ಚಿಕ್ಕಮಗಳೂರು: ಚುನಾವಣೆ ಹೊತ್ತಲ್ಲಿ ನನ್ನ ವಿರುದ್ಧ ಕೆಲವರು ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಿದ್ದು, ಎಲ್ಲವೂ ಕೂಡಾ ಸತ್ಯಕ್ಕೆ ದೂರವಾಗಿವೆ ಎಂದು ಮಾಜಿ ಶಾಸಕ ಜಿ.ಹೆಚ್ ಶ್ರೀನಿವಾಸ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಪ್ರತಿಕ್ರಿಯಿಸಿದ ಅವರು, ಕಳೆದ ಕೆಲ ದಿನಗಳಿಂದ ಮಾಜಿ ಶಾಸಕ ಟಿ.ಹೆಚ್ ಶಿವಶಂಕರಪ್ಪ ಸೇರಿದಂತೆ ಕೆಲವರು ನನ್ನ ಬಗ್ಗೆ ಒಂದಷ್ಟು ಸುಳ್ಳು ಮಾಹಿತಿಗಳನ್ನು ಹೇಳುತ್ತಾ ಅಪಪ್ರಚಾರ ಮಾಡುವುದರೊಂದಿಗೆ ಅಲ್ಲಲ್ಲಿ ಗುಂಪುಗಾರಿಕೆ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ವರಿಷ್ಠರಲ್ಲಿ ನನ್ನ ಬಗ್ಗೆ ತಪ್ಪು ಮನೋಭಾವನೆ ಮೂಡುವಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಕಳೆದವಾರ ಈ ಕುರಿತು ನಾಲ್ಕೈದು ಮಂದಿ ಸೇರಿ ಪಟ್ಟಣದ ಟೌನ್ ಕ್ಲಬ್ ನಲ್ಲಿ ಸಭೆ ನಡೆಸಿದ್ದಾರೆ. ಆ ಸಭೆಗೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಟಿಕೆಟ್ ಆಕಾಂಕ್ಷಿಗಳು ಹಾಗೂ ಕುರುಬ ಸಮುದಾಯದ ಮುಖಂಡರುಗಳು ಯಾರೂ ಕೂಡಾ ಭಾಗವಹಿಸಿಲ್ಲ, ಆದರೂ ಕೂಡ ಕಾಂಗ್ರೆಸ್ ಪಕ್ಷದ ಮುಖಂಡರು, ಕುರುಬ ಸಮುದಾಯದ ಮುಖಂಡರುಗಳು ಎಲ್ಲರೂ ಒಟ್ಟಾಗಿ ನಿರ್ಣಯ ತೆಗೆದುಕೊಳ್ಳುವ ಮೂಲಕ ಮಾಜಿ ಶಾಸಕ ಜಿ.ಹೆಚ್ ಶ್ರೀನಿವಾಸ್ ಗೆ ಟಿಕೆಟ್ ನೀಡಿದರೆ ಪಕ್ಷೇತರವಾಗಿ ನಿಂತು ಸೋಲಿಸುತ್ತೇವೆ, ಅವರನ್ನು ಹೊರತುಪಡಿಸಿ ಬೇರೆ ಯಾರಿಗೆ ಟಿಕೆಟ್ ನೀಡಿದರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಯಾರೋ ಒಬ್ಬರು ಹೋದ ತಕ್ಷಣ ಇಡೀ ಕಾಂಗ್ರೆಸ್ ಪಕ್ಷ, ಇಡೀ ಕುರುಬ ಸಮುದಾಯ ಆಗಲಿಕ್ಕೆ ಸಾಧ್ಯವಿಲ್ಲ. ಆದರೂ ಕೂಡಾ ಇಡೀ ಸಮುದಾಯ ನಿರ್ಧಾರ ಮಾಡಿದೆ ಎಂದು ಹೇಳುವ ಮೂಲಕ ಸಮುದಾಯದ ಜನರನ್ನು ಹಾಗೂ ಕಾರ್ಯಕರ್ತರನ್ನು ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಅವರು ಹೇಳುವಂತೆ ಕುರುಬ ಸಮುದಾಯ ನನ್ನ ವಿರುದ್ಧ ಇಲ್ಲ ಶೇ. ೯೯.೯% ಕುರುಬ ಸಮುದಾಯ ನನ್ನ ಬೆಂಬಲಕ್ಕಿದೆ. ಪಕ್ಷದಿಂದ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿರುವ ಎಲ್ಲ ೧೩ ಮಂದಿ ಆಕಾಂಕ್ಷಿಗಳಲ್ಲಿ ಒಂದಿಬ್ಬರನ್ನು ಹೊರತುಪಡಿಸಿ ಎಲ್ಲರೂ ಕೂಡಾ ಒಟ್ಟಾಗಿದ್ದೇವೆ ಎಲ್ಲ ಗ್ರಾಮ ಪಂಚಾಯ್ತಿಗಳಿಗೆ ಹೋಗಿ ಸಭೆ ಮಾಡಿ ಒಟ್ಟಾಗಿ ಕೆಲಸ ಮಾಡುವ ಭರವಸೆ ನೀಡಿದ್ದೇವೆ.
ಆದರೂ ನಮಗೆ ಆಗದ ಕೆಲವರು ಈ ರೀತಿಯಾಗಿ ಅಪಪ್ರಚಾರ ಮಾಡುತ್ತಿದ್ದು ಚುನಾವಣೆ ಸಮಯದಲ್ಲಿ ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಪಕ್ಷದ ಕಾರ್ಯಕರ್ತರು, ಮತದಾರರು ಹಾಗೂ ಕ್ಷೇತ್ರದ ಜನತೆ ಯಾರೂ ಕೂಡಾ ಈ ರೀತಿಯ ಹೇಳಿಕೆಗಳಿಗೆ ಕಿವಿಗೊಡದೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಪಕ್ಷ ಯಾರಿಗೇ ಟಿಕೆಟ್ ನೀಡಿದರೂ ಪ್ರಾಮಾಣಿಕವಾಗಿ ಕೆಲಸ ಮಾಡೋಣ. ಅವರುಗಳು ಹೇಳುತ್ತಿರುವಂತೆ ತರೀಕೆರೆ ಕ್ಷೇತ್ರದಲ್ಲಿ ಯಾವುದೇ ರೀತಿಯ ಅಸಮದಾನವಾಗಲಿ ಅಥವಾ ಆಂತರಿಕ ಬೇಗುದಿಯಾಗಲಿ ಇಲ್ಲ, ಅವರುಗಳು ಹೇಳುತ್ತಿರುವುದು ಸತ್ಯಕ್ಕೆ ದೂರವಾದದ್ದು ಎಂದು ಸ್ಪಷ್ಟನೆ ನೀಡಿದರು.