ಚಿಕ್ಕಮಗಳೂರು: ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ್ದ ವಿವಿಧ ಸಮಾಜದ ಸ್ವಾಮೀಜಿಗಳು ಬಿಜೆಪಿ ಅಭ್ಯರ್ಥಿ ಶಾಸಕ ಸಿ.ಟಿ.ರವಿ ಅವರನ್ನು ಆಶೀರ್ವದಿಸಿದರು.
ಶಾಸಕರ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಚಿತ್ರದುರ್ಗದ ಬೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ತಾವು ಈ ಮನೆಯ ಗೃಹಪ್ರವೇಶಕ್ಕೂ ಬಂದಿದ್ದೆವು. ಅವರ ಎಲ್ಲ ಕಷ್ಟ, ಸುಖದಲ್ಲೂ ಜೊತೆಗಿದ್ದೇವೆ. ಇಂದೂ ಸಹ ಬಂದು ಅವರನ್ನು ಆಶೀರ್ವದಿಸಿದ್ದೇವೆ ಎಂದರು.
ಸಿ.ಟಿ.ರವಿ ಹಣದ ರಾಜಕಾರಣಿ ಅಲ್ಲ, ಸೈದ್ಧಾಂತಿಕ ರಾಜಕಾರಣಿ, ಸಣ್ಣ-ಪುಟ್ಟ ಸಮುದಾಯಗಳನ್ನು ಗುರುತಿಸಿ ರಾಜಕೀಯ ಸ್ಥಾನ ಮಾನ, ಸಾಮಾಜಿಕ ಹಾಗೂ ಶೈಕ್ಷಣಿಕ ಸಬಲೀಕರಣಕ್ಕೆ ಎಲ್ಲ ದೃಷ್ಠಿಯಿಂದ ಸಮಾಜ, ದೇಶವನ್ನು ಮುಂದೆ ತೆಗೆದುಕೊಂಡು ಹೋಗುವ ಜವಾಬ್ದಾರಿಯನ್ನು ಅವರು ಹೊತ್ತಿದ್ದಾರೆ ಎಂದರು.
ಎಂತಹಾ ಕಠಿಣ ಸ್ಥಿತಿಯಲ್ಲೂ ಜಾತಿಯನ್ನು ಮಾಡದ ನಿಜವಾದ ಜಾತ್ಯತೀತ ರಾಜಕಾರಣಿ ಯಾರಾದರೂ ಇದ್ದರೆ ಸಿ.ಟಿ.ರವಿ ಎಂದು ಹೇಳಿದರು.
ಆಯಾ ಸಮಾಜಗಳಿಗೆ ಸಮು ದಾಯ ಭವನಗಳು, ವಿದ್ಯಾರ್ಥಿನಿಲಯ ಗಳನ್ನು ನಿರ್ಮಿಸುವ ಮೂಲಕ ಶೈಕ್ಷಣಿಕ ಸೌಲತ್ತುಗಳನ್ನು ಕಲ್ಪಿಸಿದ್ದಾರೆ. ಅದರಾಚೆಗೆ ನಮ್ಮ ಧರ್ಮದ ಉಳಿವಿಗಾಗೆ ಸುಮಾರು ೨೦ ವರ್ಷದಿಂದ ಶ್ರಮ ಹಾಕುತ್ತಿದ್ದಾರೆ. ಅವರಿಗೆ ನಮ್ಮೆಲ್ಲರ ಆಶೀರ್ವಾದ ಇರುತ್ತದೆ ಎಂದರು.
ಈ ಸಂದರ್ಭದಲ್ಲಿ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿ ಸೇರಿದಂತೆ ಹೊಸದುರ್ಗ ಕುಂಚಿಟಿಗ ಮಹಾ ಸಂಸ್ಥಾನದ ಡಾ.ಶ್ರೀ ಶಾಂತವೀರ ಮಹಾಸ್ವಾಮೀಜಿ, ಶಿವಮೊಗ್ಗ ಶ್ರೀ ನಾರಾಯಣ ಗುರುಪೀಠದ ರೇಣುಕಾನಂದ ಮಹಾಸ್ವಾಮೀಜಿ, ಚಿತ್ರದುರ್ಗ ಮೇದಾರ ಗುರುಪೀಠದ ಇಮ್ಮಡಿ ಕೇತೇಶ್ವರ ಮಹಾ ಸ್ವಾಮೀಜಿ, ಬೆಳಗಾವಿ ಜಿಲ್ಲೆ ತೆಲಸಂಗ ಕುಂಬಾರ ಗುರುಪೀಠದ ಶ್ರೀ ಕುಂಬಾರ ಗುಂಡಯ್ಯ ಮಹಾಸ್ವಾಮೀಜಿ, ಕೊರಟಗೆರೆ ಶ್ರೀ ಮಹಾಲಿಂಗ ಸ್ವಾಮೀಜಿ, ತಂಗಡಗಿಯ ಹಡಪದ ಅಪ್ಪಣ್ಣ ಗುರುಪೀಠದ ಅನ್ನದಾನಿ ಭಾರತಿ ಅಪ್ಪಣ್ಣ ಮಹಾ ಸ್ವಾಮೀಜಿ ಅವರನ್ನು ಶಾಸಕ ಸಿ.ಟಿ.ರವಿ ಗೌರವಿಸಿದರು.