ಚಿಕ್ಕಮಗಳೂರು: ಅಭಿವೃದ್ಧಿ ವಿಷಯದಲ್ಲಿ ತಾವು ಎಂದು ಹಿಂದೆ ಬಿದ್ದಿಲ್ಲ ಎಂದು ಶಾಸಕ ಸಿ.ಟಿ. ರವಿ ಹೇಳಿದರು. ವಿದ್ಯಾ ಕಾಫಿ ಸಂಸ್ಥೆ ನಗರ ಹೊರವಲ ಯದ ಹಿರೇಮಗಳೂರಿನಲ್ಲಿ ಒಂದೂವರೆ ಕೋಟಿ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮ ಅವಧಿಯಲ್ಲಿ ಹಿರೇಮಗಳೂರು ಗ್ರಾಮದ ಕಲ್ಯಾಣಿಯನ್ನು ನವೀಕರಣ ಮಾಡಲಾಗಿದೆ. ಗ್ರಾಮದ ಬಹಳಷ್ಟು ದೇವಾಲಯಗಳು ಪುನರುತ್ಥಾನಗೊಳಿಸ ಲಾಗಿದೆ. ಯಾತ್ರಿ ನಿವಾಸ ಅಂಬೇಡ್ಕರ್ ಭವನ ಜಗ ಜೀವನ್ ರಾಮ್ ಭವನ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಕೋದಂಡರಾಮಚಂದ್ರ ಸ್ವಾಮಿ ದೇವಾಲಯದ ಕಲ್ಲಿನ ಕಾಂಪೌಂಡ್ ನಿರ್ಮಾಣಕ್ಕೆ ೫೦ ಲಕ್ಷ ರೂ ನೀಡಲಾಗಿದೆ. ಇದೀಗ ಗ್ರಾಮಸ್ಥರು ಮುತ್ತಿನಮ್ಮ ಮತ್ತು ಕೆಂಚರಾಯ ದೇವಾಲಯದ ನಿರ್ಮಾಣಕ್ಕೆ ಸಂಕಲ್ಪ ಮಾಡಿದ್ದು, ಆ ಕಾರ್ಯದಲ್ಲಿ ತಾವು ಸದಾ ಅವರೊಂದಿಗೆ ಬೆನ್ನೆಲುಬಾಗಿ ನಿಲ್ಲುವುದಾಗಿ ಭರವಸೆ ನೀಡಿದರು.
ಎಂ ಆರ್ ಪಿ ಎಲ್ ನಿಂದ ೫೦ ಲಕ್ಷ ಸಿಎಸ್ಆರ್ ಅನುದಾನವನ್ನು ನಗರದ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ನೀಡಲಾಗಿದ್ದು,
ಆ ಹಣದಲ್ಲಿ ಸುಸಜ್ಜಿತ ಲ್ಯಾಬ್ ನಿರ್ಮಾಣ ಮಾಡಲಾಗಿದೆ. ಬೇಲೂರು ರಸ್ತೆಯ ಪದವಿಪೂರ್ಣ ಕಾಲೇಜಿಗೆ ಪ್ರಯೋಗಾಲಯ ಮತ್ತು ಕೊಠಡಿ ನಿರ್ಮಾಣಕ್ಕೆ ೨೫ ಲಕ್ಷ ರೂ ಒದಗಿಸಲಾಗಿದೆ ಎಂದರು.
ಬಿಬಿಸಿಎಲ್ ನಿಂದ ೩೨ ಲಕ್ಷ ರೂ ಅನುದಾನವನ್ನು ಹದಿ ನಾಲ್ಕು ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ಟ್ ನಿರ್ಮಾಣಕ್ಕೆ ನೀಡಲಾಗಿದೆ.
ತಮ್ಮ ಸಲಹೆ ಮತ್ತು ಮನವಿಗೆ ಸ್ಪಂದಿಸಿ ಹಿರೇಮಗಳೂರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವನ್ನು ನಿರ್ಮಿಸಿದ ದಾನಿ ವಿದ್ಯಾ ಕಾಫಿ ಸಂಸ್ಥೆಯ ಶ್ಯಾಮ್ ಪ್ರಸಾದ್ ಮತ್ತು ಸಹೋದರರಿಗೆ ಧನ್ಯವಾದ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಉಮೇಶ್ ಹಾಗೂ ವೈದ್ಯರುಗಳು ಹಾಜರಿದ್ದರು.