ಚಿಕ್ಕಮಗಳೂರು: ಚಿಕ್ಕಮಗಳೂರು ವೃತ್ತ ಕೊಪ್ಪ ಪ್ರಾದೇಶಿಕ ವಲಯ ಹಾಗೂ ಭದ್ರಾ ಹುಲಿ ಸಂರಕ್ಷಿತ ವಿಭಾಗಗಳ ವ್ಯಾಪ್ತಿಯಲ್ಲಿ ಅರಣ್ಯ ಅಂಚಿನಲ್ಲಿರುವ ಗ್ರಾಮಗಳಿಗೆ ಕಾಡಾನೆ, ಹುಲಿ, ಕಾಡೆಮ್ಮೆ ಮತ್ತಿತರೆ ವನ್ಯಜೀವಿಗಳ ಉಪಟಳದಿಂದ ಮಾನವ ಪ್ರಾಣ ಹಾನಿ, ಬೆಳೆ ನಷ್ಟ ಹಾಗೂ ಇತರೆ ಸಮಸ್ಯೆಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಆನೆ ಕಾರ್ಯಪಡೆಯನ್ನು ಮೂಡಿಗೆರೆಯಲ್ಲಿ ಸ್ಥಾಪಿಸಲಾಗಿದೆ,
ಮೂಡಿಗೆರೆ ಕೇಂದ್ರಸ್ಥಾನವಾಗಿ ಕಾರ್ಯಾಚರಣೆ ಮಾಡುತ್ತಿರುವ ಆನೆ ಕಾರ್ಯಪಡೆಯ ವಿವಿಧ ಘಟಕಗಳನ್ನು ದೇವವೃಂದ, ಮೂಡಿಗೆರೆ, ಕುಂದೂರು ಹಾಗೂ ಆಲ್ದೂರಿನಲ್ಲಿ ಸ್ಥಾಪಿಸಲಾಗಿದ್ದು, ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಸದರಿ ಕಾರ್ಯಪಡೆ ಅಧಿಕಾರಿ ಸಿಬ್ಬಂದಿ ನಿರತರಾಗಿದ್ದಾರೆ.
ಉಪಟಳ ನೀಡುತ್ತಿರುವ ಕಾಡು ಪ್ರಾಣಿಗಳನ್ನು ಸೆರೆಹಿಡಿದು ವಿವಿಧ ಅರಣ್ಯ ಹಾಗೂ ಶಿಬಿರಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಪ್ರತಿದಿನ ರೈತರ ಹೊಲಗದ್ದೆಗಳಿಗೆ ವನ್ಯಪ್ರಾಣಿಗಳು ದಾಳಿ ಮಾಡಿದಾಗ, ಸದರಿ ಪ್ರಾಣಿಗಳನ್ನು ಕಾಡಿಗೆ ಹಿಮ್ಮೆಟ್ಟಿಸಲಾಗುತ್ತಿದೆ.
ಸದರಿ ಕಾರ್ಯಚರಣೆಗೆ ಅನುಕೂಲವಾಗುವಂತೆ ಮೂಡಿಗೆರೆಯಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಿ, ಕಾರ್ಯಪಡೆ ಸಹಾಯವಾಣಿ 7204004261 ಯನ್ನು ಸಾರ್ವಜನಿಕರ ಮಾಹಿತಿಗಾಗಿ ನೀಡಲಾಗಿದ್ದು, ಸ್ವೀಕೃತವಾದ ಎಲ್ಲಾ ಕರೆಗಳನ್ನು ದಾಖಲಿಸಿ, ಸೂಕ್ತವಾಗಿ ಸ್ಪಂದಿಸಲಾಗುತ್ತಿದೆ.
ಮಾಹಿತಿ ಫಲಕ ಅಳವಡಿಕೆ: ಆನೆ ಕಾರ್ಯಪಡೆ ಕಾಡಾನೆ ಹಾಗೂ ಇನ್ನಿತರ ವನ್ಯಮೃಗಗಳ ಚಲನ ವಲನದ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲು ಆಯ್ದ ಸ್ಥಳಗಳಲ್ಲಿ ಎಲೆಕ್ಟ್ರಾನಿಕ್ ವಿದ್ಯುನ್ಮಾನ ಮಾಹಿತಿ ಫಲಕಗಳನ್ನು ಆಳವಡಿಸಲಾಗಿದೆ. ಮುಂದುವರೆದು ಕಾಡಾನೆಗಳ ಚಲನವಲನಗಳನ್ನು ಪತ್ತೆ ಹಚ್ಚಿ, ಬೃಹತ್ ಕಿರು ಸಂದೇಶ ಮೂಲಕ ಮೂಲಕ ಪ್ರದೇಶದಲ್ಲಿನ ಎಲ್ಲಾ ಸ್ಥಳೀಯ ರೈತರಿಗೆ, ಸಾರ್ವಜನಿಕರಿಗೆ ಜನಪ್ರತಿನಿಧಿಗಳಿಗೆ ಮಾಹಿತಿಯನ್ನು ನೀಡಲಾಗುತ್ತಿದೆ.
ಕಾಡಾನೆ ಹಾಗೂ ಇತರೆ ವನ್ಯಜೀವಿಗಳ ಸಮಸ್ಯೆ ಇರುವಂತಹ ಪ್ರದೇಶಗಳಲ್ಲಿನ ಎಲ್ಲಾ ಶಾಸಕರು ಹಾಗೂ ಜನ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ, ಸದರಿಯವರ ಸಮನ್ವಯದೊಂದಿಗೆ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುತ್ತದೆ, ಮಾನವ ಪ್ರಾಣಿ ಸಂಘರ್ಷವನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಲಾಖೆಯೊಂದಿಗೆ ಚಿಕ್ಕಮಗಳೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ ಕೂಡಾ ಸಹಕಾರ ನೀಡುತ್ತಿವೆ.
ಕಾಡಾನೆ ಹಾವಳಿ ತಡೆಯಲು ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಆಧುನಿಕ / ವೈಜ್ಞಾನಿಕ ಸಲಕರಣಿಗಳು ಹಾಗೂ ತಂತ್ರಗಳನ್ನು ಬಳಸಲಾಗುತ್ತಿದೆ. ಆಯ್ದ ಪ್ರದೇಶಗಳಲ್ಲಿ ಮಾನವ ವನ್ಯಜೀವಿ ಸಂಘರ್ಷ ಕಡಿಮೆ ಮಾಡಲು ಸೂಕ್ತ ತಡೆಗೋಡೆಗಳನ್ನು (ರೈಲ್ವೆ ಹಳಿ ಬ್ಯಾರಿಕೇಡ್, ಸೋಲಾರ್ ಟೆಂಟಕಲ್ ಫೆನ್ಸಿಂಗ್, ಆನೆ, ಕಂದಕ ಹಾಗೂ ಇತರೆ) ನಿರ್ಮಿಸಲಾಗುತ್ತಿದೆ.
ಆನೆ ಕಾರ್ಯಪಡೆ ಹಾಗೂ ಸ್ಥಳೀಯ ಅರಣ್ಯ ಅಧಿಕಾರಿಗಳ ಸಮನ್ವಯದೊಂದಿಗೆ ಸಾರ್ವಜನಿಕರಲ್ಲಿ ಜನ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರ ಅಂಗವಾಗಿ ಕಾಡು ಪ್ರಾಣಿಗಳ ಸಮಸ್ಯೆ ಇರುವಂತಹ ಗ್ರಾಮಗಳಲ್ಲಿ ಹಾಗೂ ಶಾಲಾ ಕಾಲೇಜುಗಳಲ್ಲಿ ಜನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಬೀದಿ ನಾಟಕ, ಕಾರ್ಯಗಾರ, ಭಿತ್ತಿಪತ್ರ, ಜಾಥಗಳ ಮೂಲಕ ಅರಿವು ಮೂಡಿಸುವ ಪ್ರಯತ್ನಗಳನ್ನು ಸಹ ಮಾಡಲಾಗುತ್ತಿದೆ. ಸರ್ಕಾರ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಕಾಲ ಕಾಲಕ್ಕೆ ಜಿಲ್ಲೆಗೆ ಭೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸ್ಥಳೀಯ ಅಧಿಕಾರಿ, ಸಿಬ್ಬಂದಿ ಹಾಗೂ ಆನೆ ಕಾರ್ಯಪಡೆಯ ಸಿಬ್ಬಂದಿಗಳ ಕಾರ್ಯ ವೈಖರಿಯನ್ನು ಪರಿಶೀಲಿಸುತ್ತಿದ್ದಾರೆ.
ಮುಂದುವರೆದು ಜಿಲ್ಲೆಯ ಅರಣ್ಯ, ಪ್ರದೇಶಗಳಲ್ಲಿ, ಕಾಡ್ಗಿಚ್ಚು, ತಡೆಯುವ ಹಾಗೂ ನಿರ್ವಹಿಸುವ ನಿಟ್ಟಿನಲ್ಲಿ ಬೆಂಕಿ ಪಥಗಳ ನಿರ್ಮಾಣ ಹಾಗೂ ನಿರ್ವಹಣೆ ಮಾಡಲಾಗುತ್ತಿದ್ದು, ಸೂಕ್ಷ್ಮ ಪುದೇಶಗಳಲ್ಲಿ ಬೆಂಕಿ ಕಾವಲುಗಾರರನ್ನು ಈಗಾಗಲೇ ನೇಮಿಸಿಕೊಳ್ಳಲಾಗಿದೆ.
ಮುಖ್ಯಮಂತ್ರಿಯವರು ಕಾಲಕಾಲಕ್ಕೆ ನೀಡುವ ನಿರ್ದೇಶನಗಳನ್ನು ಪಾಲಿಸುತ್ತಾ, ಇಲಾಖೆಯ ವಿವಿಧ ಮಟ್ಟದ ಅಧಿಕಾರಿ, ಸಿಬ್ಬಂದಿ ವರ್ಗದವರು ಮಾನವ – ಪ್ರಾಣಿ ಸಂಘರ್ಷ ಹಾಗೂ ಬೆಂಕಿ ತಡೆಗಟ್ಟುವ ನಿಟ್ಟಿನಲ್ಲಿ ಸತತ ಪ್ರಯತ್ನವನ್ನು ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಮಾಹಿತಿ ಹಂಚಿಕೊಂಡು ಸಿಬ್ಬಂದಿಗೆ ಸಹಕಾರ ನೀಡಬೇಕು ಎಂದು ಚಿಕ್ಕಮಗಳೂರು ಅರಣ್ಯ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಸಿದ್ರಾಮಪ್ಪ ಎಂ.ಸಿ. ಮನವಿ ಮಾಡಿದ್ದಾರೆ.