ಕಾರವಾರ: ಗೀತೆ ರಚನೆಗಾರ ಡಾ.ಗಜಾನನ ಶರ್ಮಾ ರಚಿಸಿರುವ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಎಂಬ ಗೀತೆ ಜ.22 ರಂದು ರಾಮಮಂದಿರ ಪ್ರಾಣಪ್ರತಿಷ್ಠೆ ವೇಳೆ ಪ್ರಸಾರವಾಗಲಿದೆ. ಇವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ.
ಈ ಕುರಿತು ಅಯೋಧ್ಯೆ ಟ್ರಸ್ಟ್ ಎಕ್ಸ್ನಲ್ಲಿ ಟ್ವೀಟ್ ಮಾಡುವ ಮೂಲಕ ಖಚಿತಪಡಿಸಿದೆ. ನಾನು ರಚಿಸಿದ ಹಾಡನ್ನು ರಾಮಮಂದಿರ ಟ್ರಸ್ಟ್ನವರು ತೆಗೆದುಕೊಂಡಿದ್ದಕ್ಕೆ ಖುಷಿಯಾಗಿದೆ ಎಂದು ಡಾ.ಗಜಾನನ ಶರ್ಮಾ ಹೇಳಿದ್ದಾರೆ.
ಹೊಸನಗರದ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ರಾಮಕಥೆಗಾಗಿ ಚಾತುರ್ಮಾಸದ ವೇಳೆ ಉತ್ತಮ ಗೀತ ರಚನೆ ಮಾಡಲು ಡಾ.ಗಜಾನನ ಶರ್ಮಾರವರಿಗೆ ಹೇಳಿದ್ದರಂತೆ. ಆದರೆ ಶರ್ಮರವರ ಕಾರ್ಯ ಒತ್ತಡದಿಂದ ರಚನೆ ಮಾಡಲಾಗಿರಲಿಲ್ಲ. ಆದರೆ ಇವರು ಒಮ್ಮೆ ಕೇರಳಕ್ಕೆ ಹೋದಾಗ ತಂಪು ಪಾನಿಯದ ಜಾಹಿರಾತಿನಲ್ಲಿ ದಿಲ್ ಮಾಂಗೆ ಮೋರ್ ಎಂದು ಬರೆದಿದ್ದನ್ನು ಓದಿದರು. ಈ ಟೈಟಲ್ ನೋಡಿ ರಾಮನ ಕುರಿತು ಯಾಕಾಗಬಾರದು ಎಂದು ಅವರು ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಎಂದು ಗೀತೆ ರಚಿಸಿದರು. ಈ ರಚನೆಯನ್ನು ಶ್ರೀಗಳಿಗೆ ತೋರಿಸಿದಾಗ ಅದನ್ನು ಮುಂದುವರೆಸಲು ಹೇಳಿದರು. ಹೀಗೆ ಈ ಗೀತೆ ರಚನೆಯಾಯ್ತು ಎಂದು ಶರ್ಮಾರವರು ಹೇಳಿದರು.