ಚಿಕ್ಕಮಗಳೂರು: ಬಿಜೆಪಿ ಸರ್ಕಾರದಲ್ಲಿ ನಡೆದಿರುವ ವ್ಯಾಪಕ ಭ್ರಷ್ಟಾಚಾರದಿಂದಾಗಿ ರಾಜ್ಯದ ಪ್ರಗತಿ ಕುಂಠಿತವಾಗಲು ಕಾರಣವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಆರೋಪಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಕಾರ್ಯಕರ್ತರ ಸಮಾವೇಶ ಮಾ.೨೩ ರಂದು ಆಯೋಜಿಸುವ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಎಂಬುದು ಎಲ್ಲಾ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ನಡೆಯುತ್ತಿರುವುದರಿಂದ ಜನರು ಬೇಸತ್ತು ಹೋಗಿದ್ದಾರೆ. ಪಿಎಸೈ ಹಗರಣ, ಉಪನ್ಯಾಸಕರ ನೇಮಕ ಪರೀಕ್ಷೆ ಹಗರಣ, ಗುತ್ತಿಗೆ ನೀಡುವಲ್ಲಿ ೪೦ ಪರ್ಸೆಂಟ್ ಹಗರಣ ಸೇರಿದಂತೆ ಭ್ರಷ್ಟಾಚಾರಕ್ಕೆ ಮಿತಿ ಇಲ್ಲದಂತಾಗಿದೆ ಎಂದು ಹೇಳಿದರು.
ಶಾಸಕ ಮಾಡಾಳು ವಿರೂಪಕ್ಷಪ್ಪ ಅವರ ಮನೆಯಲ್ಲಿ ಕೋಟಿಗಟ್ಟಲೆ ಅಕ್ರಮ ಹಣ ಲೋಕಾಯುಕ್ತಕ್ಕೆ ಸಿಕ್ಕಿದೆ. ಲೋಕಾಯುಕ್ತದಿಂದ ತಪ್ಪಿಸಿಕೊಂಡಿದ್ದ ವಿರೂಪಕ್ಷಪ್ಪ ಅವರನ್ನು ಬಿಜೆಪಿ ಕಾರ್ಯಕರ್ತರು ಮೆರವಣಿಗೆ ಮಾಡಿರುವುದು ಭ್ರಷ್ಟಾಚಾರವನ್ನು ಬೆಂಬಲಿಸಿದಂತಾಗಿದೆ. ಅವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವಲ್ಲಿ ಸರ್ಕಾರ ಪೂರ್ಣವಾಗಿ ವಿಫಲವಾಗಿರುವುದು ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ ಎಂದು ಟೀಕಿಸಿದರು.
ಮಾ೨೩ ರಂದು ನಗರದಲ್ಲಿ ಆಯೋಜಿಸುತ್ತಿರುವ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಕಾರ್ಯಕರ್ತರ ಸಮಾವೇಶವನ್ನು ಅತ್ಯಂತ ಯಶಸ್ವಿಯಾಗಿ ನಡೆಸಬೇಕಾಗಿದೆ. ಆ ಮೂಲಕ ಜನರನ್ನು ಜಾಗೃತಗೊಳಿಸುವ ಕಾರ್ಯ ನಡೆಯಬೇಕು. ಸಮಾವೇಶ ಅದ್ಧೂರಿ ಮತ್ತು ಅರ್ಥಪೂರ್ಣವಾಗಿ ನಡೆಸಲು ಜಿಲ್ಲಾ ಕಾಂಗ್ರೆಸ್ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತದೆ ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮತಿ ಅಧ್ಯಕ್ಷ ಸೈಯಾದ್ ಹನೀಫ್ ಮಾತನಾಡಿ, ಚುನಾವಣೆ ಸಮೀಪಸುತ್ತಿರುವುದನ್ನು ಕೋಮುವಾದ ಬಿಜೆಪಿ ಜನರನ್ನು ಮರಳು ಮಾಡುವ ಕೆಲಸದಲ್ಲಿ ನಿರತವಾಗಿದೆ. ಸಂವಿಧಾನ ರಕ್ಷಣೆಗಾಗಿ ಎಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಆಡಳಿತಕ್ಕೆ ತರಬೇಕಾಗಿದೆ ಎಂದು ಸಲಹೆ ಮಾಡಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ, ಸಂವಿಧಾನ ಮತ್ತು ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಕಾಂಗ್ರೆಸ್ ಪಕ್ಷದ ಸಿದ್ಧಾಂತವಾಗಿದೆ. ಬಿಜೆಪಿಯವರು ಕೋಮುವಾದ, ಕೇಸರಿ ಶಾಲು ಮತ್ತು ಸಾಂಸ್ಕೃತಿಕ ರಾಷ್ಟ್ರೀಯತೆ ಸಿದ್ಧಾಂತ ಎಂದು ಹೇಳಿಕೊಂಡು ಸಂವಿಧಾನ ಬದಲಾಯಿಸುವ, ಅಂಬೇಡ್ಕರ್ ಅವರಿಗೆ ಅವಮಾನಗೊಳಿಸುವ, ಮೀಸಲಾತಿ ರದ್ದುಗೊಳಿಸುವ ಬೆದರಿಕೆಯನ್ನು ಹಾಕುತ್ತಿದ್ದಾರೆ. ಪರಿಶಿಷ್ಟರು ಜಾಗೃತರಾಗಬೇಕು. ಜೊತೆಗೆ ಸಂಘಟಿತರಾಬೇಕು. ಒಡೆದಾಳುವ ನೀತಿಯ ವಿರುದ್ಧ ಎಚ್ಚರಿಕೆಯಿಂದ ಇರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕ ಅಧ್ಯಕ್ಷ ಎಂ.ಮಲ್ಲೇಶ್ ಮಾತನಾಡಿ, ಸಮಾವೇಶ ನಡೆಸಲು ಈಗಾಗಲೇ ಅನೇಕ ಮುಖಂಡರೊಂದಿಗೆ ಸಮಾಲೋಚಿಸಲಾಗಿದೆ. ಶಾಸಕ ಪ್ರಿಯಾಂಕ ಖರ್ಗೆ ಅವರಿಂದ ದಿನಾಂಕವನ್ನು ಪಡೆಯಲಾಗಿದೆ. ಮಾಜಿ ಸಚಿವರಾದ ಕೆ.ಎಚ್.ಮುನಿಯಪ್ಪ ಮತ್ತು ಆಚಿಜನೇಯ ಅವರನ್ನು ಸಮಾವೇಶಕ್ಕೆ ಆಹ್ವಾನಿಸಲು ದಿನಾಂಕ ನಿಗದಿಸಲಾಗಿದೆ. ಸಮಾವೇಶ ಹಬ್ಬದ ರೀತಿಯಲ್ಲಿ ನಡೆಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಸಮಾವೇಶದ ಅಂಗವಾಗಿ ನಗರದಲ್ಲಿ ಬೈಕ್ ರ್ಯಾಲಿ ನಡೆಸಲು ಮುಖಂಡ ರಾಕೇಶ್ ನೀಡಿದ ಸಲಹೆಯನ್ನು ಅನುಮೋದಿಸಿದ ಸಭೆ, ಬೈಕ್ ರ್ಯಾಲಿಯನ್ನು ಅದ್ಧೂರಿಯಾಗಿ ನಡೆಸಲು ನಿರ್ಧರಿಸಲಾಯಿತು. ಮುಖಂಡರಾದ ಹಾಲಪ್ಪ, ಸಖರಾಯಪಟ್ಟಣದ ಮೋಹನ್ಕುಮಾರ್ ನಾಯ್ಕ, ಈಶ್ವರ್, ನವರಾಜ್, ರೋಹಿತ್, ಎಚ್.ಕೆ.ಜಯಣ್ಣ, ತರೀಕೆರೆ ಮಂಜುನಾಥ್, ಈರಯ್ಯ, ಎಂ.ಡಿ.ಬಸವಯ್ಯ, ಹೇಮಣ್ಣ, ಬಾಲಕೃಷ್ಣ, ಮೂಡಿಗೆರೆ ಸುದೀರ್ ಮತ್ತಿತರರು ನೀಡಿದ ಸಲಹೆಯನ್ನು ಸಭೆ ಸ್ವೀಕರಿಸಿತು.
ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕ ಅಧ್ಯಕ್ಷ ರಘು, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹಿರೇಮಗಳೂರು ರಾಮಚಂದ್ರ, ಕಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಸೂರು ಚಂದ್ರಮೌಳಿ ಮತ್ತಿತರರು ಮಾತನಾಡಿದರು.
ಜಿಲ್ಲಾ ಪ್ರಚಾರ ಸಮಿತಿ ಕಡೂರು ಬ್ಲಾಕ್ ಸಂಯೋಜಕರಾಗಿ ನೇಮಕಗೊಂಡಿರುವ ಮಚ್ಚೇರಿ ಎಂ.ಕೆ.ಮಹೇಶ್ವರಪ್ಪ, ಶೃಂಗೇರಿ ಬ್ಲಾಕ್ ಕಾಂಗ್ರೆಸ್ ಸಂಯೋಜಕರಾಗಿ ನೇಮಕಗೊಂಡಿರುವ ರಮೇಶ್ ಭಟ್ ಅವರಿಗೆ ನೇಮಕಾಗಿ ಆದೇಶ ಪತ್ರವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ವಿತರಿಸಿದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಎಂ.ಡಿ.ಬಸವಯ್ಯ, ಹೇಮಣ್ಣ, ಮಂಜುನಾಥ್, ಸಖರಾಯಪಟ್ಟಣ ಬ್ಲಾಕ್ ಎಸ್ಸಿ ಘಟಕ ಅಧ್ಯಕ್ಷರಾಗಿ ಮೊಹನಕುಮಾರ್ ನಾಯ್ಕ, ಆಲ್ದೂರು ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕ ಅಧ್ಯಕ್ಷರಾಗಿ ಈರಯ್ಯ, ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸುದೀರ್, ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕ ಅಧ್ಯಕ್ಷರಾಗಿ ರಘು, ಇತರೆ ಪದಾಧಿಕಾರಿಗಳಾಗಿ ಈಶಯ್ಯ, ಬಾಲಕೃಷ್ಣ, ರಾಕೇಶ್ ಇತರರಿಗೆ ನೇಮಕಾತಿ ಆದೇಶ ಪತ್ರ ನೀಡಲಾಯಿತು. ಸಮಾವೇಶದ ಸಿದ್ಧತೆಗಳಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕ ಜಂಟಿ ಕಾರ್ಯದರ್ಶಿ ಎಚ್.ಸಿ.ಗಂಗಾಧರ್ ಸ್ವಾಗತಿಸಿ, ನಿರೂಪಿಸಿದರು.