ಕಾರವಾರ: ಬೆಳಕು ಮೀನುಗಾರಿಕೆ ಮಾಡದಂತೆ ಕೇಂದ್ರ ಸರ್ಕಾರದ ಆದೇಶವಿದ್ದರೂ ಅನಧಿಕೃತವಾಗಿ ಬೆಳಕು ಮೀನುಗಾರಿಕೆ ಮಾಡುತ್ತಿದ್ದ ಬೋಟನ್ನು ತಡೆದ ಮೀನುಗಾರರು ಮೂವರನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಅಂಕೋಲಾ ತಾಲೂಕಿನ ಗಾಬಿತಕೇಣಿಯಲ್ಲಿ ಮುಂಜಾನೆ ನಡೆದಿದೆ.
ದಿಢೀರ್ ಪ್ರತಿಭಟನೆಗೆ ಇಳಿದ ಸಾಂಪ್ರದಾಯಿಕ ಮೀನುಗಾರರು ಬೋಟನ್ನು ಜಪ್ತು ಮಾಡಿ ಕ್ರಮ ಜರುಗಿಸುವಂತೆ ಆಗ್ರಹಿಸಿದರು. ಸಾಂಪ್ರದಾಯಿಕ ಮೀನುಗಾರಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ಲೈಟ್ ಫಿಶಿಂಗ್ ನಡೆಸುತ್ತಿದ್ದುದನ್ನು ಕಂಡ ಮೀನುಗಾರರು ಅವರನ್ನು ತಡೆಯಲು ಯತ್ನಿಸಿದಾಗ ಅದರಲ್ಲಿರುವ ಕಾರ್ಮಿಕರು ಕಲ್ಲು ಮತ್ತು ಕಟ್ಟಿಗೆಯ ತುಂಡುಗಳಿಂದ ಹಲ್ಲೆ ಮಾಡುವ ಪ್ರಯತ್ನ ನಡೆಸಿದ ವೇಳೆ ಸ್ಥಳೀಯ ಮೀನುಗಾರರು ತೆರಳಿ ಆ ಬೋಟನ್ನು ಲಂಗರು ಹಾಕುವಲ್ಲಿ ಯಶಸ್ವಿಯಾದರು. ನಂತರ 112 ಪೊಲೀಸರಿಗೆ, ಮೀನುಗಾರಿಕೆ ಇಲಾಖೆಗೆ ಮತ್ತು ಕರಾವಳಿ ಕಾವಲು ಪಡೆಗೆ ಮಾಹಿತಿ ನೀಡಿದ್ದಾರೆ.
ಕರಾವಳಿ ಕಾವಲು ಪಡೆಯ ಪೊಲೀಸ ನಿರೀಕ್ಷಕ ಸುರೇಶ ನಾಯಕ ಮತ್ತು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ರೆನಿಟಾ ಡಿಸೋಜಾ, ಪಿಎಸ್ಐ ಪ್ರೇಮನಗೌಡ ಪಾಟೀಲ ಇವರು ಬೋಟ ಪರಿಶೀಲಿಸಿ ಬೋಟ್ ಮತ್ತು ಲೈಟ್ ಫಿಶಿಂಗ್ಗೆ ಬಳಸುತ್ತಿದ್ದ ಪರಿಕರಗಳನ್ನು ವಶಪಡಿಸಿಕೊಂಡರು.