ಚಿಕ್ಕಮಗಳೂರು: ಕೆಲಸದ ಒತ್ತಡದ ಕಾರಣದಿಂದ ಬಿಇಓ ಕಚೇರಿಯ ವ್ಯವಸ್ಥಾಪಕ ಅಧಿಕಾರಿ ಕಚೇರಿಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಸೋಮವಾರ (ಜ.1) ಬೆಳಿಗ್ಗೆ ನಡೆದಿದೆ.
ಕಡೂರು ತಾಲೂಕು ಮೂಲದ ನಿಂಗನಾಯಕ (57) ಕಚೇರಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವ್ಯವಸ್ಥಾಪಕ ಎಂದು ತಿಳಿದು ಬಂದಿದೆ. ಬಿಇಓ ಕಚೇರಿಯಲ್ಲೇ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದ ನಿಂಗನಾಯಕ ಕೆಲಸದ ಒತ್ತಡದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸೋಮವಾರ ಬೆಳಗ್ಗೆ ಮನೆಗೆ ಹಾಲು ತಂದುಕೊಟ್ಟ ನಿಂಗನಾಯಕ ಮನೆಯಲ್ಲಿ ವಾಕಿಂಗ್ ಹೋಗಿ ಬರ್ತೀನಿ ಅಂತ ಕಚೇರಿ ಕೀ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.