ಚಿಕ್ಕಮಗಳೂರು : ‘ಚಂದ್ರು ಹತ್ಯೆ ಮೂಲವನ್ನು ಹುಡುಕುವ ಕೆಲಸ ಆಗಬೇಕಿದೆ. ಹತ್ಯೆ ಮಾಡುವ ಮನಸ್ಥಿತಿ ಏಕೆ ಬಂತು ಎಂಬುದನ್ನು ಪತ್ತೆ ಮಾಡಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಚಂದ್ರು ತಾಯಿಯೇ ಹೇಳಿಕೆ ನೀಡಿದ್ದಾರೆ. ಹತ್ಯೆಯ ಮೂಲ ಬಿಟ್ಟು ಬೇರೆಯದರ ಬಗ್ಗೆ ಯೋಚಿಸುವುದು ಸರಿಯಲ್ಲ. ಅಖಂಡ ಶ್ರೀನಿವಾಸ ಮನೆ ಸೇರಿ ಕೆ.ಜಿ ಹಳ್ಳಿ, ಡಿ.ಜಿ.ಹಳ್ಳಿಯಲ್ಲಿ ನೂರಾರು ಮನೆಗೆ ಬೆಂಕಿ ಯಾಕೆ ಹಾಕಿದರು. ಈ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಿದರೆ ಸತ್ಯ ಗೊತ್ತಾಗುತ್ತದೆ’ ಎಂದರು.
‘ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗಳನ್ನು ಗಮನಿಸಿದ್ದೇನೆ. ಧಾರವಾಡದ ನುಗ್ಗಿಕೇರಿಯಲ್ಲಿ ಕಲ್ಲಂಗಡಿ ಹಣ್ಣು ಬೀದಿಗೆ ಚೆಲ್ಲಿರುವುದಕ್ಕೆ ತೋರಿಸುವ ಸಂಕಟವನ್ನು ತಲೆ ಹೊಡೆದಾಗಲೂ ಅವರು ತೋರಿಸಬೇಕು’ ಎಂದು ಉತ್ತರಿಸಿದರು.