ಚಿಕ್ಕಮಗಳೂರು: ಸಂವಿಧಾನ, ಪ್ರಜಾಪ್ರಭುತ್ವದ ರಕ್ಷಣೆಗಾಗಿ ನಡೆಯಲಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ನಗರಸಭೆ ಪೌರಾಯುಕ್ತಾರಾದ ಕೃಷ್ಟಮೂರ್ತಿ ಮತದಾರರಲ್ಲಿ ಮನವಿ ಮಾಡಿದರು.
ಅವರು ಇಂದು ನಗರಸಭೆ ವತಿಯಿಂದ ನಗರದಲ್ಲಿ ಏರ್ಪಡಿಸಲಾಗಿದ್ದ ನನ್ನ ಮತ ನನ್ನ ಹಕ್ಕು ಮತದಾರರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮತದಾರರು ವಿವಿಧ ಪಕ್ಷಗಳು ನೀಡುವ ಆಸೆ ಆಮಿಷಗಳಿಗೆ ಒಳಗಾಗದೆ, ನಿರ್ಭೀತಿಯಿಂದಕಡ್ಡಾಯವಾಗಿ ಮತದಾನ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಸಹಕರಿಸಬೇಕೆಂದು ವಿನಂತಿಸಿದರು.
ಎಲ್ಲಾ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದ್ದು ಬೇಧಭಾವ ಇಲ್ಲದೆ ಮತ ಚಲಾವಣೆ ಮಾಡಬೇಕು ಆ ಮೂಲಕ ಸಂವಿಧಾನ ಕಾಪಾಡಬೇಕೆಂದು ಹೇಳಿದರು.
ನಗರಸಭೆ ಕಾರ್ಮಿಕರು, ಸಿಬ್ಬಂದಿ ಅಧಿಕಾರಿಗಳನ್ನೂಳಗೊಂಡ ಮತದಾರರ ಜಾಗೃತಿ ಜಾಥ ಏರ್ಪಡಿಸಿ ಮತದಾರರಲ್ಲಿ ಮತದ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಈ ಜಾಥದ ಪ್ರಮುಖ ಉದ್ದೇಶ ಎಂದರು.
ಈ ಸಂದರ್ಭದಲ್ಲಿ ಕಚೇರಿ ವ್ಯವಸ್ಥಾಪಕ ರವಿ, ಪರಿಸರ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ತೇಜಸ್ವಿನಿ, ಕಂದಾಯಾಧಿಕಾರಿ ರಮೇಶ್ ನಾಯ್ಡು, ಆರೋಗ್ಯ ಶಾಖೆಯ ಎಲ್ಲಾ ಮುಖಂಡರು, ಮೇಲ್ವಿಚಾರಕರು, ಪೌರಕಾರ್ಮಿಕರು ಉಪಸ್ಥಿತರಿದ್ದರು.