ಮೂಡಿಗೆರೆ: ನಮ್ಮನ್ನಾಳಿದ ಮೂರು ಪಕ್ಷಗಳು ಆದಿ ದ್ರಾವಿಡ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿಲ್ಲ. ಹಾಗಾಗಿ ನಮ್ಮ ಸಮಾಜದ ವ್ಯಕ್ತಿಗಳೆ ಜನಪ್ರತಿನಿಧಿಗಳಾಗಬೇಕು. ಈ ನಿಟ್ಟಿನಲ್ಲಿ ಮೂಡಿಗೆರೆ ಕ್ಷೇತ್ರದಲ್ಲಿ ಸಿಪಿಐ ಪಕ್ಷ ಅಭ್ಯರ್ಥಿ ರಮೇಶ್ ಕೆಳಗೂರು ಅವರು ನಮ್ಮ ಆದಿ ದ್ರಾವಿಡ ಸಮಾಜದವರಾಗಿದ್ದು, ಅವರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಆದಿ ದ್ರಾವಿಡ ಸಮಾಜದ ರಾಜ್ಯ ಕಾರ್ಯದರ್ಶಿ ರಮೇಶ್ ಉಲ್ಲಾಳ ಹೇಳಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆದಿ ದ್ರಾವಿಡ ಸಮಾಜದವರು ಹೆಚ್ಚಾಗಿ ಕೂಲಿ ಕಾರ್ಮಿಕರಾಗಿದ್ದು, ವಾಸಿಸಲು ಮನೆ, ದುಡಿಯಲು ಭೂಮಿ, ಕುಟುಂಬ ನಿರ್ವಹಣೆಗೆ ಕೆಲಸ ನೀಡುವಂತಹ ಮನಸ್ಥಿತಿ ಇಲ್ಲಿವರೆಗೂ ಆಡಳಿತ ನಡೆಸಿದ ಯಾವ ಪಕ್ಷಕ್ಕೂ ಇಲ್ಲ. ಅಲ್ಲದೇ ಸರಕಾರಿ ಸೌಲಭ್ಯಗಳಿಂದ ಕೂಡ ವಂಚಿತರಾಗುತ್ತಿದ್ದಾರೆ. ನಮ್ಮ ಸಮಾಜದ ಜನರು ಗ್ರಾ.ಪಂ, ತಾ.ಪಂ, ಜಿ.ಪಂ, ಎಂಎಲ್ಎಯಂತಹ ಸ್ಥಾನ ಪಡೆದರೆ ಮಾತ್ರ ಸಮಾಜದ ಅಭಿವೃದ್ಧಿ ಕಾಣಲು ಸಾಧ್ಯವಿದೆ. ಹಾಗಾಗಿ ರಾಜ್ಯದಲ್ಲಿ ಸುಳ್ಯಾ, ಮಡಿಕೇರಿ ಹಾಗೂ ಮೂಡಿಗೆರೆ ವಿಧಾನಸಭೆ ಕ್ಷೇತ್ರದಲ್ಲಿ ನಮ್ಮ ಸಮಾಜದ ಅಭ್ಯರ್ಥಿ ಸ್ಪರ್ಧಿಸಿದ್ದು, ಅವರಿಗೆ ಸಂಪೂರ್ಣ ಬೆಂಬಲ ಸಮುದಾಯದ ಜನರು ನೀಡಬೇಕೆಂದು ಮನವಿ ಮಾಡಿದರು.
ರಾಜ್ಯ ಉಪಾಧ್ಯಕ್ಷ ಸುರೇಶ್ ಬಲ್ಲಳಬಾಗ್ ಮಾತನಾಡಿ, ಮೂಡಿಗೆರೆ ಕ್ಷೇತ್ರದಲ್ಲಿ ಆದಿ ಡ್ರಾವಿಡ ಸಮಾಜ ಎಲ್ಲಾ ಹೋಬಳಿಯಲ್ಲಿಯೂ ಇದೆ. ಅದರ ಮುಖಾಂತರ ನಮ್ಮ ಸಮಾಜದ ಅಭ್ಯರ್ಥಿ ರಮೇಶ್ ಕೆಳಗೂರು ಅವರನ್ನು ಗೆಲ್ಲಿಸಲು ಶಕ್ತಿ ಮೀರಿ ಪ್ರಯತ್ನಿಸಲಾ ಗುವುದು ಎಂದು ಹೇಳಿದರು. ಆದಿ ಡ್ರಾವಿಡ ಸಮಾಜದ ರಾಜ್ಯ ಉಪಾಧ್ಯಕ್ಷ ಎ.ಎಸ್.ಮಾಣಪ್ಪ ಅಡ್ತಾಳ್, ಕಳಸ ತಾಲೂಕು ಅಧ್ಯಕ್ಷ ಮೋಹನ್ ಹಿರೇಬೈಲ್, ಮುಖಂಡರಾದ ಸಂತೋಷ್ ಡಿ.ಸಾಲಿಯಾನ್, ರಾಜು ಗಬ್ಗಲ್, ಅಶೋಕ್ ಗಬ್ಗಲ್ ಮತ್ತಿತರರಿದ್ದರು.