿಂದಾಗಿ ಆದವಳ್ಳಿ ಗ್ರಾಮದ ಸುಮಾರು 100 ಕುಟುಂಬಗಳಿಗೆ ಅನುಕೂಲವಾಗಿದೆ.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯ ಆದ್ಯತೆ “ಡಿ” ನಲ್ಲಿ ಕಿರು ಸೇತುವೆ ಕಾಮಗಾರಿಗಳನ್ನು ಅನುಷ್ಟಾನ ಮಾಡಲು ಅವಕಾಶವಿದ್ದು ಅದರಂತೆ ಸೊನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಆದವಳ್ಳಿ ಗ್ರಾಮದಿಂದ ಸೊನಲೆಗೆ ಸಂಪರ್ಕಿಸುವ ಹಸೆಕೊಡಿಗೆ ಹಳ್ಳಕ್ಕೆ ಕಿರು ಸೇತುವೆ ನಿರ್ಮಾಣ ಕಾಮಗಾರಿಯು ದಿನಾಂಕ:01/04/2019 ರಂದು ಪ್ರಾರಂಭಿಸಲಾಯಿತು. ಕಾಮಗಾರಿಯ ಅಂದಾಜು ಮೊತ್ತ ರೂ.17,42,000/-ವಾಗಿದ್ದು, ಕೆಲಸ ಪ್ರಾರಂಭದ ಕೂಲಿಯ ಬಾಬ್ತು ರೂ.6,27,298/- ಮತ್ತು ಸಾಮಗ್ರಿ ಮೊತ್ತ ರೂ.99,294 ಪಾವತಿಸಲಾಗಿದೆ.
ಒಟ್ಟು 2422 ಮಾನವ ದಿನಗಳನ್ನು ಸೃಷ್ಠಿಸಲಾಗಿದ್ದು, ಕುಶಲ ಕೂಲಿ ಮೊತ್ತ ರೂ.99294/- ಪಾವತಿಸಲಾಗಿದೆ. ಜನರ ದೈನಂದಿನ ವ್ಯವಹಾರಕ್ಕೆ ಹಸೆಕೊಡಿಗೆ ಹಳ್ಳಕ್ಕೆ ಕಿರು ಸೇತುವೆ ಅವಶ್ಯಕವಾದ್ದರಿಂದ ಜನರ ಆಶೋತ್ತರಗಳಿಗೆ ಸ್ಪಂದಿಸಿ ಈ ಕಾಮಗಾರಿಯ ನಿರ್ಮಾಣ ಮಾಡಲಾಗಿದೆ. ಸೊನಲೆ ಗ್ರಾಮಪಂಚಾಯಿತಿಯ ಸರ್ವ ಸದಸ್ಯರ ಒಪ್ಪಿಗೆ ಮೇರಗೆ ಈ ಕಿರು ಸೇತುವೆಯನ್ನ ನಿರ್ಮಾಣ ಮಾಡಲು ತೀರ್ಮಾನಿಸಿ ಇದಕ್ಕೆ ಸಾಮಗ್ರಿ ಮೊತ್ತ ಹಾಗೂ ಕೂಲಿಯ ವೆಚ್ಚವನ್ನ ಸರಿದೂಗಿಸಿ ಅತ್ಯಂತ ಯಶಸ್ವಿಯಾಗಿ ಈ ಕಾಲುಸಂಕ ಕಾಮಗಾರಿಯನ್ನ ಪೂರ್ಣಗೊಳಿಸಿದ್ದೇವೆ ಎಂದು  ಜಿ.ಪಂ, ಸಿಇಓ ಎಂ.ಎಲ್.ವೈಶಾಲಿ ಹೇಳಿದರು.

ಸಂತಸ ವ್ಯಕ್ತ : ಆದವಳ್ಳಿ ಗ್ರಾಮದಿಂದ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಮತ್ತು ಅಲ್ಲಿನ ಜನರು ಕೆಲಸಕ್ಕೆ ಸೊನಲೆ ಗ್ರಾಮವನ್ನೇ ಆಶ್ರಯಿದ್ದಾರೆ. ಮಳೆಗಾಲದ ಸಮಯದಲ್ಲಿ ಹಸೆಕೊಡಿಗೆ ಹಳ್ಳ ತುಂಬಿ ಹರಿಯುವುದರಿಂದ ಸೊನಲೆಗೆ ಬರುವುದು ತುಂಬಾ ಕಷ್ಟವಾಗಿತ್ತು.ಈ ಕಿರುಸೇತುವೆ ನಿರ್ಮಾಣದಿಂದಾಗಿ ಸ್ಥಳೀಯರಿಗೆ ಅನುಕೂಲವಾಗಿದೆ ಎಂದು ಸೊನಲೆ ಗ್ರಾಮಸ್ಥರಾದ ಲೋಕೇಶ.ಆರ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು