ಚಿಕ್ಕಮಗಳೂರು : ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧ ದಾಖಲಾಗಿರುವ ಮೊಕದ್ದಮೆಯನ್ನು ರಾಜ್ಯ ಸರ್ಕಾರವು ರದ್ದುಗೊಳಿಸಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಜಮಾಯಿಸಿದರು.
ಸಂಸದ ಪ್ರತಾಪಸಿಂಹ ಹಾಗೂ ಪೇಜಾವರ ಶ್ರೀಗಳ ವಿರುದ್ಧ ಘೋಷಣೆ ಕೂಗಿದರು.
‘ಪೇಜಾವರ ಶ್ರೀಗಳು ಪರಿಶಿಷ್ಟರ ಮನೆಗೆ ಬರಬಹುದು ಅಷ್ಟೇ, ಮಾಂಸಾಹಾರ ಸೇವಿಸುತ್ತಾರೆ ಎಂದು ಹಂಸಲೇಖ ಅವರು ಪ್ರಶ್ನಿಸಿರುವುದರಲ್ಲಿ ತಪ್ಪಿಲ್ಲ. ಜಾತಿ ವ್ಯವಸ್ಥೆ ನಾಶವಾಗಬೇಕು ಎನ್ನುವ ಕಳಕಳಿಯಿಂದ ಅವರ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗೆ ದಲಿತ ಸಂಘಟನೆಗಳ ಬೆಂಬಲ ಇದೆ’ ಎಂದು ಪ್ರತಿಭಟನಕಾರರು ಸಮರ್ಥಿಸಿಕೊಂಡರು.
ರಾಜ್ಯ ಸರ್ಕಾರವು ಹಂಸಲೇಖ ಅವರಿಗೆ ಪೊಲೀಸ್ ಭದ್ರತೆ ಒದಗಿಸಬೇಕು. ಅವರನ್ನು ನಿಂದಿಸಿದ ಸಂಸದ ಪ್ರತಾಪಸಿಂಹ ಹಾಗೂ ಪೇಜಾವರ ಶ್ರೀ ವಿರುದ್ಧ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.