ಕಾರವಾರ: ಉತ್ತರ ಕನ್ನಡ ಜಿಲ್ಲೆಯು ಕರ್ನಾಟಕದಲ್ಲಿಯೇ ಪ್ರವಾಸೋದ್ಯಮಕ್ಕೆ ಪ್ರಶಸ್ತ ಸ್ಥಳ. ಈಗ ಮತ್ತೊಂದು ಹಿರಿಮೆಯಾಗಿ ಭೀಮಕೋಲ್ ಪಂಚವಟಿ ವನ ಸೇರ್ಪಡೆಯಾಗಿದ್ದು, ಈ ಸ್ಥಳವನ್ನು ಸಾವಿರಾರು ಪ್ರವಾಸಿಗರು ಪಕೃತಿ ಸೌಂದರ್ಯ ಆಸ್ವಾದಿಸಲಿ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಶನಿವಾರ ಕಾರವಾರ ತಾಲೂಕಿನ ಹಣಕೋಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೋಟಗಾಳಿ ಗ್ರಾಮದಲ್ಲಿ ಭೀಮಕೋಲ್ ಪಂಚವಟಿ ವನವನ್ನು ಗಿಡಗಳಿಗೆ ನೀರೆರೆಯುವ ಮೂಲಕ ಲೋಕಾರ್ಪಣೆ ಮಾಡಿದರು.
ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಪಂಚವಟಿ ವನವನ್ನು ಒಂದು ಪೌರಾಣಿಕ ಹಿನ್ನಲೆಯ ಉದ್ದೇಶವನ್ನಿಟ್ಟುಕೊಂಡು ನಿರ್ಮಿಸಲಾಗಿದ್ದು, ಸ್ಥಳೀಯರು ಮತ್ತು ಊರ ನಾಗರಿಕರು ಅದನ್ನು ಉಳಿಸಿಕೊಂಡು ಹೋಗಬೇಕು. ಹಾಗೂ ಇಲ್ಲಿಗೆ ಬರುವ ಪ್ರವಾಸಿಗರು ಗಿಡಗಳನ್ನು ನಾಶ ಮಾಡದೇ, ಪ್ಲಾಸ್ಟಿಕ್ ಬಿಸಾಡದೇ, ಕೆರೆಯಲ್ಲಿರುವ ನೀರನ್ನು ಕಲುಷಿತಗೊಳಿಸದೇ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು.
ಮುಂದಿನ ದಿನಗಳಲ್ಲಿ ಈ ವನವನ್ನು ಹೆಚ್ಚು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಭೀಮಕೋಲ್ ಕೆರೆಯನ್ನು 2021-22 ನೇ ಸಾಲಿನಲ್ಲಿ ನರೇಗಾ ಯೋಜನೆಯ ಅಮೃತ ಸರೋವರ ಮಿಶನ್ ಅಡಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ.
ಗ್ರಾಮ ಪಂಚಾಯತಿ ವ್ಯಾಪ್ತಿಯಿಂದ ಭೀಮಕೋಲ್ ಕೆರೆಯ ತಡೆಗೋಡೆ ಮೇಲೆ ಸುಂದರವಾದ ವಿಹಾರ ಮಾರ್ಗ ಮತ್ತು ಕುಳಿತುಕೊಳ್ಳಲು ಆಸನ ವ್ಯವಸ್ಥೆ ಹಾಗೂ ಕೆರೆಗೆ ಹೋಗಲು ಮೆಟ್ಟಿಲು ನಿರ್ಮಿಸಲಾಗಿದೆ. 2022-23 ನೇ ಸಾಲಿನಲ್ಲಿ ಪ್ರವಾಸಿಗರಿಗೆ ಅರಣ್ಯದ ಮಹತ್ವ ಮತ್ತು ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಲು ಈ ಪ್ರದೇಶದಲ್ಲಿ ಪಂಚವಟಿ ವನ, ರಾಶಿ ವನ, ಚಿಟ್ಟೆ ವನ, ಪರ್ಣಕುಟೀರ, ಅಣಬೆ ಪ್ರತಿಮೆಗಳನ್ನು ಸ್ಥಾಪಿಸಿ ವಿವಿಧ ಇಲಾಖಾ ಯೋಜನೆಗಳಲ್ಲಿ ಅನುದಾನ ಬಳಕೆ ಮಾಡಿ ಸುಂದರ ಪ್ರವಾಸಿ ತಾಣವನ್ನಾಗಿ ಭೀಮಕೋಲನ್ನು ಮಾರ್ಪಡಿಸಿದ್ದಾರೆ. ಜಿಲ್ಲಾ ಪಂಚಾಯಿತಿ 15 ನೇ ಹಣಕಾಸು ಯೋಜನೆಯಲ್ಲಿ ಟಿಕೇಟ್ ಕೌಂಟರ್, ನೆಲ ಸಮತಟ್ಟು, ಪಂಚವಟಿ ವನದ ಬದಿಗೆ ಮತ್ತು ಮುಂಭಾಗದಲ್ಲಿ ಪೇವರ್ಸ್ ಅಳವಡಿಕೆ ಮಾಡಲಾಗಿದೆ ಎಂದರು.
ವಿಧಾನ ಪರಿಷತ್ ಶಾಸಕರಾದ ಗಣಪತಿ ಉಳ್ವೇಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಈಶ್ವರ ಕಾಂದೂ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಂಜನಾ ಆರ್. ಪವಾರ, ಉಪಾಧ್ಯಕ್ಷ ಶ್ರದ್ಧಾ ಸಿ.ನಾಯ್ಕ್, ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪ್ರಶಾಂತಕುಮಾರ, ಸಾಮಾಜಿಕ ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿಗಳಾದ ಮಂಜುನಾಥ ಜಿ. ನಾವಿ, ಹಾಗೂ ಜಿಲ್ಲಾ ಮಟ್ಟದ ಅರಣ್ಯ ಅಧಿಕಾರಿಗಳು, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ನರೇಗಾ ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.