ರಾಜ್ಯ ಸರ್ಕಾರವು 18,000 ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರಿಗೆ ಪರ್ಯಾಯ ಆದಾಯ ಕಂಡುಕೊಳ್ಳಲು ತರಬೇತಿಯೊಂದನ್ನು ಆಯೋಜಿಸಿದೆ. 30 ಜಿಲ್ಲೆಗಳಲ್ಲಿಯೂ ತರಬೇತಿ ನಡೆಯಲಿದ್ದು, ‘ಗ್ರಾಮೀಣ ಪ್ರದೇಶಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ ಮತ್ತು ಸೌರಶಕ್ತಿ ಬಳಕೆ’ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗುವುದು.
ಸಾರಾಂಶ ರೂಪದಲ್ಲಿ ಹೇಳುವುದಾದರೆ ಸ್ವಚ್ಛತೆ ಮತ್ತು ಸುಸ್ಥಿರತೆಗಳನ್ನು ನೆಲೆಗೊಳಿಸುವ ನಿಟ್ಟಿನಲ್ಲಿ ಇರುವ ಉದ್ಯಮ ಅವಕಾಶಗಳಲ್ಲಿ ಮಹಿಳೆಯರನ್ನು ಮುಂಚೂಣಿಯಲ್ಲಿ ನಿಲ್ಲಿಸುವ ಆಶಯ ಈ ಯೋಜನೆಯದ್ದು. ಇದರಿಂದ ಸ್ವಸಹಾಯ ಸಂಘಗಳಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರಿಗೆ ಆದಾಯವೂ ಬಂದಂತಾಗುವುದು ಹಾಗೂ ಸ್ವಚ್ಛತೆ ಮತ್ತು ಆರೋಗ್ಯಪೂರ್ಣ ಪರಿಸರವೂ ರೂಪುಗೊಂಡಂತಾಗುತ್ತದೆ.
ಈ ತರಬೇತಿ ಪೂರ್ಣಗೊಳಿಸಿದ ಮಹಿಳೆಯರನ್ನು ಗ್ರಾಮ ಪಂಚಾಯತಿ ‘ಸ್ಚಚ್ಛ ಕಾರ್ಮಿಕ’ರೆಂದು ಪರಿಗಣಿಸಿ, ಕೆಲಸದಲ್ಲಿ ತೊಡಗಿಸಿಕೊಳ್ಳುತ್ತದೆ.
ಮಹಾತ್ಮಾ ಗಾಂಧಿ ಗ್ರಾಮೀಣ ಶಕ್ತಿ ಮತ್ತು ಅಭಿವೃದ್ಧಿ ಸಂಸ್ಥೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮತ್ತು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಸಹಯೋಗದಲ್ಲಿ ತರಬೇತಿ ನಡೆಯಲಿದೆ.
ತರಬೇತಿ ನಂತರ ದಿನನಿತ್ಯದ ತ್ಯಾಜ್ಯ ಸಂಗ್ರಹಣೆ, ತ್ಯಾಜ್ಯ ವಿಂಗಡಣೆ, ಮುಂತಾದ ಕೆಲಸಗಳನ್ನು ಗ್ರಾಮ ಪಂಚಾಯತಿ ಮಹಿಳೆಯರಿಗೆ ನೀಡುತ್ತದೆ. ತರಗತಿಗಳಲ್ಲಿ ಐದು ದಿನದ ತರಬೇತಿ ಜೊತೆಗೆ ಪ್ರವಾಸಗಳಲ್ಲಿಯೂ ಟ್ರೇನಿಂಗ್ ನೀಡಲಾಗುತ್ತದೆ. ಸ್ವಚ್ಛಸಂಕೀರ್ಣವನ್ನು ಸಮರ್ಥವಾಗಿ ನಿರ್ವಹಿಸಲು ಬೇಕಾದ ಜ್ಞಾನ ಮತ್ತು ಕೌಶಲಗಳನ್ನು ಒದಗಿಸುವುದು ಹಾಗೂ ಮಹಿಳೆಯರನ್ನು ಸ್ವಾವಲಂಬಿಯನ್ನಾಗಿ ಮಾಡುವುದು ಈ ತರಬೇತಿಯ ಉದ್ದೇಶವಾಗಿದೆ.
ಈ ಬಗ್ಗೆ ಐಎಸ್ಎ ನಿರ್ದೇಶಕರಾದ ಪರಮೇಶ್ವರ್ ಹೆಗ್ಡೆ ಅವರು ಮಾಹಿತಿ ನೀಡಿದ್ದು, ಈ ತರಬೇತಿ 18 ಸಾವಿರ ಮಹಿಳೆಯರಿಗೆ ಸ್ವಾವಲಂಬಿಯಾಗಿ ಬದುಕಲು ಸಹಾಯ ಮಾಡುತ್ತದೆ. 30 ಜಿಲ್ಲೆಗಳಲ್ಲಿಯೂ ತರಬೇತಿ ನಡೆಯುತ್ತಿದ್ದು, ಕಾರ್ಯಕ್ರಮ ಉಚಿತವಾಗಿದೆ. ಪ್ರಯಾಣ ವೆಚ್ಚ, ವಸತಿ ವೆಚ್ಚವನ್ನು ಭರಿಸಲಾಗುತ್ತದೆ ಎಂದಿದ್ದಾರೆ.
ಸ್ವಸಹಾಯ ಸಂಘದ ಮಹಿಳೆಯರು ತರಬೇತಿಯಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳು, ಘನತ್ಯಾಜ್ಯ ನಿರ್ವಹಣೆ, ಮಿಶ್ರಗೊಬ್ಬರ ತಂತ್ರಜ್ಞಾನಗಳು, ಮುಟ್ಟಿನ ಆರೋಗ್ಯ ಮತ್ತು ಅದರ ನಿರ್ವಹಣೆ ಬಗ್ಗೆ ಕಲಿಯಲಿದ್ದಾರೆ.