ಕಾರವಾರ: ಭೂಮಿಯ ತಾಪಮಾನವನ್ನು ಆರೋಗ್ಯಕರವಾಗಿಡಲು ನಾವು ಪರಿಸರ ವ್ಯವಸ್ಥೆಯನ್ನು ಕಾಪಾಡುವ ಅವಶ್ಯಕತೆ ಇಂದು ಎಲ್ಲಕ್ಕಿಂತ ಮುಖ್ಯವಾಗಿದೆ ಎಂದು ಕರಾವಳಿ ಹಾಗೂ ಕಡಲ ಪರಿಸರವ್ಯವಸ್ಥೆಯ ಘಟಕದ ವಲಯ ಅರಣ್ಯಧಿಕಾರಿ ಪ್ರಮೋದ್ ಬಿ. ಹೇಳಿದರು.
ತಾಲೂಕಿನ ಮಾಜಾಳಿಯ ಸೈಲವಾಡದ ಕೆರೆಯ ಸುತ್ತ ಕೈಗಾ ಬರ್ಡರ್ಸ್ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಕಡಲ ಜೀವಶಾಸ್ತ್ರ ಹಾಗೂ ವಾಣಿಜ್ಯ ಶಾಸ್ತ್ರ ಸ್ನಾತಕೋತ್ತರ ಕಾಲೇಜುಗಳು ಜಂಟಿಯಾಗಿ ಏರ್ಪಡಿಸಿದ್ದ ‘ನಮ್ಮ ಊರು ನಮ್ಮ ಖಗಸಂಕುಲ’ ಪಕ್ಷಿ ವೀಕ್ಷಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನಮ್ಮ ಸುತ್ತಲಿನ ಪರಿಸರವನ್ನು ಪ್ರೀತಿಸಲು ನಾವು ಪ್ರಕೃತಿಯನ್ನು ತೆರೆದ ಕಣ್ಣುಗಳಿಂದ ನೋಡಬೇಕು. ಆಗ ಮನುಷ್ಯನು ಪ್ರಕೃತಿಯ ಒಂದು ಭಾಗವೆನ್ನುವ ಅರಿವು ನಮಗಾಗುತ್ತದೆ. ಈ ನಿಟ್ಟಿನಲ್ಲಿ ಪರಿಸರವನ್ನು ಅರಿಯಲು ನಮಗೆ ಖಗಸಂಕುಲಗಳು ತುಂಬಾ ನೆರವಾಗುತ್ತವೆ ಎಂದರು.
ಪಕ್ಷಿ ವೀಕ್ಷಣೆಯ ಸಂದರ್ಭದಲ್ಲಿ ವಿವಿಧ 45 ಹಕ್ಕಿ ಪ್ರಭೇದಗಳನ್ನು ಗುರುತಿಸಲಾಯಿತು. ಪಕ್ಷಿವೀಕ್ಷಣೆ ಹಾಗೂ ದಾಖಾಲಾತಿಯ ಸಮಯದಲ್ಲಿ ಮರಬಾನಾಡಿ, ಬಿಳಿಹೊಟ್ಟೆಯ ಮೀನುಗಿಡುಗ, ಹಾವಕ್ಕಿ, ಬಿಳಿಹುಬ್ಬಿನ ಪಿಕಳಾರ, ಜವಗುಸೆಳೆವ, ಪೇಲವ ಬದನಿಕೆ ಪಕ್ಷಿಗಳು ವಿದ್ಯಾರ್ಥಿಗಳ ಗಮನ ಸೆಳೆದವು. ಕೈಗಾ ಬರ್ಡರ್ಸ್ ಕ್ಲಬ್ ಪರಿಣಿತರು ಹಕ್ಕಿಗಳ ಪ್ರಭೇದಗಳನ್ನು ಗುರುತಿಸುವುದು, ಅವುಗಳ ಗುಣಲಕ್ಷಣಗಳು, ಆಹಾರ ಪದ್ಧತಿ, ಹಾರಾಟ, ಕುಟುಂಬ ವ್ಯವಸ್ಥೆ ಹಾಗೂ ಇನ್ನಿತರ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಒದಗಿಸಿದರು.
ವಿದ್ಯಾರ್ಥಿಗಳಿಗೆ ರಾಜ್ಯದ 136 ಪಕ್ಷಿಗಳ ವಿವರ ಇರುವ ಚಿತ್ರಪಟಗಳನ್ನು ಕೈಗಾ ಬರ್ಡರ್ಸ್ ವತಿಯಿಂದ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕೈಗಾ ಬರ್ಡರ್ಸ್ ಸಂಯೋಜಕ ಜಿ. ಮೋಹನದಾಸ, ಸದಸ್ಯರುಗಳಾದ ಹರೀಶ್ ಕೆ., ದಿನೇಶ ಗಾಂವಕರ, ಸೂರಜಕುಮಾರ ಬಿ., ದತ್ತಾತ್ರೇಯ, ಕೌಶಲ ರಾಜ್, ಮಹಾಂತೇಶ ಓಶಿಮಠ ಹಾಗೂ ಕಾಲೇಜಿನ ಪ್ರಾಧ್ಯಾಪಕ ಡಾ. ಶಿವಕುಮಾರ ಹರಗಿ, ಅರಣ್ಯ ಇಲಾಖೆಯ ಪಕ್ಷಿ ಪರಿಣಿತ ಗೋಪಾಲ ನಾಯ್ಕ ಪಾಲ್ಗೊಂಡಿದ್ದರು.