ಮೂಡಿಗೆರೆ: ಇತ್ತೀಚೆಗೆ ಚಾರಣ ಎಂದು ಒಬ್ಬೊಬ್ಬರೆ ಸುತ್ತಾಟ ನಡೆಸುವ ಯುವಕರ ಸಂಖ್ಯೆ ಹೆಚ್ಚುತ್ತಿದೆ. ಕೆಲವರು ಕಾಡು ಮೇಡಿನಲ್ಲಿ ಅಲೆಯುತ್ತ ದಿಕ್ಕು ತಪ್ಪಿ ದುರಂತ ಅಂತ್ಯ ಕಾಣುತ್ತಾರೆ. ಇದೀಗ ಚಾರಣದ ನೆಪ ಹೇಳಿ ಬಂದಿದ್ದ ಯುವಕನೊಬ್ಬ ದುರಂತ ಅಂತ್ಯ ಕಂಡಿದ್ದಾನೆ. ಪ್ರವಾಸಕ್ಕೆಂದು ಬಂದು ಕಣ್ಮರೆಯಾಗಿದ್ದ ಯುವಕನ ಶವ 3 ಸಾವಿರ ಅಡಿ ಪ್ರಪಾತದಲ್ಲಿ ಪತ್ತೆಯಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ ಸಮೀಪ ಇರುವ ರಾಣಿಜರಿ ವ್ಯೂ ಪಾಯಿಂಟ್ ಬಳಿ ನಡೆದಿದೆ.
ಬೆಂಗಳೂರು ಮೂಲದ ಯುವಕ ಭರತ್ (30) ಪ್ರವಾಸಕ್ಕೆಂದು ಬಂದು ರಾಣಿಜರಿ ವ್ಯೂ ಪಾಯಿಂಟ್ ಬಳಿ ಕಣ್ಮರೆಯಾಗಿದ್ದ. ದುರ್ಗದಹಳ್ಳಿ ಸಮೀಪ ಇರುವ ರಾಣಿಜರಿ ವ್ಯೂಪಾಯಿಂಟ್ ಬಳಿ ಬೈಕ್ ನಿಲ್ಲಿಸಿ ಬೈಕ್ ನ ಹಿಂಬದಿಯಲ್ಲಿ ತನ್ನ ಐಡಿ ಕಾರ್ಡ್ ಸಿಕ್ಕಿಸಿ, ಬ್ಯಾಗನ್ನು ಇಟ್ಟು, ಟೀ ಶರ್ಟ್ ನೇತು ಹಾಕಿ ಯುವಕ ನಾಪತ್ತೆಯಾಗಿದ್ದ.
ಈ ಸಂಬಂಧ ಪೊಲೀಸ್ ಇಲಾಖೆ ಹಾಗೂ ಸಮಾಜ ಸೇವಕ ಆರೀಫ್ ಶೋಧ ಕಾರ್ಯ ನಡೆಸಿ, ಕಣ್ಮರೆಯಾದ ಭರತ್ 3 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆಯಾಗಿದೆ. ಇನ್ನು ಶವವನ್ನು ಮೇಲೆತ್ತಲು ಸುಮಾರು 4 ರಿಂದ 5 ಗಂಟೆ ಬೇಕಾಗಬಹುದು ಎನ್ನಲಾಗಿದೆ. ಇನ್ನು ಯುವಕ ಭರತ್ ಆತ್ಮಹತ್ಯೆ ಮಾಡಿಕೊಂಡಿದ್ದ ಅಥವಾ ಕಾಲು ಜಾರಿ ಬಿದ್ದಿದ್ದ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.