ಗೋಕರ್ಣ: ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಾರ್ವಭೌಮ ಗುರುಕುಲದ ವಿದ್ಯಾರ್ಥಿಗಳು ಗುರುವಾರ ಇಲ್ಲಿನ ಭದ್ರಕಾಳಿ ಹೈಸ್ಕೂಲ್ ಮೈದಾನದಲ್ಲಿ ನಡೆದ ಪ್ರಾಥಮಿಕ ಇಲಾಖಾ ಶಾಲಾ ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾರೆ.
“ಗುರುಕುಲದ ಮಕ್ಕಳ ಸಾಧನೆ ಹೆಮ್ಮೆಪಡುವಂಥದ್ದು. ಮುಂದಿನ ಹಂತದಲ್ಲಿ ವಿದ್ಯಾರ್ಥಿಗಳು ಮತ್ತಷ್ಟು ಸಾಧನೆ ಮಾಡಲು ಇದು ಪ್ರೇರಣೆ. ಸಾಂಪ್ರದಾಯಿಕ ಹಾಗೂ ನವಯುಗ ಹೀಗೆ ಸಮಗ್ರ ಶಿಕ್ಷಣ ಪಡೆಯುತ್ತಿರುವ ನಮ್ಮ ವಿದ್ಯಾರ್ಥಿಗಳು ಆಟೋಟದಲ್ಲೂ ಕಡಿಮೆ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ಸಂತಸ ವ್ಯಕ್ತಪಡಿಸಿದ್ದಾರೆ.
ವಿಶ್ವಾಸ ಹೆಬ್ಬಾರ (100 ಮೀ. ಓಟ ಪ್ರಥಮ ಮತ್ತು 200 ಮೀ. ಓಟ ದ್ವಿತೀಯ), ರಘುವರ್ಧನ್ (600 ಮೀ. ಓಟ ದ್ವಿತೀಯ), ತಿರುನಾರಾಯಣ (100 ಮೀ. ಓಟ ತೃತೀಯ) ಬಹುಮಾನ ಪಡೆದಿದ್ದಾರೆ. ರೀಲೆ ಓಟದಲ್ಲಿ ವಿಶ್ವಾಸ್ ಸಂಗಡಿಗರು ಪ್ರಥಮ ಸ್ಥಾನ ಗಳಿಸಿದ್ದು, ಗುಂಡು ಎಸೆತದಲ್ಲಿ ತಿರುನಾರಾಯಣ(ದ್ವಿತೀಯ), ಚದುರಂಗದಲ್ಲಿ ವಿಶ್ವಾಸ ಹೆಬ್ಬಾರ, ತೇಜಸ್ವಿ ಹೆಗಡೆ ಮತ್ತು ಭುವನೇಶ ಆಚಾರಿ (ಪ್ರಥಮ) ಬಹುಮಾನ ಪಡೆದರು. ವಾಲಿಬಾಲ್ನಲ್ಲಿ ಗುರುಕುಲ ತಂಡ ಪ್ರಥಮ ಸ್ಥಾನ ಪಡೆದಿದ್ದು, ಶಾಲೆಯ ಖೋ ಖೋ ತಂಡ ಕೂಡಾ ಪ್ರಥಮ ಬಹುಮಾನ ಗೆದ್ದಿದೆ. ಯೋಗದಲ್ಲಿ ಸಮ್ಯಕ್ ಭಟ್ಟ, ಧನುಷ್ ಗಾಂವ್ಕರ್, ಜೀವನ ಟಿ. ಮತ್ತು ಆಯುಷ್ ಬಹುಮಾನ ನಡೆದಿದ್ದಾರೆ ಎಂದು ಮುಖ್ಯ ಶಿಕ್ಷಕಿ ಸೌಭಾಗ್ಯ ಭಟ್ಟ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಬಾಲಕಿಯ ವಿಭಾಗದ 600 ಮೀಟರ್ ಓಟದಲ್ಲಿ ಡಾರ್ನೀಶ ಹೆಚ್ ತೃತೀಯ, ಚದುರಂಗದಲ್ಲಿ ಶ್ರೇಯಾ ಸಾಲೆ ಮತ್ತು ಶರ್ವಾಣಿ ಎಮ್.ಆರ್ ಬಹುಮಾನ ಪಡೆದಿದ್ದಾರೆ. ಥ್ರೋಬಾಲ್ನಲ್ಲಿ ಶಾಲಾತಂಡ ಪ್ರಥಮ ಹಾಗೂ ಖೋ ಖೋದಲ್ಲಿ ದ್ವಿತೀಯ ಸ್ಥಾನ ಗೆದ್ದಿದೆ.
ಈ ಎಲ್ಲ ವಿಜೇತ ವಿದ್ಯಾರ್ಥಿಗಳು ಮುಂದಿನ ಹಂತಕ್ಕೆ ಆಯ್ಕೆಯಾಗಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಯನ್ನು ವಿವಿವಿ ಗೌರವಾಧ್ಯಕ್ಷ ಡಿ.ಡಿ.ಶರ್ಮಾ, ಪರಂಪರಾ ವಿಭಾಗದ ವರಿಷ್ಠಾಚಾರ್ಯ ಸತ್ಯನಾರಾಯಣ ಶರ್ಮ, ಶಿಕ್ಷಣ ಸಂಯೋಜಕಿ ಅಶ್ವಿನಿ ಉಡುಚೆ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಮುಖ್ಯಶಿಕ್ಷಕಿ ಸೌಭಾಗ್ಯ ಭಟ್ಟ ಮತ್ತಿತರರು ಶ್ಲಾಘಿಸಿದ್ದಾರೆ.