ಚಿಕ್ಕಮಗಳೂರು: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಡಿ ಕಡೂರು ತಾಲೂಕಿನ ಹುಲಿಕೆರೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ನೇತೃತ್ವದಲ್ಲಿ ನಡೆದ ಗ್ರಾಮ ವಾಸ್ತವ್ಯ ಗ್ರಾಮದಲ್ಲಿ ಸಡಗರ ಸಂಭ್ರಮದೊಂದಿಗೆ ಹಬ್ಬದ ವಾತಾವರಣ ನಿರ್ಮಿ ಸುವುದರ ಜೊತೆಗೆ ಗ್ರಾಮಕ್ಕೆ ಸರ್ಕಾರದ ಸವಲತ್ತುಗಳು ಹರಿದು ಬರುವ ಮೂಲಕ ಗ್ರಾಮೀಣರಿಗೆ ವರದಾನವಾಗಿ ಪರಿಣಮಿಸಿತು.
ಕಂದಾಯ ಸಚಿವರ ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ಶನಿವಾರ ಹುಲಿಕೆರೆ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸಂಜೆ ಇಳಿಹೊತ್ತಿನಲ್ಲಿ
ಆಗಮಿಸಿದ ಕಂದಾಯ ಸಚಿವ ಆರ್.ಅಶೋಕ್, ಶಾಸಕ ಸಿ.ಟಿ.ರವಿ ಹಾಗೂ ಅಧಿಕಾರಿಗಳ ತಂಡವನ್ನು ಪಿಳ್ಳೇನಹಳ್ಳಿಯಲ್ಲಿ ಸ್ವಾಗತಿಸಿದ ಗ್ರಾಮಸ್ಥರು ಎತ್ತಿನ ಗಾಡಿಗಳಲ್ಲಿ ಮೆರವಣಿಗೆ ಮುಖಾಂತರ ಅವರನ್ನು ಹುಲಿಕೆರೆ ಗ್ರಾಮಕ್ಕೆ ಕರೆತಂದರು.
ಹುಲಿಕರೆ ಗ್ರಾಮದ ಮುಂಭಾಗ ಪೂರ್ಣಕುಂಭ ಸ್ವಾಗತ ನೀಡಿ, ಆರತಿ ಎತ್ತಿ ಬರಮಾಡಿಕೊಂಡ ನೂರಾರು ಮಹಿಳೆಯರು ತಲೆಯ ಮೇಲೆ ಕಳಸ ಹೊತ್ತು ಮೆರವಣಿಗೆ ನಡೆಸಿದರು.
ಗ್ರಾಮಕ್ಕೆ ಆಗಮಿಸಿದ ಸಚಿವರು ಮೊದಲು ಗ್ರಾಮ ದೇವತೆ ಮಾರಮ್ಮನ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ನಂತರ ಕಾರ್ಯಕ್ರಮದ ವೇದಿಕೆಯತ್ತ ಹೆಜ್ಜೆ ಹಾಕಿದರು.
ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಚಿವರು ಗ್ರಾಮದ ಜನತೆಗೆ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನ, ರೇಷನ್ ಕಾರ್ಡ್, ಭೂಮಿ ಮಂಜೂರಾತಿ ವಿವಿಧ ಸಹಾಯಧನ ಸೇರಿದಂತೆ ೫ ಸಾವಿರಕ್ಕೂ ಹೆಚ್ಚು ಸರ್ಕಾರದ ವಿವಿಧ ಸವಲತ್ತುಗಳನ್ನು ವಿತರಿಸಿದರು. ಇದೇ ವೇಳೆ ವಿವಿಧ ಇಲಾಖೆಗಳ ಸವಲತ್ತು ಗಳನ್ನು ಫಲಾನುಭವಿಗಳಿಗೆ ಸಚಿವರು ವಿತರಿಸಿದರು.
ಅಂಗವಿಕಲರಿಗೆ ಸ್ಕೂಟರ್, ರೈತರಿಗೆ ಕೃಷಿ ಯಂತ್ರೋಪಕರಣಗಳು, ಆಪೆ ವಾಹನ ನಿವೇಶನ ರಹಿತ ಬಡವರಿಗೆ ನಿವೇಶನ ರೈತರಿಗೆ ಭೂಮಿ ಹಕ್ಕು ಪತ್ರ ಸೇರಿದಂತೆ ಅನೇಕ ಸವಲತ್ತುಗಳನ್ನು ನೀಡಲಾಯಿತು.
ಮಾಧ್ಯಮದೊಂದಿಗೆ ಮಾತನಾಡಿದ ಫಲಾನುಭವಿ ಇಂದ್ರಾಬಾಯಿ ಸರ್ಕಾರದ ಸವಲತ್ತುಗಳಿಗಾಗಿ ವರ್ಷಗಟ್ಟಲೆ ಕಚೇರಿಗಳಿಗೆ ಅಲೆಯಬೇಕಾ ಗಿತ್ತು ಆದರೆ, ಅವೆಲ್ಲವೂ ನಮ್ಮ ಮನೆ ಬಾಗಿಲಿಗೇ ಬಂದಿರು ವುದು ಅದೃಷ್ಟ ಎಂದು ಸಂತಸ ವ್ಯಕ್ತಪಡಿಸಿದರು.
ವೇದಿಕೆ ಕಾರ್ಯಕ್ರಮದ ನಂತರ ಗ್ರಾಮಸ್ಥರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು ಕಾರ್ಯಕ್ರಮಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಜನತೆಗೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು.