ಕಾರವಾರ: ಮಂಜಗುಣಿ-ಗಂಗಾವಳಿ ನಡುವೆ ಸೇತುವೆ ಕಾಮಗಾರಿಯ ರಸ್ತೆ ಜೋಡಣೆಗಾಗಿ ಕಾಮಗಾರಿ ನಡೆಸಲಾಗುತ್ತಿದ್ದು, ಸ್ಥಳೀಯರಿಗೆ ಯಾವುದೇ ಮಾಹಿತಿ ಅಥವಾ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸದೇ ಏಕಾಏಕಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದ್ದು ಇದರಿಂದ ಸ್ಥಳೀಯರು ಪರದಾಡುವಂತಾಗಿ ಆಕ್ರೋಶಕ್ಕೆ ಕಾರಣವಾಗಿದೆ.
ಕೆಆರ್ ಡಿಸಿಎಲ್ ನವರು ಯಾವುದೇ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳದೇ ಸೇತುವೆ ಜೋಡಣೆಯ ರಸ್ತೆಯನ್ನು ನಿರ್ಮಿಸಲು ಕಾಮಗಾರಿ ನಡೆಯುವುದರಿಂದ ಇಲ್ಲಿಗೆ ಬಸ್ ಬಿಡಬಾರದು’ ಎಂದು ಲಿಖಿತ ರೂಪದಲ್ಲಿ ಸಾರಿಗೆ ಇಲಾಖೆಯವರಿಗೆ ನೀಡಿದ್ದರು.
ಇದರಿಂದಾಗಿ ಸಾರಿಗೆ ಇಲಾಖೆಯವರು ಬಸ್ನ್ನು ಮಂಜಗುಣಿಯವರೆಗೆ ಬಿಡದೇ ವಿದ್ಯಾನಗರದವರೆಗೆ ಬಿಡಲಾಗುತ್ತಿದೆ. ಇದರಿಂದ ಒಂದರಿಂದ ಎರಡು ಕಿ.ಮೀ. ಹೆಚ್ಚುವರಿ ನಡೆಯಬೇಕಾದ ಪರಿಸ್ಥಿತಿ ಸ್ಥಳೀಯರದ್ದಾಗಿದೆ. ಇನ್ನು ಪಂಚಾಯಿತಿ ಅವರ ಗಮನಕ್ಕೂ ತಾರದೇ ಈ ಕ್ರಮ ಕೈಗೊಂಡಿರುವುದರಿಂದ ಜನರು ಗ್ರಾ.ಪಂ.ನವರ ಮೇಲೂ ಮುನಿಸಿಕೊಂಡಿದ್ದಾರೆ. ಅವರು ನೀಡಿದ ಕಾಗದ ಪತ್ರದಲ್ಲಿ ಎಷ್ಟು ದಿನಗಳಲ್ಲಿ ಕಾಮಗಾರಿ ಮುಗಿಯುತ್ತದೆ? ಹಾಗೂ ಎಷ್ಟು ದಿನ ಬಸ್ ಸಂಚಾರ ಸ್ಥಗಿತಗೊಳಿಸಬೇಕು? ಎನ್ನುವುದನ್ನು ಬರೆದಿಲ್ಲ. ಕೇವಲ ಸೇತುವೆ ನಿರ್ಮಾಣಕ್ಕೆ 5 ವರ್ಷ ತೆಗೆದುಕೊಂಡಿರುವುದರಿಂದ ಇನ್ನು ಇದು ಎಷ್ಟು ತಿಂಗಳು ಬೇಕು ಗೊತ್ತಿಲ್ಲ. ಅಂತಹದರಲ್ಲಿ ಏಕಾಏಕಿ ಬಸ್ ಸಂಚಾರ ಸ್ಥಗಿತಗೊಳಿಸಿರುವದು ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ. ಇಲ್ಲಿ ಬೈಕ್, ರಿಕ್ಷಾ ಹೊರತುಪಡಿಸಿದರೆ ಇತರೆ ವಾಹನ ಸಂಚರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕಂಪನಿ ಮತ್ತು ಸ್ಥಳೀಯರ ನಡುವೆ ಗೊಂದಲ ಉಂಟಾಗಿದೆ.