ಕಾರವಾರ: ಸಿಎಂ ಸಿದ್ದರಾಮಯ್ಯ ಅವರನ್ನು ಭಾಷಣದ ಭರಾಟೆಯಲ್ಲಿ ಏಕವಚನದಲ್ಲೇ ನಿಂದಿಸಿರುವ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದೀಗ ಈ ಘಟನೆ ಬೆನ್ನಲ್ಲೇ ಮತ್ತೊಂದು ಹೇಳಿಕೆ ನೀಡಿರುವ ಅವರು ತಮ್ಮ ಭಾಷಣದಲ್ಲಿ ಇಂದಿರಾ ಗಾಂಧಿ ಕುಟುಂಬಕ್ಕೆ ಶಾಪವಿರುವುದಾಗಿ ಸಂಸದ ಅನಂತ ಕುಮಾರ್ ಹೆಗಡೆ ಹೇಳಿದ್ದು, ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ಧಾರೆ.
ಇದೀಗ ಮಾತನಾಡುವ ಭರದಲ್ಲಿ, ಸಭ್ಯತೆಯನ್ನು ಸಿಎಂ ಸಿದ್ಧರಾಮಯ್ಯನವರು ಕಲಿಯಲಿ. ಪತ್ರಕರ್ತರು, ಶಾಸಕರಿಗೆ ಅವರು ಯಾವ ರೀತಿ ಏಕವಚನದಲ್ಲಿ ಮಾತಾಡ್ತಾರೆ. ನಮಗೆ ಬರೋದಿಲ್ವಾ? ನಮಗೆ ತಾಕತ್ತಿಲ್ವಾ? ನಾವು ನಮ್ಮ ತಾಯಿ ಎದೆ ಹಾಲು ಕುಡಿದು ಬೆಳೆದವರು, ಯಾವುದೋ ಬೇವರ್ಸಿ ಹಾಲಲ್ಲ. ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸೋ ಜಾಯಮಾನದವರಲ್ಲ.
ಒಂದು ಕೆನ್ನೆಗೆ ಹೊಡೆದರೆ ಹೊಡೆದವನ ತಲೆಯನ್ನೇ ಕಿತ್ತು ಬಿಸಾಕ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ತಾಯಿ ಹಾಲು ಕುಡಿದಿದ್ದಕ್ಕೆ ಗಂಡು ಭಾಷೆ ಜನ್ಮದಿಂದ ಬಂದಿದೆ. ಏಕವಚನದಲ್ಲಿ ನೀವು ಮಾತನಾಡಿದ್ರೆ ನಾವು ಏಕವಚನದಲ್ಲಿ ಮಾತನಾಡುತ್ತೀವಿ. ಟಿವಿಯಲ್ಲಿ ಚರ್ಚೆ ನಡಿಯುತ್ತಿದೆ. ನಡೀಲಿ. ಈಶ್ವರನಿಗೆ ರುದ್ರಾಭಿಷೇಕ ನಡೆಯುತ್ತಿದೆ ನಡೆಯಲಿ. ಸ್ವಾಭಿಮಾನಕ್ಕೆ ಧಕ್ಕೆ ಬಂದರೇ ಸುಮ್ಮನಿರುವ ಪ್ರಶ್ನೆಯೇ ಇಲ್ಲ. ಜೀವ ಇರೋ ತನಕ ತಲೆ ತಗ್ಗಿಸಲು ಸಾಧ್ಯ ಇಲ್ಲ ಎಂದಿದ್ದಾರೆ. ಇದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.