ಶಿವಮೊಗ್ಗ: ದೇಶದಲ್ಲಿಯೇ ಅತ್ಯಂತ ವಿಶ್ವಾಸಾರ್ಹ, ಪ್ರಮಾಣಿಕ ಸೇವೆಯ ಇಲಾಖೆ ಭಾರತೀಯ ಅಂಚೆ ಇಲಾಖೆಯಾಗಿದ್ದು ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದು ಇಲಾಖೆಯ ಹಾಗೂ ಸಾರ್ವಜನಿಕರ ಕರ್ತವ್ಯವಾಗಿದೆ ಎಂದು ಕಮಲಾ ನೆಹರು ಮಹಿಳಾ ಕಾಲೇಜಿನ ಇತಿಹಾಸ ಪ್ರಾಧ್ಯಾಪಕರಾದ ಡಾ.ಬಾಲಕೃಷ್ಣ ಹೆಗಡೆ ಕರೆ ನೀಡಿದರು.
ಅವರು ಇಂದು ಇಲ್ಲಿಯ ಪ್ರಧಾನ ಅಂಚೆ ಕಚೇರಿಯಲ್ಲಿ ಶಿವಮೊಗ್ಗ ನಗರದ ವಿವಿಧ ಅಂಚೆ ಕಚೇರಿಗಳ ಸಿಬ್ಬಂದಿಗಳಿಗ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡುತ್ತಿದ್ದರು. ಭಾರತೀಯ ಅಂಚೆಗೆ ಸುಧೀರ್ಘ ಇತಿಹಾಸವಿದೆ. ಅನೇಕ
ಏರಿಳಿತಗಳನ್ನೂ ಅದು ಕಂಡಿದೆ. ಆದರೆ ಸ್ವಾತಂತ್ರ್ಯ ನಂತರದ ವರ್ಷಗಳಲ್ಲಿ ಕೇಂದ್ರ ಸರ್ಕಾರಗಳು ಇಲಾಖೆಯ ಪುನಶ್ಚೇತನಕ್ಕೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಗ್ರಾಮದ ಕಟ್ಟಕಡೆಯ ವ್ಯಕ್ತಿಗೂ ಅಂಚೆ ಸೇವೆ ದೊರಕುವಂತೆ ಮಾಡಿರುವುದು ಶ್ಲಾಘನೀಯ ಸಂಗತಿ ಎಂದು
ಅವರು ಹೇಳಿದರು.
ಇಲಾಖೆಯ ಸಿಬ್ಬಂದಿಗಳು ತಾವು ಗ್ರಾಹಕ ಸ್ನೇಹಿಯಾಗಿರಬೇಕು ಎಂದು ತಿಳಿದಾಗ ಮಾತ್ರ ಅದು ಆರ್ಥಿಕವಾಗಿ ಪ್ರವರ್ಧಮಾನಕ್ಕೆ ತಲುಪುವುದು ಸಾಧ್ಯವಾಗುತ್ತದೆ. ಅಲ್ಲದೆ ಬದಲಾಗುತ್ತಿರುವ ತಂತ್ರಜ್ಞಾನಕ್ಕೂ ಸಿಬ್ಬಂದಿಗಳು ಒಗ್ಗಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಸಿಬ್ಬಂದಿಗಳು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಬೇಕು. ಒಂದು ವೇಳೆ ಯಾವುದಾದರೂ ಸೇವೆ ತಮ್ಮ ಶಾಖೆಯಲ್ಲಿ ಇಲ್ಲದಿದ್ದರೆ ಬೇರೆ ಯಾವ ಶಾಖೆಯಲ್ಲಿ ಅದು ಲಭ್ಯವಿದೆ ಎಂಬ ಮಾಹಿತಿ ನೀಡಬೇಕು. ಎಲ್ಲ ಮಾನಸಿಕ ಒತ್ತಡ, ತುಮುಲಗಳನ್ನು ಬದಿಗಿಟ್ಟು ಕರ್ತವ್ಯ ನಿರ್ವಹಿಸಿದಾಗ ಮಾತ್ರ ಉತ್ತಮ ಸೇವೆ ನೀಡಲು ಸಾಧ್ಯ ಎಂದು ಅವರು ತಿಳಿಸಿದರು. ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಇಲಾಖೆಯ ವಿಭಾಗೀಯ
ಅಧೀಕ್ಷಕರಾದ ಹರೀಶ ಮಾತನಾಡಿ, ಕೊವಿಡ-೧೯ ಸಂದರ್ಭದಲ್ಲಿ ಇಲಾಖೆಯು ಆರ್ಥಿಕವಾಗಿ ಹಿನ್ನಡೆಯನ್ನು ಅನುಭವಿಸಿದೆ. ಆದರೆ ಈಗ ಪರಿಸ್ಥಿತಿ ತಿಳಿಯಾಗಿದೆ. ಸಿಬ್ಬಂದಿಗಳು ಅಂಚೆ ಜೀವ ವಿಮೆ ಪಾಲಿಸಿ, ಪಿಪಿಎಫ್ ಮೊದಲಾದ ಯೋಜನೆಗಳ ಕುರಿತು ಸಾರ್ವಜನಿಕರಿಗೆ ತಿಳುವಳಿಕೆ ನೀಡಿ ಇಲಾಖೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ಉಪ ಅಧೀಕ್ಷಕರಾದ ನಾಗರಾಜ, ಶ್ರೀಮತಿ ಉಷಾ ಮೊದಲಾದವರು ಉಪಸ್ಥಿತರಿದ್ದರು. ಮಾರುಕಟ್ಟೆ ವಿಭಾಗದ ರಾಘವೇಂದ್ರ ಹವಳರ್, ಪಿಆರ್ಒ ರಾಘವೇಂದ್ರ ಜಿ. ಕಾರ್ಯಕ್ರಮ ನಿರ್ವಹಿಸಿದರು.