ಜಯಪುರ: ಪತ್ರಿಕೋದ್ಯಮ ಸಂವಿಧಾನದ ನಾಲ್ಕನೆ ಅಂಗವಾಗಿದ್ದು, ಪತ್ರಕರ್ತರು ಸಮಾಜದಲ್ಲಿನ ನೊಂದವರ, ಬಡವರ ದ್ವನಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ ಎಂ ರಾಜಶೇಖರ್ ಹೇಳಿದರು.
ಜಯಪುರದ ಬಸ್ ನಿಲ್ದಾಣದಲ್ಲಿರುವ ಗ್ರಾಮ ಪಂಚಾಯಿತಿಯ ಮಳಿಗೆಯಲ್ಲಿ ಜಯಪುರ ಪತ್ರಕರ್ತರ ಸಂಘದ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತ ನಿರ್ಭೀತಿಯಿಂದ ನಿಷ್ಪಕ್ಷಪಾತವಾದ ಸುದ್ದಿಗಳನ್ನು ಮಾಡುವ ಸಂಧರ್ಭದಲ್ಲಿ ಅನೇಕ ಅಡ್ಡಿ ಆತಂಕಗಳನ್ನು ಎದುರಿಸಬೇಕಾಗಿದ್ದು, ಯಾವುದೇ ಪ್ರತಿಫ ಅಪೇಕ್ಷೆ ಇಲ್ಲದೆ ಸಮಾಜದ ಒಳಿತು, ಕೆಡುಕನ್ನು ಸುದ್ದಿ ಮಾಡುವ ಪತ್ರಕರ್ತರ ಕೆಲಸ ಸುಲಬದ್ದಲ್ಲ. ಸಮಾಜ ಹಾಗೂ ಸರ್ಕಾರ ಪತ್ರಕರ್ತರ ಈ ಸೇವೆಯನ್ನು ಗುರುತಿಸ ಬೇಕು. ಕೆಲವು ಬಾರಿ ಪ್ರಾಣಾಪಾಯಗಳನ್ನು ಎದುರಿಸಿ ವರದಿ ಮಾಡಬೇಕಾದ ಪರಿಸ್ಥಿತಿ ಇದ್ದು, ಇಂದು ಪತ್ರಕರ್ತರು ಅಧಿಕಾರ ಶಾಹಿಗಳು, ಸಮಾಜ ವಿರೋಧಿ ಗಳಿಂದ ಸಾಕಷ್ಟು ತೊಂದರೆಗಳನ್ನು ಅನುಭವಿ ಸುತ್ತಿದ್ದಾರೆ. ಸರ್ಕಾರ ಪತ್ರಕರ್ತರು ಅಗತ್ಯಕ್ಕೆ ಸ್ಪಂದಿಸಬೇಕು ಎಂದರು.
ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ಕಿಬ್ಳಿ ಪ್ರಸನ್ನ ಕುಮಾರ್ ಮಾತನಾಡಿ, ಈ ಭಾಗದ ಜನರ ಸಮಸ್ಯೆಗಳಿಗೆ ಬೆಳಕಾಗಬೇಕು, ದಬ್ಬಾಳಿಕೆಗೆ ಒಳಗಾದ ನೊಂದ ಬಡವರು, ನಿರ್ಗತಿಕರಿಗೆ ನ್ಯಾಯ ಕೊಡಿಸಬೇಕು ಮತ್ತು ಜನರ ಸಮಸ್ಯೆಗಳನ್ನು ಸರ್ಕಾರಕ್ಕೆ ಮುಟ್ಟಿಸಬೇಕೆನ್ನುವ ದೃಷ್ಟಿಯಿಂದ ಪತ್ರಕರ್ತರು ಕೆಲಸ ಮಾಡುತ್ತಿದ್ದು, ಜಯಪುರದಲ್ಲಿನ ಪತ್ರಕರ್ತರ ಸಂಘದ ಕಚೇರಿ ಪತ್ರಕರ್ತರ ಜನಪರ ಕೆಲಸಕ್ಕೆ ಹೆಚ್ಚಿನ ಶಕ್ತಿ ತುಂಬಲಿದೆ. ಹೋಬಳಿ ವ್ಯಾಪ್ತಿಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಈ ಭಾಗದ ಜನತೆ ಪತ್ರಕರ್ತರ ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ನಂತರ ಜಿ.ಪಂ.ಮಾಜಿ ಅಧ್ಯಕ್ಷ ಎಚ್.ಎಂ.ಸತೀಶ್ ಮಾತನಾಡಿ, ಕೆಲ ಸಂದರ್ಭಗಳಲ್ಲಿ ಸಾಮಾಜಿಕ ಆಭದ್ರತೆ ಉಂಟಾದಾಗ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತವೆ. ಸಮಸ್ಯೆ, ವಿದ್ಯಮಾನಗಳನ್ನು ಗ್ರಹಿಸುವ ಅಪಾರ ಕಾಳಜಿ, ಜ್ಞಾನ ಪತ್ರಕರ್ತರ ಮೇಲಿದೆ. ವೈಚಾರಿಕತೆ, ವಿಮಷರ್ಷಾತ್ಮಕ ದೃಷ್ಠಿಕೋನ, ಗಹನವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಛಲ, ಜನ ಬಳಕೆ ಪತ್ರಕರ್ತರಿಗಿದ್ದು, ಸರಕಾರ, ಇಲಾಖೆ ಹಾಗೂ ಸಂಘಟನೆಗಳ ನಡುವೆ ಸೂತ್ರದಾರನಂತೆ ಕಾರ್ಯ ನಿರ್ವಹಿಸುತ್ತಿರುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ನುಡಿಚಿತ್ರ ಸಂಗ್ರಾಹಕ ಶಂ.ನ.ಶೇಷಗಿರಿ, ಜಿಲ್ಲಾ ಪತ್ರಕರ್ತರ ಸಂಘದ ಖಜಾಂಚಿ ರಾಜೇಶ್ ಆಲ್ದೂರ್, ಗ್ರಾ. ಪಂ ಉಪಾದ್ಯಕ್ಷ ಕರುಣಾಕರ, ಕೊಪ್ಪ ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಮಣಿಕಂಠನ್ ಕಂದಸ್ವಾಮಿ, ಉಪಾದ್ಯಕ್ಷ ರಮೇಶ್, ಪತ್ರಕರ್ತರ ಜಯಪುರ ಕಚೇರಿಯ ಸಂಯೋಜಕ ಪ್ರದೀಪ್ ಹೆಬ್ಬಾರ್, ಪತ್ರಕರ್ತರ ಸಂಘದ ಅಭಿನವ, ಗಿರಿಜಪ್ರಸಾದ್, ಸತೀಶ್ ಜೈನ್, ಶಿವಾನಂದ ಭಟ್, ರವಿಕಾಂತ್, ಸಂಜೀವ, ನಾಗರಾಜ್, ಪ್ರವೀಣ್, ಜಗದೀಶ್, ಗೋಪಾಲ್ ಹಾಗೂ ಇತರರಿದ್ದರು.