ಚಿಕ್ಕಮಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರಿಗೆ ಮುಸ್ಲಿಂ ಜನ್ಮ ಬೇಕೆನ್ನುವುದಾದರೆ ಯಾಕೆ ತಡ ಮಾಡುತ್ತೀರಿ ತಕ್ಷಣವೇ ತೆರಳಿ, ಮುಂದಿನ ಜನ್ಮವೆಂಬುದು ಇರುವುದಿಲ್ಲ ಎಂದು ಹೇಳಿಕೆ ನೀಡಿರುವ ಶಾಸಕ ಸಿ.ಟಿ.ರವಿ ವಿರುದ್ಧ ಜಾತ್ಯಾತೀತ ಜನತಾದಳದ ಮುಖಂಡರುಗಳು ನಗರದ ಹನುಮಂತಪ್ಪ ವೃತ್ತದಲ್ಲ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಚಿಕ್ಕಮಗಳೂರು ಜೆಡಿಎಸ್ ಅಭ್ಯರ್ಥಿ ಬಿ.ಎಂ.ತಿಮ್ಮಶೆಟ್ಟಿ ಅವರು ಹೆಚ್.ಡಿ. ದೇವೇಗೌಡ ಅವರು ಮುಸ್ಲಿಂ ಸಮುದಾಯ ಬಗ್ಗೆ ಕಾಳಜಿ ಹೊಂದಿರುವ ಹಿನ್ನೆಲೆಯಲ್ಲಿ ಮುಂದಿನ ಜನ್ಮದಲ್ಲಿ ಮುಸ್ಲಿಂ ವ್ಯಕ್ತಿಯಾಗಿ ಹುಟ್ಟುತ್ತೇವೆಂದು ಹೇಳಿಕೆ ನೀಡಿದ್ದರು. ಆದರೆ ಶಾಸಕ ಸಿ.ಟಿ.ರವಿ ಮುಸ್ಲಿಂ ಜನಾಂಗದಲ್ಲಿ ಮುಂದಿನ ಜನ್ಮವಿರುವುದಿಲ್ಲ, ಹುಟ್ಟುವುದು ಗೊತ್ತಿಲ್ಲ. ಹಾಗಾಗಿ ಈಗಲೇ ಧರ್ಮ ಬದಲಿಸಿಕೊಳ್ಳಿ ಎಂದು ಅವಹೇಳನಕಾರಿ ಹೇಳಿಕೆ ನೀಡಿ ಅವಮಾನಿಸಲಾಗಿದೆ ಎಂದು ಆರೋಪಿಸಿದರು.
ಶಾಸಕ ಸಿ.ಟಿ.ರವಿ ಮುಸ್ಲೀಂನಲ್ಲಿ ಮುಂದಿನ ಜನ್ಮವಿಲ್ಲ, ಕೇವಲ ಹಿಂದೂಗಳಿಲ್ಲ ಮಾತ್ರ ಇದೆ ಎಂಬುದನ್ನು ತೆರಳಿ ನೋಡಿದ್ದಾರೆಯೇ ಎಂದು ಪ್ರಶ್ನಿಸಿದ ಅವರು ಇಂತಹ ಹೇಳಿಕೆಯಿಂದ ಹೆಚ್.ಡಿ.ದೇವೇಗೌಡ ಅವರನ್ನು ತೇಜೋವಧೆಗೆ ಮುಂದಾಗಿ ಕೀಳುಮಟ್ಟದ ರಾಜಕಾರಣ ಶಾಸಕರು ಪ್ರದರ್ಶಿಸುತ್ತಿದ್ದಾರೆ ಎಂದು ದೂರಿದರು.
ನಗರಾಧ್ಯಕ್ಷ ಎ.ಸಿ.ಕುಮಾರಗೌಡ ಮಾತನಾಡಿ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯಿಂದ ಹಿಡಿದು ರಾಜ್ಯದ ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳು ಹೆಚ್.ಡಿ.ದೇವೇಗೌಡ ಅವರ ಬಗ್ಗೆ ಅಪಾರ ಗೌರವ ಹೊಂದಿ ದ್ದಾರೆ. ಆದರೆ ಶಾಸಕ ಸಿ.ಟಿ.ರವಿ ಅವರು ಹಿರಿಯ ರಾಜಕಾರಣಿಗಳ ಮೇಲೆ ಇಲ್ಲಸಲ್ಲದ ಹೇಳಿಕೆ ನೀಡಿ ರಾಜಕೀ ಯವಾಗಿ ಬೆಳೆಯಲು ಪ್ರಯತ್ನಿಸಿದ್ದು ಈ ಬಾರಿ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಶಾಸಕ ರವಿಯವರು ರಾಜಕೀಯ ಪ್ರವೇಶಿಸುವ ಮೊದಲೇ ಅವರ ತಂದೆ ದೇವೇಗೌಡರ ಪಕ್ಷವನ್ನು ಸೇರ್ಪಡೆಗೊಳ್ಳುವಂತೆ ಅವರೇ ಖುದ್ದು ಹೇಳಿಕೆ ನೀಡಿದ್ದರು. ಆದರೆ ಶಾಸಕರು ತಮ್ಮ ತಂದೆಯ ಮಾತಿಗೂ ಬೆಲೆ ಕೊಡದೇ ಹಿಂದುತ್ವದ ಹೆಸರಿನಲ್ಲಿ ಅಮಾಯಕರನ್ನು ಬಳಸಿಕೊಳ್ಳುವ ಪಕ್ಷಕ್ಕೆ ಸೇರ್ಪಡೆಯಾಗಿ ಧೀಮಂತ ನಾಯಕರ ಮೇಲೆ ಹೇಳಿಕೆ ನೀಡಿ ತಂದೆ ಮಾತಿಗೂ ಹಾಗೂ ದೇವೇಗೌಡರಿಗೂ ಅವಮಾನಿಸಿದ್ದಾರೆ ಎಂದರು. ಪಕ್ಷದ ಜಿಲ್ಲಾ ವಕ್ತಾರ ಹೊಲದಗದ್ದೆ ಗಿರೀಶ್ ಮಾತನಾಡಿ ಹೆಚ್.ಡಿ.ದೇವೇಗೌಡ ಅವರು ಮುಸ್ಲೀಂ ಜನಾಂಗ ಕ್ಕೆ ಕ್ಷಣವೇ ತೆರಳಿ ಮುಂದಿನ ಜನ್ಮವಿಲ್ಲ ಎಂದು ಶೇ.೪೦ ಕಮಿಷನ್ ಸರ್ಕಾರದ ರೂವಾರಿ ಶಾಸಕ ಸಿ.ಟಿ.ರವಿ ಹೇಳಿಕೆ ದೇಶವೇ ತಲೆತಗ್ಗಿಸುವಂತಹ ಹೇಳಿಕೆಯಾಗಿದ್ದು ಕೂಡಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸದಿದ್ದಲ್ಲಿ ಮುಂದೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾದ ಲಕ್ಷ್ಮಣಗೌಡ, ಅಯೂಬ್ಖಾನ್, ನಗರಸಭಾ ಸದಸ್ಯ ಗೋಪಿ, ಪಕ್ಷದ ಮುಖಂಡರುಗಳಾದ ಮಾನುಮಿರಾಂಡ, ಎನ್.ಎನ್.ಚಂದ್ರಶೇಖರ್, ದೇವಿಪ್ರಸಾದ್, ಸಿ.ಕೆ. ಮೂರ್ತಿ, ಚಿದಾನಂದ್, ನಿಸಾರ್ ಅಹ್ಮದ್, ಇರ್ಷಾದ್, ಸಿ.ಎನ್.ದೇವರಾಜ್ ಅರಸ್, ಜಯಂತಿ, ಶಿವು, ಸೈಯದ್ ಮತ್ತಿತರರು ಹಾಜರಿದ್ದರು.