ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಪ್ರಕರಣ ದಿನೇ ದಿನೇ ಹೆಚ್ಚುತ್ತಿದ್ದು, ಕಳೆದ 10 ದಿನಗಳಲ್ಲಿ 21 ಜನರಿಗೆ ಸೋಂಕು ತಗುಲಿದೆ. ಬಿಸಿಲು ಹೆಚ್ಚಾದಂತೆ ಕಾಯಿಲೆ ಹೆಚ್ಚಾಗುವ ಆತಂಕವೂ ಜನರಲ್ಲಿ ಮನೆ ಮಾಡಿದೆ.
ಈ ಕುರಿತು ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನೀರಜ್, ಮಂಗನ ಕಾಯಿಲೆ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಅರಣ್ಯಕ್ಕೆ ಹೋಗುವುದನ್ನು ಕಡಿಮೆ ಮಾಡಲು ಸೂಚನೆ ನೀಡುತ್ತಿದ್ದೇವೆ. ಜ್ವರ, ಕೆಮ್ಮು ಲಕ್ಷಣ ಕಂಡು ಬಂದಲ್ಲಿ ಸಂಪರ್ಕಿಸಲು ಸೂಚನೆ ನೀಡಿದ್ದೇವೆ. ಸೋಂಕು ಹರಡುವಿಕೆ ತಡೆಗೆ ಸದ್ಯ ರೋಗ ನಿರೋಧಕ ಲಸಿಕೆ ಇಲ್ಲ. ಹೀಗಾಗಿ ಮುನ್ನೆಚ್ಚರಿಕೆ ಕ್ರಮ ವಹಿಸಿಕೊಳ್ಳುವುದೊಂದೇ ದಾರಿ ಮತ್ತು ಅತೀ ಅವಶ್ಯಕ ಎಂದು ತಿಳಿಸಿದ್ದಾರೆ.
ಎರಡನೆ ಬಾರಿ ಮತ್ತೆ ಮಂಗನ ಕಾಯಿಲೆಗೆ ತುತ್ತಾದರೆ ಜ್ವರ ಹೆಚ್ಚಾಗಿ ರಕ್ತ ಸ್ರಾವ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಸದ್ಯ ಜನರು ಹೆಚ್ಚಿನ ಮುಂಜಾಗ್ರತೆ ವಹಿಸುವುದು ಅತೀ ಅಗತ್ಯ. ಈ ಹಿಂದೆ ಬಿಡುಗಡೆ ಮಾಡಿದ್ದ ಲಸಿಕೆ ಹೆಚ್ಚಿನ ಪರಿಣಾಮಕಾರಿಯಾಗಿಲ್ಲ. ಹೀಗಾಗಿ ಆ ಲಸಿಕೆಯನ್ನು ಕೊಡುವುದನ್ನು ಈಗಾಗಲೇ ನಿಲ್ಲಿಸಿದ್ದೆವೆ. ಹೊಸ ಲಸಿಕೆ ಇದುವರೆಗೂ ಬಂದಿಲ್ಲ.
ಒಟ್ಟು 21 ಜನರ ಪೈಕಿ 8 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರು ಮಂಗಳೂರು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿದ ಆರು ಜನ ಸಿದ್ದಾಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದ 13 ಜನ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.