ಕೋಲಾರ: ತಿಥಿ ಕಾರ್ಯಕ್ಕೆ ಹಾಕಿದ್ದ ಪೆಂಡಾಲ್‌ ಮೇಲೆ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ 7 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರ ನಗರದ ಪುಲ್ ಷಾ ಮೊಹಲ್ಲಾದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ. ಮಳೆಯಿಂದಾಗಿ ವಿದ್ಯುತ್ ಕಂಬದಿಂದ ತುಂಡಾಗಿ ಕೆಳಗೆ ಬಿದ್ದಿದ್ದ ತಂತಿ ತಗುಲಿ ಸಯ್ಯದ್ ರೆಹಮಾನ್ (4) ಬಾಲಕ ಸಾವನ್ನಪ್ಪಿದ್ದಾನೆ. ಮತ್ತೆ ಮೂರು ಮಕ್ಕಳಿಗೂ ಶಾಕ್ ಹೊಡೆದಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ.

ಕೂಡಲೆ ಅಲ್ಲಿದ್ದವರು ಶಾಕ್‌ನಿಂದ ಬಿದ್ದ ಮಕ್ಕಳನ್ನ ಪಾರು ಮಾಡಿದ್ರು. ಆದರೆ, ನಾಲ್ಕು ವರ್ಷದ ಸಯ್ಯದ್ ರೆಹಮಾನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇಷ್ಟೆಲ್ಲಾ ಅನಾಹುತಕ್ಕೆ ವಿದ್ಯುತ್ ತಂತಿಗಳು ಪದೇ ಪದೇ ಕೆಳಗೆ ಬಿದ್ದರೂ ಸರಿಪಡಿಸದ ಬೆಸ್ಕಾಂ ನಿರ್ಲಕ್ಷ್ಯವೇ ಕಾರಣ. ಈ ಹಿಂದೆಯೂ ಹಲವು ಬಾರಿ ದೂರು ಕೊಟ್ಟರೂ ಸರಿಪಡಿಸಲಿಲ್ಲ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

ಇಮ್ರಾನ್, ಜಬಿ, ಸಯ್ಯದ್ ಮೂವರು ಮಕ್ಕಳು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಇಷ್ಟೆಲ್ಲಾ ಆಗುತ್ತಿದ್ದಂತೆ ಸ್ಥಳಕ್ಕೆ ಬಂದ ಬೆಸ್ಕಾಂ ಸಿಬ್ಬಂದಿಯನ್ನು ಸ್ಥಳೀಯರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಕೋಲಾರ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.