ಕಾರವಾರ: ಅಂಕೋಲಾ ತಾಲೂಕಿನ ಹಟ್ಟಿಕೇರಿ ಬಳಿಯ ರಾಷ್ಟ್ರೀಯ ಹೆದ್ದಾರಿ ಮೇಲಿನ ಐಆರ್ಬಿ ಟೋಲ್ ಗೇಟ್ ನಲ್ಲಿ ಟೋಲ್ ಸಂಗ್ರಹ ಮಂಗಳವಾರ ಸ್ಥಗಿತಗೊಂಡಿದೆ. ಉಸ್ತವಾರಿ ಸಚಿವರ ಸೂಚನೆಯ ಬಳಿಕವೂ ಟೋಲ್ ಸಂಗ್ರಹ ಮುಂದುವರಿಸಿದ್ದ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕ ಸತೀಶ್ ಸೈಲ್ ನೇತೃತ್ವದಲ್ಲಿ ಕಾಂಗ್ರೆಸ್ಸಿಗರು ಪ್ರತಿಭಟನೆ ನಡೆಸಿ, ಅಂತೂ ಟೋಲ್ ಸಂಗ್ರಹ ಸ್ಥಗಿತಗೊಳಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯನ್ನ ಚತುಷ್ಪಥಗೊಳಿಸುವ ಕಾಮಗಾರಿ ಕಳೆದ ಎಂಟು ವರ್ಷಗಳಿಂದಲೂ ನಡೆಯುತ್ತಿದ್ದರೂ ಈವರೆಗೂ ಕಾಮಗಾರಿ ಪೂರ್ಣಗೊಳಿಸಿರಲಿಲ್ಲ. ಅಲ್ಲಲ್ಲಿ ಅರೆಬರೆ ಕಾಮಗಾರಿ ಮಾಡಿರುವುದು, ಅವೈಜ್ಞಾನಿಕವಾಗಿ ಡೈವರ್ಶನ್ಗಳನ್ನ ಇಟ್ಟಿರುವುದು, ಬೀದಿದೀಪಗಳನ್ನ ಅಳವಡಿಸದಿರುವುದು ಇತ್ಯಾದಿ ಅಸಮರ್ಪಕ ಕಾಮಗಾರಿಯಿಂದಾಗಿ ವಾಹನ ಸವಾರರು ದಿನನಿತ್ಯ ಅಪಘಾತಕ್ಕೆ ತುತ್ತಾಗುತ್ತಿದ್ದರು. ಹೆದ್ದಾರಿ ಬದಿ ಕೊರೆದ ಗುಡ್ಡಗಳನ್ನ ಮಳೆಗಾಲದಲ್ಲೂ ಸರಿಪಡಿಸದ ಹಿನ್ನೆಲೆಯಲ್ಲಿ ಅಪಾಯಕಾರಿಯಾಗಿ ಪರಿಣಮಿಸಿದ್ದವು. ಅಲ್ಲದೇ ಕಾರವಾರದ ಸುರಂಗ ಮಾರ್ಗಕ್ಕೆ ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದೆ ಸಂಚಾರಕ್ಕೆ ಮುಕ್ತ ಮಾಡಿಕೊಟ್ಟಿರುವ ಬಗ್ಗೆಯೂ, ಸುರಂಗದಲ್ಲಿ ಮಳೆ ನೀರು ಸೋರುತ್ತಿರುವ ಬಗ್ಗೆಯೂ ದೂರು ಕೇಳಿಬಂದಿತ್ತು.
ಈ ಹಿನ್ನೆಲೆಯಲ್ಲಿ ಇತ್ತೀಚಿಗೆ ಕಾರವಾರದಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಜಿಲ್ಲಾ ವ್ಯಾಪ್ತಿಯ ಮೂರೂ ಟೋಲ್ಗೇಟ್ಗಳನ್ನ ಬಂದ್ ಮಾಡಿ ಕಾರವಾರದ ಸುರಂಗ ಮಾರ್ಗವನ್ನೂ ಬಂದ್ ಮಾಡಲು ಸೂಚಿಸಿದ್ದರು. ಈ ನಿಟ್ಟಿನಲ್ಲಿ ಕಾರವಾರದ ಸುರಂಗವನ್ನ ಜಿಲ್ಲಾಧಿಕಾರಿ ಆದೇಶ ಹೊರಡಿಸಿ ಮುಚ್ಚಿಸಲಾಗಿತ್ತು. ಆದರೆ ಸೂಚನೆ ನೀಡಿ ಎರಡ್ಮೂರು ದಿನ ಕಳೆದರೂ ಜಿಲ್ಲೆಯ ಮೂರೂ ಟೋಲ್ಗೇಟ್ನಲ್ಲಿ ಸುಂಕ ವಸೂಲಾತಿ ಮುಂದುವರಿತ್ತು. ಈ ಹಿನ್ನೆಲೆಯಲ್ಲಿ ಅಂಕೋಲಾ ತಾಲೂಕಿನ ಹಟ್ಟಿಕೇರಿ ಟೋಲ್ ಗೇಟ್ ಬಳಿ ಇಂದು ಕಾಂಗ್ರೆಸ್ನಿಂದ ಪ್ರತಿಭಟನೆ ನಡೆಸಿ ಟೋಲ್ ಸಂಗ್ರಹ ಸ್ಥಗಿತಗೊಳಿಸಲಾಗಿದೆ.