ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಷ್ಟು ಅಗಾಧವಾದ ಅರಣ್ಯ ಸಂಪತ್ತು ಇದಿಯೋ ಅಷ್ಟೇ ವನ್ಯಜೀವಿಗಳ ಆಶ್ರಯ ತಾಣವೂ ಆಗಿದೆ. ಇಂತಹ ವನ್ಯಜೀವಿಗಳಿಗೆ ಇದೀಗ ಪ್ರವಾಸಿಗರಿಂದ ಆಪತ್ತು ಎದುರಾಗಿದೆ.
ಕಾಡಂಚಿನ ಗ್ರಾಮಗಳಲ್ಲಿ ಅಕ್ರಮವಾಗಿ ಶಿಕಾರಿ ಮಾಡಿ ವನ್ಯಜೀವಿಗಳ ಹತ್ಯೆ ಮಾಡಲಾಗುತ್ತಿದೆ. ಅದರಲ್ಲೂ ಕಾಡು ಹಾಗೂ ಕಾಡು ಪ್ರಾಣಿಗಳನ್ನ ಉಳಿಸುತ್ತೇವೆ ಎನ್ನುವ ಎನ್.ಜಿ.ಓ. ತಂಡದವರೇ ಮೀಸಲು ಅರಣ್ಯದಲ್ಲಿ ಕಡವೆಯನ್ನ ಬೇಟೆಯಾಡಿ ಪಾರ್ಟಿ ಮಾಡಿರುವ ಘಟನೆ ನಡೆದಿದೆ. ಸ್ಥಳೀಯರ ಮಾಹಿತಿ ಆಧಾರದ ಮೇಲೆ ಅರಣ್ಯ ಅಧಿಕಾರಿಗಳು ದಾಳಿ ನಡೆಸಿದಾಗ ಬಾಡೂಟ ಮಾಡಲು ಸಿದ್ಧವಾಗಿದ್ದ ೬ ಮಂದಿಯನ್ನು ವಶಕ್ಕೆ ಪಡೆದ್ದಾರೆ.
ಚಿಕ್ಕಮಗಳೂರು ತಾಲೂಕಿನ ಹುಲಿಕಾನು ಸಂಗಮ ಕಾಫಿ ತೋಟದಲ್ಲಿ ಕಡವೆ ಶಿಕಾರಿ ಮಾಡಿ ಎನ್.ಜಿ.ಓ. ತಂಡದ ಸದಸ್ಯರು ಕಳ್ಳಬೇಟೆ ಮಾಡಿ ಮೋಜು-ಮಸ್ತಿಯಿಂದ ಬಾಡೂಟ ನಡೆಸಿದ್ದಾರೆ. ಮುತ್ತೋಡಿ ಸಮೀಪದ ಮೇಲಿನ ಹುಲುವತ್ತಿ ಗ್ರಾಮದ ಸಂಗಂ ಕಾಫಿ ತೋಟದ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಅಲ್ಲೇ ಬಾಡೂಟ ಮಾಡಿದ್ದಾರೆ.
ಈ ಬಗ್ಗೆ ಸ್ಥಳೀಯರು ನೀಡಿದ ಖಚಿತ ಮಾಹಿತಿ ಮೇರೆಗೆ ಪ್ರಾದೇಶಿಕ ಅರಣ್ಯ ವಿಭಾಗದ ಅಧಿಕಾರಿಗಳು ದಾಳಿ ಮಾಡಿ ಮೊಹಮ್ಮದ್ ಶಕೀಲ್ ಸೇರಿದಂತೆ ಒಟ್ಟು ೬ ಮಂದಿಯನ್ನು ಬಂಧಿಸಿ ೮ ಕೆ.ಜಿ.ಕಡವೆ ಮಾಂಸ ಮತ್ತು ಒಂದು ಬಂದೂಕು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಅವರು ಅಡುಗೆಯ ತಪಾಸಣೆ ಕೂಡ ಮಾಡಿದ್ದಾರೆ ಎಂದು ಹೇಳಲಾಗಿದೆ.
ಅಡುಗೆ ಮಾಡುತ್ತಿರುವಾಗ ಅಧಿಕಾರಿ ಗಳು ದಾಳಿ: ಮಂಗಳೂರು , ಬೆಂಗಳೂರು ಮೂಲದ ಪ್ರವಾಸಿಗರು ಜಿಲ್ಲೆಯ ಪ್ರವಾಸಕ್ಕೆ ಬಂದ ವೇಳೆಯಲ್ಲಿ ಅರಣ್ಯಕ್ಕೆ ಹೊಂದಿಕೊಂಡಿರುವ ಕಾಫಿ ತೋಟದಲ್ಲಿ ಅಕ್ರಮವಾಗಿ ಕಡವೆ ಶಿಕಾರಿ ಮಾಡಿ ಮಾಂಸ ದೂಟಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿತ್ತು. ಕಡವೆ ಮಾಂಸ ಸರಬರಾಜಾಗಿದ್ದು, ಅಲ್ಲೇ ಬೇಯಿಸಿ ಅಡುಗೆ ಮಾಡುತ್ತಿರುವಾಗ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಆದರೆ, ಸ್ಥಳದಲ್ಲಿದ್ದ ಎನ್.ಜಿ.ಓ. ತಂಡದ ಸದಸ್ಯರನ್ನ ರಕ್ಷಿಸಿ ಕೇವಲ ಕಡವೆ ಮಾಂಸ ಇಟ್ಟುಕೊಂಡಿದ್ದ ಶಕೀಲ್ ನನ್ನ ಮಾತ್ರ ಬಂಧಿಸಲಾಗಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.
ಸೂಕ್ತ ತನಿಖೆಗೆ ಸ್ಥಳೀಯರಿಂದ ಒತ್ತಾಯ: ಸುಮಾರು ೨೫ ಕೆ.ಜಿ.ಗೂ ಅಧಿಕ ಕಡವೆ ಮಾಂಸದಲ್ಲಿ ಪಾರ್ಟಿ, ಬಾಡೂಟಕ್ಕೂ ಸರಬರಾಜು ಮಾಡಲಾಗಿದೆ. ಉಳಿದ ೮ ಕೆ.ಜಿ.ಹಸಿ ಮಾಂಸ ಮಾತ್ರ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಸ್ಥಳಿಯರು ಅಧಿಕಾರಿಗಳ ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ. ಈ ಕಡವೆ ಬೇಟೆ, ಬಾಡೂಟ, ಮೋಜು-ಮಸ್ತಿ ಹಾಗೂ ಅಕ್ರಮ ಚಟುವಟಿಕೆ ಕುರಿತು ಸಮಗ್ರ ತನಿಖೆಯಾಗಬೇಕು. ಯಾರೇ ಎಷ್ಟೇ ಪ್ರಭಾವಿಗಳಿದ್ದರೂ ಅವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.