ನರಕ ಚತುರ್ದಶಿ, ದೀಪಾವಳಿ ಬಂತೆಂದರೆ ಎಲ್ಲೆಡೆ ಸಡಗರ ಸಂಭ್ರಮ. ಅಜ್ಞಾನದ ಕತ್ತಲನ್ನೂ ಓಡಿಸುವ ಈ ಹಬ್ಬದ ಹಿಂದಿನ ಇತಿಹಾಸ ಕೂಡ ರೋಚಕ. ಇನ್ನು ಈ ದೀಪಾವಳಿ ಸಮಯದಲ್ಲಿ ಮಾತ್ರ ದರ್ಶನ ನೀಡುವ ದೇವರು ಎಂದರೇ ಹಾಸನದ ಹಾಸನಾಂಬ ಮತ್ತು ಚಿಕ್ಕಮಗಳೂರಿನ ಬಿಂಡಿಗದ ದೇವಿರಮ್ಮ. ವರ್ಷಕ್ಕೊಮ್ಮೆ ದರ್ಶನ ನೀಡುವ ಮಲೆನಾಡಿನ ತಾಯಿ ಬಿಂಡಿಗ ದೇವಿರಮ್ಮನ ದರ್ಶನಕ್ಕೆ ಇಂದು ಭಕ್ತರ ದಂಡು ಹರಿದಯ ಬರುತ್ತಿದೆ. ಮಧ್ಯರಾತ್ರಿಯಿಂದಲೇ ಭಕ್ತರು ಬೆಟ್ಟ ಏರಿ, ದರ್ಶನಕ್ಕೆ ಮುಂದಾಗಿದ್ದಾರೆ. ದೀಪಾವಳಿ ಸಮಯದಲ್ಲಿ ಮಾತ್ರ ದರ್ಶನ ಭಾಗ್ಯ ಕರುಣಿಸುವ ದೇವಿಯನ್ನು ನೋಡಲು ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಆಗಮಿಸುತ್ತಾರೆ.
ಮಲೆನಾಡಿನ ತಪ್ಪಲಿನಲ್ಲಿರುವ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಬಿಂಡಿಗ ಗ್ರಾಮದಲ್ಲಿರುವ ಚಂದ್ರದ್ರೋಣ ಪರ್ವತ ಶ್ರೇಣಿಗೆ ಹೊಂದಿಕೊಂಡಿರುವ 3 ಸಾವಿರ ಅಡಿ ಎತ್ತರದ ಬೆಟ್ಟವೇ ದೇವೀರಮ್ಮ ಬೆಟ್ಟ. ಈ ದೇವಿಯನ್ನು ಬಿಂಡಿಗ ದೇವೀರಮ್ಮ ಎಂತಲೂ ಕರೆಯುತ್ತಾರೆ. ದೂರದೂರಿನಿಂದ, ಹೊರ ರಾಜ್ಯಗಳಿಂದಲೂ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಆದರೆ ದೇವಿರಮ್ಮ ಬೆಟ್ಟಕ್ಕೆ ಪ್ರವೇಶವಿರುವುದು ಮಾತ್ರ ನರಕ ಚತುರ್ದಶಿಯಂದು. ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ವಿವಿಧೆಡೆಗಳಿಂದ ಜನರು ಆಗಮಿಸಿ ದೇವೀರಮ್ಮನ ದರ್ಶನ ಪಡೆಯುತ್ತಾರೆ.
ದೇವಾಲಯದ – ಪುರಾಣ
ನರಕ ಚತುರ್ದಶಿಯ ಸಮಯದಲ್ಲಿ ವರ್ಷದ ಮೂರು ದಿನ ಮಾತ್ರ ಭಕ್ತರಿಗೆ ದರ್ಶನ ನೀಡುವ ದೇವಿರಮ್ಮ ಇಲ್ಲಿ ಬಂದು ನೆಲೆಸಿದ ಕಥೆಯೇ ರೋಚಕ. ಪುರಾಣದ ಪ್ರಕಾರ, ಮಹಿಷಾಸುರನ ಮರ್ದಿಸಿದ ಚಾಮುಂಡಿಯ ಕೋಪ ಇನ್ನು ತಣ್ಣಗೆ ಆಗಿರುವುದಿಲ್ಲ. ಆಕೆಯ ಮುನಿಸು ಭಕ್ತರಿಗೆ ಕೇಡು ಮಾಡಬಾರದು ಎಂಬ ಉದ್ದೇಶಕ್ಕೆ ದೇವಿ ಶಾಂತಳಾಗಲು ಈ ಪರ್ವತದತ್ತ ಬರುತ್ತಾಳೆ. ರುದ್ರಮುನಿ ಸೀತಯ್ಯ, ಮುಳ್ಳಯ್ಯ, ದತ್ತಾತ್ರೇಯ, ಗಾಳಲ್ಲಿ ಅಜ್ಜಯ್ಯ ತಪಸ್ಸಿಗೆ ನಿಂತ ಈ ಜಾಗದಲ್ಲಿ ಪ್ರಸನ್ನಳಾಗಲು ಅನುಮತಿ ಕೋರುತ್ತಾಳೆ. ಆಗ ಆ ಐದು ಜನ ತಪಸ್ವಿಗಳು ತಮ್ಮಿಂದು ಕೊಂಚ ಅನತಿ ದೂರದಲ್ಲಿರುವ ಬೆಟ್ಟದಲ್ಲಿ ನೆಲೆಸುವಂತೆ ತೋರುತ್ತಾರೆ. ಆಗ ತಾಯಿ ಅಲ್ಲಿ ಶಾಂತ ಸ್ವರೂಪಳಾಗಿ ನೆಲೆಯೂರುತ್ತಾಳೆ ಎಂಬ ಐತಿಹ್ಯ ಇದೆ.
ಇದಾದ ಬಳಿಕ ಶಾಂತಳಾದ ತಾಯಿ ಭಕ್ತರಿಗಾಗಿ ಕೆಳಗಿಳಿದು ಬರುತ್ತಾಳೆ. ಇನ್ನು ಬೆಟ್ಟದ ಮೇಲಿನ ತಾಯಿಯನ್ನು ವರ್ಷದ ಒಂದು ದಿನ, ಅದು ನರಕ ಚುತರ್ದಶಿಯಂದು ಮಾತ್ರ ದರ್ಶನ ಪಡೆಯಬೇಕು. ಬಳಿಕ ದೀಪಾವಳಿಯ ಎರಡನೇ ದಿನದ ಅಮವಾಸ್ಯೆಯಂದು ದೇವಿ ಬೆಟ್ಟದ ಕೆಳಗಿರುವ ಬಿಂಡಿಗ ದೇವಸ್ಥಾನದಲ್ಲಿ ಭಕ್ತರಿಗೆ ದರ್ಶನ ನೀಡುತ್ತಾಳೆ.
ದೇವಾಲಯದ ಪವಾಡ
ಇನ್ನು ಈ ದೇವಾಸ್ಥನ ಮತ್ತೊಂದು ಪವಾಡ ಎಂದರೆ. ದೀಪಾವಳಿಯ ಎರಡನೇ ದಿನ ಬಿಂಡಿಗ ದೇವಾಲಯದ ಬಾಗಿಲು ತನ್ನಿಂದ ತಾನೇ ತೆರೆದು ಭಕ್ತರಿಗೆ ದರ್ಶನ ನೀಡುತ್ತಾಳೆ. ಈ ಪವಾಡ ನೋಡಲೆಂದೆ ಇಲ್ಲಿಗೆ ಅನೇಕ ಭಕ್ತರು ಆಗಮಿಸುತ್ತಾರೆ. ಇನ್ನು ಈ ದೇವಿಗೆ ಹರಕೆ ಹೊತ್ತು ತುಪ್ಪ, ಬಳೆ, ಕಟ್ಟಿಗೆಗಳನ್ನು ಸಮರ್ಪಿಸುತ್ತಾರೆ.
ದೇವಾಲಯದ ವೈಶಿಷ್ಟ್ಯತೆ
ಇನ್ನು ನರಕ ಚತುರ್ದಶಿಯಂದು ಈ ಬೆಟ್ಟಕ್ಕೆ ಭಕ್ತರು ಸೌದೆಯನ್ನು ಹೊತ್ತಿಕೊಂಡು ಹೋಗಿ ಸಂಜೆ ದೀಪ ಹಚ್ಚುತ್ತಾರೆ. ಈ ದೀಪ ಬೆಳಗಿದ ಮೇಲೆಯೇ ಇಲ್ಲಿನ ಸುತ್ತಮುತ್ತಲಿನ ಗ್ರಾಮಗಳ ಮನೆಯಲ್ಲಿ ದೀಪಾವಳಿಯ ದೀಪ ಹಚ್ಚಲಾಗುತ್ತದೆ. ಮೈಸೂರು ರಾಜವಂಶಸ್ಥರೂ ಕೂಡ ಇದೇ ನಿಯಮ ಪಾಲನೆ ಮಾಡುತ್ತಾರೆ ಎನ್ನಲಾಗಿದೆ. ಇನ್ನು ಈ ದೇವಿರಮ್ಮನ ಬೆಟ್ಟ ಹತ್ತುವಾಗ ಯಾವುದೇ ಕಾರಣಕ್ಕೂ ಭಕ್ತರು ಚಪ್ಪಲಿ ಧರಿಸಬಾರದು. ಕಡಿದಾದ ಕಲ್ಲು ಮುಳ್ಳಿನ ಹಾದಿಯಲ್ಲೇ ಬೆಟ್ಟ ಹತ್ತಿ ದೇವರ ದರ್ಶನ ಮಾಡಬೇಕು. ಅಮವಾಸ್ಯೆ ಮತ್ತು ಬಲಿ ಪಾಡ್ಯಮಿಯಂದು ಬೆಟ್ಟದ ಕೆಳಗಿರುವ ದೇವಾಲಯದಲ್ಲಿ ಜಾತ್ರ ಮಹೋತ್ಸವ ನಡೆಯುತ್ತದೆ. ಈ ವೇಳೆ ಕೆಂಡಸೇವೆ ನಡೆಸಿ ಉತ್ಸವ ಕೊನೆಗೊಳಿಸಲಾಗವುದು.