ಚಿಕ್ಕಮಗಳೂರು: ಆಮ್ಆದ್ಮಿ ಪಕ್ಷದಿಂದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ ಎಂ.ಪಿ.ಈರೇಗೌಡ ಅವರನ್ನು ಪಕ್ಷ ಅಭ್ಯರ್ಥಿಯನ್ನಾಗಿ ಘೋಷಿಸಿದೆ.
ಎಎಪಿ ಜಿಲ್ಲಾಧ್ಯಕ್ಷ ಹೇಮಂತ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಶೃಂಗೇರಿ ಕ್ಷೇತ್ರಕ್ಕೆ ರಾಜನ್ಗೌಡ ಹಾಗೂ ಕಡೂರು ಕ್ಷೇತ್ರಕ್ಕೆ ರಾಜೇಶ್ವರಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ ಎಂದರು.
ಹತ್ತು ವರ್ಷದಲ್ಲಿ ಪಕ್ಷವನ್ನು ಕಟ್ಟಿ ರಾಷ್ಟ್ರೀಯ ಮಟ್ಟಕ್ಕೆ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ ರಾಷ್ಟ್ರೀಯ ಅಧ್ಯಕ್ಷ ಕ್ರೇಜಿವಾಲ್ ಅವರನ್ನು ಅಭಿನಂದಿಸಲಾಗುವುದು ಎಂದ ಅವರು ದೆಹಲಿಯಲ್ಲಿ ಎರಡನೇ ಬಾರಿ ಹಾಗೂ ಪಂಜಾಬ್ನಲ್ಲಿ ರಾಜ್ಯದ ಚುಕ್ಕಾಣಿಯನ್ನು ವಹಿಸಿರುವ ಎಎಪಿ ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರಲಿದೆ ಎಂದರು.
ಶಾಸಕ ಸಿ.ಟಿ.ರವಿಯವರು ಸೀರೆ, ಅಕ್ಕಿ, ಬೇಳೆ, ಬೆಲ್ಲ ಸೇರಿದಂತೆ ಇತರೆ ಉಡುಗೊರೆಗಳನ್ನು ಹಂಚುವ ಮೂಲಕ ಜನರಿಗೆ ಆಮಿಷವೊಡ್ಡಿ ಪ್ರಚಾರ ನಡೆಸಲು ಮುಂದಾಗಿದ್ದಾರೆ. ಚುನಾವಣಾ ಆಯೋಗ ಇದನ್ನು ಗಂಭೀರ ವಾಗಿ ಪರಿಗಣಿಸಬೇಕು ಎಂದ ಅವರು ಅಭಿವೃದ್ದಿ ಹೆಸರಿನಲ್ಲಿ ಚುನಾವಣೆ ಎದುರಿಸಲು ಸಾಧ್ಯವಿಲ್ಲದ ಕಾರಣ ವಾಮಮಾರ್ಗದಲ್ಲಿ ಚುನಾವಣೆ ಎದುರಿಸಲು ಮುಂದಾಗಿದ್ದಾರೆ. ಇವರು ರಾಜಕೀಯ ನಿವೃತ್ತಿ ಘೋಷಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಎಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಕೆ.ಸುಂದರಗೌಡ, ಮೈನಾರಿಟಿ ಸೆಲ್ ಅಧ್ಯಕ್ಷ ಜಮೀಲ್ ಅಹ್ಮದ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಾಸೀ ರ ಬೇಗಂ, ಪಕ್ಷದ ನಿಯೋಜಿತ ಅಭ್ಯರ್ಥಿಎಂ.ಪಿ.ಈರೇಗೌಡ ಇದ್ದರು.