ಚಿಕ್ಕಮಗಳೂರು: ಎಚ್.ಡಿ ಕುಮಾರಸ್ವಾಮಿ ಮತ್ತು ಡಿ.ಕೆ ಶಿವಕುಮಾರ್ ನಡುವಣ ಮಾತಿನ ಚಕಮಕಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಚಿಕ್ಕಮಗಳೂರು ಸಮೀಪ ಹನಿಡ್ಯೂ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿರುವ ಕುಮಾರಸ್ವಾಮಿ ಡಿ.ಕೆ ಶಿವಕುಮಾರ್ ಅವರಿಗೆ ಟಾಂಗ್ ನೀಡುವ ಮಾತನಾಡಿದ್ದಾರೆ.
‘ಟೆಂಟಲ್ಲಿ ಫಿಲಂ ತೋರಿಸಿಕೊಂಡು ಜೀವನ ಮಾಡಿಕೊಂಡು ಬಂದವನು’ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಸಾತನೂರಿನಲ್ಲಿ 2 ಟೆಂಟ್ ಇದ್ದವಲ್ಲಾ, ನಾವು ಮಲಯಾಳಿ ಸಿನಿಮಾಗೆ ಕಟ್ಟಿಂಗ್ ಸೇರಿಸೋರಲ್ಲ, ನಾವು ಚಿಕ್ಕವರಿದ್ದಾಗ ಆ ಜೀವನ ಮಾಡಿಕೊಂಡು ಬಂದಿಲ್ಲ.ಆ ಮನಸ್ಥಿತಿಯಲ್ಲಿ ಅವನಿಗೆ ಇನ್ನೇನು ಬರುತ್ತದೆ. ಆ ತರ ಪೋಸ್ಟರ್ ಮಾಡಿಸೋದು ಬಿಟ್ಟು ದೇವರದ್ದು ಹಾಕಿಸುತ್ತಾನಾ? ಅದನ್ನೇ ಮುಂದುವರೆಸುತ್ತಿದ್ದಾರೆ, ಅವರು ಬಂದಿರುವುದೇ ಆ ಸಂಸ್ಕೃತಿಯಲ್ಲಿ. ಅಂತವರನ್ನ ಈ ರಾಜ್ಯದ ಜನ ಆಯ್ಕೆ ಮಾಡಿಕೊಂಡಿದ್ದಾರೆ. ಅವರ ಜೀವನ, ಸಂಸ್ಕೃತಿ, ಬದುಕೇ ಅಷ್ಟು. ಏನು ಮಾಡೋದು” ಎಂದರು.
ಅವರಿಗೆ ಅವರ ಧರ್ಮದ ಬಗ್ಗೆ ಅಷ್ಟು ಅಭಿಮಾನ ಇದೆ. ನಮ್ಮ ಧರ್ಮದ ಧರ್ಮಾಭೀಮಾನಕ್ಕೆ ನಾನು ಭಯ ಪಡುತ್ತೇನಾ? ಹಾಕುವ ಸಮಯ ಬಂದರೆ ದತ್ತ ಮಾಲೆಯನ್ನೂ ಹಾಕುತ್ತೇನೆ. ಏಕೆ ಹಾಕಬಾರದು? ದೇವರ ಕಾರ್ಯಕ್ರಮ, ಹಾಕೋದು ಬಂದರೆ ಹಾಕುತ್ತೇನೆ. ಕಾನೂನು ಬಾಹಿರವಾಗಿ ಅಲ್ಲ ಯಾವುದನ್ನೂ ಮಾಡಲ್ಲ. ನಮ್ಮ ಸಂಸ್ಕೃತಿ ಉಳಿಸಲು ಕಾನೂನಾತ್ಮಕವಾಗಿ ಏನು ಬೇಕಾದರೂ ಮಾಡುತ್ತೇನೆ” ಎಂದು ಹೇಳಿದ್ದಾರೆ.