ಕಾರವಾರ: ಶಿರಸಿ ತಾಲೂಕಿನ ಹುತ್ಗಾರ ಗ್ರಾಪಂ ವ್ಯಾಪ್ತಿಯಲ್ಲಿ ಪರಿಸರದ ಮೇಲೆ ಪರಿಣಾಮವನ್ನುಂಟು ಮಾಡುತ್ತಿರುವ ಕೋಳಿ ಉದ್ಯಮದ ಮೇಲೆ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಚುನಾವಣೆ ಬಹಿಷ್ಕರಿಸುವದಾಗಿ ಹಾಲಳ್ಳ, ಹುತ್ಗಾರ, ಮಣುಜವಳ್ಳಿ, ಶಾಂತಿನಗರದ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಹುತ್ಗಾರ ಗ್ರಾಮ ಪಂಚಾಯತಿ ಎದುರು ಪ್ರತಿಭಟನೆ ನಡೆಸಿದ ಗ್ರಾಮಸ್ಥರು ನಮ್ಮ ಭಾಗದಲ್ಕಿ ಹಲವಾರು ವರ್ಷಗಳಿಂದ ಕಾನೂನಿನ ಪರವಾನಗಿ ಇಲ್ಲದೇ ಕೋಳಿ ಉದ್ಯಮ ನಡೆಯುತ್ತಿದ್ದು ಅಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದಿಂದ ಪರಿಸರದ ಮೇಲೆ ಮತ್ತು ಕುಡಿಯುವ ನೀರಿನ ಮೇಲೆ ಪರಿಣಾಮ ಬಿರುತ್ತಿದೆ. ಇದೇ ರೀತಿಯಾಗಿ ನಮ್ಮ ಭಾಗದಲ್ಲಿ ತ್ಯಾಜ್ಯ ಸಂಗ್ರಹಿಸಲು ಕಳೆದ ಒಂದೂವರೆ ವರ್ಷದ ಹಿಂದೆಯೇ ಸರಕಾರದಿಂದ ವಾಹನ ನೀಡಿದರೂ ಪಂಚಾಯಿತಿಯವರು ಸರಿಯಾಗಿ ನಿಭಾಯಿಸದೇ ಹಾಳು ಗೆಡವುತ್ತಿದ್ದಾರೆ. ತಕ್ಷಣವೇ ಈ ಬಗ್ಗೆ ಕ್ರಮವಾಗ ಬೇಕು. ಇಲ್ಲವಾದಲ್ಲಿ ಗ್ರಾಮೀಣ ಭಾಗ ತ್ಯಾಜ್ಯದಿಂದ ತುಂಬಿ ನಾರುತ್ತದೆ. ಮತ್ತು ಜಲಜೀವನ್ ಮಿಷನ್ ಅಡಿಯಲ್ಕಿ ಹುತ್ಗಾರ ಮತ್ತು ಹಾಲಳ್ಳದ ಕೆಲ ಭಾಗಕ್ಕೆ ನೀರು ಪೂರೈಕೆಯಾಗುತ್ತಿಲ್ಲ. ಈ ಎಲ್ಲಾ ಸಮಸ್ಯಗಳನ್ನು ಇನ್ನು 5 ದಿನಗಳಲ್ಲಿ ಬಗೆ ಹರಿಸದಿದ್ದರೆ 2023 ರ ಸಾರ್ವತ್ರಿಕ ಚುನಾವಣೆ ಬಹೀಷ್ಕಾರ ಮಾಡುವದಾಗಿ ಎಚ್ಚರಿಕೆ ನೀಡಿ ತಮ್ಮ ಬೇಡಿಕೆಯ ಮನವಿಯನ್ನು ಸಲ್ಲಿಸಿದರು.
ತಹಸೀಲ್ದಾರ ಡಾ. ಸುಮಂತ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೇವರಾಜ ಹಿತ್ತಲಮನೆ ಇದ್ದರು.