ಚಿಕ್ಕಮಗಳೂರು : ರಾಜೀನಾಮೆ ಕೇಳುವುದು ಸ್ವಾಭಾವಿಕ, ನಾವು ವಿಪಕ್ಷದಲ್ಲಿದ್ದರೂ ಅದೇ ಮಾಡುತ್ತಿದ್ದಿವಿ. ಈ ಬಗ್ಗೆ ಸಾರ್ವಜನಿಕ ಸಂಶಯ ದೂರಾಗಿಸಲು ಮುಖ್ಯಮಂತ್ರಿ, ಈಶ್ವರಪ್ಪ ಸೂಕ್ತ ನಿರ್ಣಾಯ ಕೈಗೊಳ್ಳುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು,ಉಡುಪಿಯಲ್ಲಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಮೇಲ್ನೋಟಕ್ಕೆ ಈಶ್ವರಪ್ಪನವರ ಪಾತ್ರ ಕಂಡುಬಂದಿಲ್ಲ. ನಾನು ಹೇಳಿದರೆ ಯಾರು ನಂಬಲ್ಲ. ನಾನು ತನಿಖಾ ಎಜೆನ್ಸಿ ಅಲ್ಲ, ಕಾಂಗ್ರೆಸ್, ಬೇರೆಯವರು ದಾಖಲೆ ಇದ್ದರೆ ತನಿಖಾ ಎಜೆನ್ಸಿ ಮುಂದೆ ಸಲ್ಲಿಸಲಿ ಎಂದರು.
ಸಾರ್ವಜನಿಕ ಜೀವನದಲ್ಲಿ ಅನಿರ್ವಾಯ ತಲೆಕೊಡುವ ಪರಿಸ್ಥಿತಿ ಬರುತ್ತದೆ. ಮುಖ್ಯಮಂತ್ರಿ ಇದ್ದಾರೆ ಸ್ವತಃ ಈಶ್ವರಪ್ಪ ಇದ್ದಾರೆ. ಅವರು ವಯಸ್ಸು ಅನುಭವ ಎರಡರಲ್ಲೂ ದೊಡ್ಡವರು. ಅವರಿಬ್ಬರು ಈ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತಾರೆ. ತಪ್ಪು ಯಾರೇ ಮಾಡಿದರರೂ ಶಿಕ್ಷೆ ಅನುಭವಿಸುತ್ತಾರೆ ಎಂದು ಹೇಳಿದರು.
ಸಂತೋಷ್ ಪಾಟೀಲ್ ಸಾವು ದುರಾದೃಷ್ಟಕರ. ಯಾವುದೇ ಜೀವಕ್ಕೂ ಬೆಲೆ ಇರುತ್ತದೆ. ಅವರು ಅತ್ಮಹತ್ಯೆ ದಾರಿ ಹಿಡಿಯಬಾರದಿತ್ತು. ಸಮಗ್ರ ತನಿಖೆಯಾಗಬೇಕು ಮುಖ್ಯಮಂತ್ರಿ ಗೆ ಮನವಿ ಮಾಡುತ್ತೇನೆ ಎಂದರು.
ಈ ಹಿಂದೆ ಸಂತೋಷ್ ಪತ್ರ ಬರೆದಾಗ ಈ ಸಂಬಂಧ ಈಶ್ವರಪ್ಪ ಜೊತೆ ನಾನು ಮಾತನಾಡಿದ್ದೆ. ವರ್ಕ್ ಅರ್ಡರ್ ತೆಗೆದುಕೊಂಡಿಲ್ಲ. ಸ್ಯಾಂಕ್ಷನ್ ಅರ್ಡರ್ ಇಲ್ಲ. ಅಧಿಕಾರಿಗಳ ಹತ್ತಿರ ಮಾತನಾಡಿದೆ. ಅವರು ಕೆಲಸ ಮಾಡಿದ್ದೇನೆ ಅಂತಿದ್ದಾರೆ. ವಿತ್ ಔಟ್ ವರ್ಕ್ ಅರ್ಡರ್ ಹೇಗೆ ಪೆಮೆಂಟ್ ಮಾಡುವುದು ಅಂತ ಅಧಿಕಾರಿಗಳು ಹೇಳಿದ್ದಾರೆ ಎಂದು ಈಶ್ವರಪ್ಪ ಅವರು ನನ್ನ ಗಮನಕ್ಕೆ ತಂದಿದ್ದರು. ಜನರ ಪ್ರೀತಿಗಳಿಸಲು ಜಾತ್ರೆ ಅಂತಾ ಕೆಲಸ ಮಾಡಿರುವ ಸಾಧ್ಯತೆಯಿದೆ. ಆದರೆ ಸರ್ಕಾರ ನಿಯಮಗಳ ಅಡಿಯಲ್ಲಿ ಕಾರ್ಯನಿರ್ವಹಿಸಬೇಕು. ವರ್ಕ್ ಅರ್ಡರ್ ಇಲ್ಲದೆ ಬಿಲ್ ಕೊಡೋಕೆ ಸಾಧ್ಯವಿಲ್ಲ ಎಂದರು.
ಯಾರ ಮಾತು ಕೇಳಿ ಕೆಲಸ ಮಾಡಿದ್ದಾರೆ ಎನ್ನುವುದು ತನಿಖೆಯಿಂದ ಗೊತ್ತಾಗಬೇಕು.ಕೋಟ್ಯಾಂತರ ರೂ ಕೆಲಸವನ್ನು ಪಿಸ್ ವರ್ಕ್ ಕೆಲಸ ಮಾಡಿಸಿದ್ದಾರೆ ಎಂದು ಹೇಳೋಕಾಗಲ್ಲ. ವರ್ಕ್ ಅರ್ಡರ್ ಇಲ್ಲದೆ ಕೆಲಸ ಯಾಕೆ ಮಾಡಿದರು, ಹೇಗೆ ಮಾಡಿದರು ಎನ್ನುವುದು ಸಮಗ್ರ ತನಿಖೆಯಿಂದ ಬಯಲಾಗಬೇಕೆಂದು ಆಗ್ರಹಿಸಿದರು.