ಚಿಕ್ಕಮಗಳೂರು: ದೇವರಲ್ಲಿ ಭಯ, ಭಕ್ತಿ ಇರುವುದರಿಂದ ಸಮಾಜದಲ್ಲಿ ಎಲ್ಲಾ ಸಮುದಾಯದ ಜನ ಅವರ ನಂಬಿಕೆಯಂತೆ ವಿವಿಧ ಬಗೆಯಲ್ಲಿ ದೇವರ ಪೂಜೆ ಮಾಡುತ್ತಿರುವುದು ದೇವನೊಬ್ಬ ನಾಮ ಹಲವು ಎಂಬುವುದಕ್ಕೆ ಪೂರಕ-ಪ್ರೇರಕ ಎಂದು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅಭಿಪ್ರಾಯಿಸಿದರು.
ಅವರು ಜಾಗರ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗಾಳಿಗುಡ್ಡೆ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿರುವ ಡಾ. ಪುನೀತ್ ರಾಜ್ಕುಮಾರ್ ಪುತ್ಥಳಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ದೇವರಲ್ಲಿ ನಂಬಿಕೆ ಇಟ್ಟು ಪೂಜಿಸಿ, ಪ್ರಾರ್ಥಿಸಿದರೆ ಸಕಲವು ಸಿದ್ಧಿಸುತ್ತದೆ ಎಂದ ಅವರು ಜಿಲ್ಲೆಯಲ್ಲಿ ಪಕ್ಷದ ಐದು ಶಾಸಕರು ಇರುವುದರಿಂದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲಿದ್ದಾರೆ, ಜಿಲ್ಲೆಯಲ್ಲಿ 1.62 ಕೋಟಿ ಜನರು ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದಾರೆ, ಗೃಹಲಕ್ಷ್ಮೀ, ಶಕ್ತಿ, ಯುವನಿಧಿ ಯೋಜನೆಗಳನ್ನು ಜಾರಿ ಮಾಡಿ ಅನುಷ್ಠಾನ ಮಾಡಿರುವುದರಿಂದ ಕರ್ನಾಟಕ ರಾಜ್ಯ ದೇಶದಲ್ಲೇ ಮಾದರಿಯಾಗಿ ಅತ್ಯುತ್ತಮವಾಗಿದೆ ಎಂದು ಶ್ಲಾಘಿಸಿದರು.
ನಟ ಪುನೀತ್ ರಾಜ್ಕುಮಾರ್ ರವರು ಸರಳ, ಸಜ್ಜನಿಕೆ ಸ್ವಭಾವದ ವ್ಯಕ್ತಿ ಯಾಗಿದ್ದು, ಅತ್ಯಂತ ವಿನಯದಿಂದ ಎಲ್ಲ ರೊಂದಿಗೆ ಸಂಯಮದಿಂದ ಮಾತನಾ ಡುವ ಸೌಜನ್ಯ ಮೈಗೂಡಿಸಿಕೊಂಡಿದ್ದರು ಜೊತೆಗೆ ನನ್ನ ಪುತ್ರನೊಂದಿಗೆ ಆಪ್ತ ಸ್ನೇಹಿತನಾಗಿದ್ದರು ಎಂದು ಹೇಳಿದರು.
ಈ ಭಾಗದಲ್ಲಿ ಕಾಫಿ ತೋಟ ಮಾಡಬೇಕೆಂಬ ಆಸೆ ವ್ಯಕ್ತಪಡಿಸಿದ್ದರು, ವನ್ಯಜೀವಿ ಹಾಗೂ ಅರಣ್ಯದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು, ಇಲ್ಲಗೆ ಬರಬೇಕೆಂಬ ಇಂಗಿತವನ್ನು ವ್ಯಕ್ತಪಡಿಸುತ್ತಿದ್ದ ಪುನೀತ್ ರಾಜ್ಕುಮಾರ್ ಅಗಲಿಕೆ ಇಡೀ ದೇಶ, ರಾಜ್ಯ, ವಿದೇಶಗಳಿಗೆ ತುಂಬಲಾರದ ನಷ್ಟವಾಗಿದೆ ಎಂದು ವಿಷಾದಿಸಿದರು.
4.25 ಸಾವಿರ ಕೋಟಿ ಕರ್ನಾಟಕ ರಾಜ್ಯದಿಂದ ತೆರಿಗೆ ಹಣವನ್ನು ಕೇಂದ್ರ ಸರ್ಕಾರಕ್ಕೆ ಕೊಡುತ್ತಿದ್ದೇವೆ ಆದರೂ ಕೇಂದ್ರ ರಾಜ್ಯಕ್ಕೆ ಮಲತಾಯಿ ಧೋರಣೆ ಮಾಡುತ್ತ ಸೌಲತ್ತು ಕೊಡುವಲ್ಲಿ ತಾರತಮ್ಯ ಎಸಗುತ್ತಿದೆ ಎಂದು ಆರೋಪಿಸಿದರು.
ಕನ್ನಡ ಭಾಷೆ ಬೆಳವಣಿಗೆಗೆ ಎಲ್ಲಾ ರೀತಿಯ ಹೋರಾಟಕ್ಕೆ ಬದ್ಧವಾಗಿದ್ದೇನೆ, ಎಲ್ಲರ ಸಹಕಾರದೊಂದಿಗೆ ಜಿಲ್ಲೆ ಹಾಗೂ ಗಾಳಿಗುಡ್ಡೆ ಶಿರವಾಸೆ ಎಲ್ಲವನ್ನು ಅಭಿವೃದ್ಧಿ ಮಾಡೋಣ, ಗಾಳಿಗುಡ್ಡೆ ಗ್ರಾಮದ ಸರ್ಕಾರಿ ಶಾಲೆಯನ್ನು ಅಭಿವೃದ್ಧಿ ಪಡಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.
ಅಧಿಕಾರ ಇರಲಿ ಇಲ್ಲದಿರಲಿ ಜನಸೇವೆಗೆ ಹಾಗೂ ದೇವರ ಕಾರ್ಯಗಳಿಗೆ ನಾನು ಸದಾ ಸಿದ್ಧವಾಗಿದ್ದು, ನಿಮ್ಮೆಲ್ಲರ ಸಹಕಾರ ಕಾಂಗ್ರೆಸ್ ಮುಖಂಡರ ಆಶೀರ್ವಾದದ ಫಲವಾಗಿ ಇಂದು ನಿಮ್ಮ ಮುಂದೆ ಸಚಿವನಾಗಿ ಇದ್ದೇನೆ ಎಂದು ಹೇಳಿದರು. ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಉಳಿವಿಗೆ ಹೋರಾಟ ಮಾಡಬೇಕಾದ ದುರದೃಷ್ಟಕರ ಪರಿಸ್ಥಿತಿ ಬಂದಿದೆ ಎಂದು ವಿಷಾಧಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಕುಟುಂಬದವರು ಪುನೀತ್ ರಾಜ್ಕುಮಾರ್ ಪುತ್ಥಳಿ ನಿರ್ಮಾಣ ಹಾಗೂ ಪುರಾತನ ವೀರಭದ್ರಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ಹಣ ನೀಡಿರುವುದನ್ನು ಅಭಿನಂದಿಸಿದರು.
ಜಿಲ್ಲೆಯಲ್ಲಿ ರಾಷ್ಟ್ರಕವಿ ಕುವೆಂಪು ಸೇರಿದಂತೆ ಹಲವಾರು ಕವಿಗಳು, ಸಾಹಿತಿಗಳು ಜನಿಸಿ ಕನ್ನಡವನ್ನು ಉಳಿಸಿ ಬೆಳಿಸಿದ್ದಾರೆ. ಆದರೆ ಕನ್ನಡ ಶಾಲೆಗಳು ಮುಚ್ಚುತ್ತಿರುವುದರಿಂದ ಕನ್ನಡ ಭಾಷೆ ಬೆಳವಣಿಗೆ ಕುಂಠಿತವಾಗಿದ್ದು, ಪೋಷಕರು ಇಂಗ್ಲಿಷ್ ವ್ಯಾಮೋಹ ಬಿಡುವಂತೆ ಮನವಿ ಮಾಡಿದರು.
ನವೀಕರಿಸಬಹುದಾದ ನಿಗಮದ ಅಧ್ಯಕ್ಷ ಟಿ.ಡಿ ರಾಜೇಗೌಡ ಮಾತನಾಡಿ, ಸಾಧನೆ ಮಾಡಿ ರಾಜ್ಯದಲ್ಲಿ ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ಕೊಡುಗೆಗಳನ್ನು ಕೊಟ್ಟು ದೇಶ-ವಿದೇಶಗಳಲ್ಲಿ ನಟನೆ ಮೂಲಕ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಪುನೀತ್ ರಾಜ್ಕುಮಾರ್ ಪುತ್ಥಳಿ ಅನಾವರಣ ನಿಜಕ್ಕೂ ಅರ್ಥಪೂರ್ಣ ಎಂದು ಶ್ಲಾಘಿಸಿದರು.
ಪುನೀತ್ ರಾಜ್ಕುಮಾರ್ ರವರು ಅನೇಕ ಅಂಧಮಕ್ಕಳ ಪಾಠಶಾಲೆ ಸ್ಥಾಪಕರಾಗಿದ್ದಾರೆ. ಮೈಸೂರಿನಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಉಚಿತ ಹಾಸ್ಟೆಲ್ ವ್ಯವಸ್ಥೆ ಜೊತೆಗೆ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ವಿಧ್ಯಾದಾನ ಮಾಡುವ ರೀತಿ ಹತ್ತು ಹಲವು ಕಾರ್ಯಕ್ರಮ ರಚಿಸಿದ ಪುನೀತ್ ರಾಜ್ಕುಮಾರ್ ಪುತ್ಥಳಿ ನಿರ್ಮಿಸಿರುವುದು ಅಭಿನಂದನಾರ್ಹ ಎಂದರು.
ಇಂಧನ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಅವರು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರಾಗಿದ್ದರೂ ಹಿಂದೂ ಧಾರ್ಮಿಕ ಕೇಂದ್ರಗಳಿಗೆ ಕೋಟ್ಯಾಂತರ ರೂ ಧನಸಹಾಯ ನೀಡಿದ ಕೀರ್ತಿ ಅವರಿಗೆ ಸಲ್ಲಬೇಕು ಎಂದು ಹೇಳಿದರು.