ಚಾಮರಾಜನಗರ : ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಕಾಡಿನಿಂದ ವನ್ಯ ಪ್ರಾಣಿಗಳು ಆಹಾರ ಅರಸಿಕೊಂಡು ನಾಡಿನತ್ತ ಬರುವುದು ಸರ್ವೇ ಸಾಮಾನ್ಯವಾಗಿದ್ದು, ಕಾಡಾನೆ, ಹುಲಿ, ಚಿರತೆ ಮಾತ್ರವಲ್ಲದೆ ಈಗ ಹೆಬ್ಬಾವು ಕೂಡ ನಾಡಿನತ್ತ ಬಂದಿದ್ದು, ಸದ್ಯ ಅದನ್ನು ರಕ್ಷಿಸಿ ಮತ್ತೆ ಕಾಡಿಗೆ ಬಿಡಲಾಗಿದೆ.
ಆಗಾಗ್ಗೆ ಹೆಬ್ಬಾವುಗಳು ಜಿಲ್ಲೆಯ ರೈತರ ಜಮೀನುಗಳಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸುವುದು ಹೊಸತೇನಲ್ಲ. ಆದರೆ ಇದೀಗ ಜಿಲ್ಲೆಯ ಯಳಂದೂರು ತಾಲ್ಲೂಕಿನ ಮದ್ದೂರು ಗ್ರಾಮದ ನಿವಾಸಿ ಶಿವರಾಜ್ ಎಂಬುವರ ಕಬ್ಬಿನಗದ್ದೆಯಲ್ಲಿ ಹೆಬ್ಬಾವು ಪತ್ತೆಯಾಗಿದೆ. ಇದು ಮದ್ದೂರು ಪಕ್ಕದ ಮೂಲೆ ಹೊಳೆ ಮೂಲಕ ಬಂಡೀಪುರ ಅರಣ್ಯದಿಂದ ಬಂದಿರಬಹುದೆಂದು ಶಂಕಿಸಲಾಗಿದೆ. ಹೀಗೆ ಬಂದ ಹೆಬ್ಬಾವು ಕಬ್ಬಿನ ಗದ್ದೆಯಲ್ಲಿ ಆಶ್ರಯ ಪಡೆದಿತ್ತು.
ಎಂದಿನಂತೆ ಕಬ್ಬಿನ ಗದ್ದೆಗೆ ಹೋದ ಶಿವರಾಜ್ ಅವರಿಗೆ ಹೆಬ್ಬಾವು ಕಾಣಿಸಿದೆ. ಕಬ್ಬಿನ ಗದ್ದೆ ಪ್ರದೇಶಗಳಲ್ಲಿ ಹೆಬ್ಬಾವುಗಳು ಸಿಗುವುದು ತುಂಬಾ ವಿರಳವಾಗಿದ್ದು, ತಮ್ಮ ಕಬ್ಬಿನ ಗದ್ದೆಯಲ್ಲಿದ್ದ ಹೆಬ್ಬಾವನ್ನು ನೋಡಿದ ಅವರು ಆತಂಕಗೊಂಡಿದ್ದಾರೆ. ಬಳಿಕ ಸ್ನೇಕ್ ಮಹೇಶ್ ಅವರಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಆಗಮಿಸಿದ ಅವರು, ಹೆಬ್ಬಾವನ್ನು ಸುರಕ್ಷಿತವಾಗಿ ಸಂರಕ್ಷಣೆ ಮಾಡಿ ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಬಿಳಿಗಿರಿರಂಗನಬೆಟ್ಟದ ಅರಣ್ಯಕ್ಕೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.