ಕಾರವಾರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅಮೃತ ಸರೋವರ ನಿರ್ಮಾಣದಡಿ ಅಭಿವೃದ್ಧಿಪಡಿಸಲಾದ ಕೆರೆ ದಡದಲ್ಲಿ ಬುಧವಾರ ಗ್ರಾಮಸ್ಥರು ಅಂತರಾಷ್ಟ್ರೀಯ ಯೋಗ ದಿನ ಆಚರಿಸಿ ಸಂಭ್ರಮಿಸಿದರು.
ತಾಲೂಕಿನ ಹಣಕೋಣ, ದೇವಳಮಕ್ಕಿ, ಕೆರವಾಡಿ, ಚೆಂಡಿಯಾ, ಕಡವಾಡ ಗ್ರಾಮ ಪಂಚಾಯತ್ ನ ಒಟ್ಟು 7 ಕೆರೆಗಳ ದಡದಲ್ಲಿ ಗ್ರಾಮದ ಶಾಲಾ ಮಕ್ಕಳು, ನಾಗರಿಕರು ಸೇರಿದಂತೆ ಪಂಚಾಯತ್ ಸಿಬ್ಬಂದಿಗಳು ಸೇರಿ ಯೋಗಾಸನಗಳನ್ನು ಮಾಡುವ ಮೂಲಕ ಆರೊಗ್ಯ ಕಾಪಾಡಿಕೊಳ್ಳಲು ಇರುವ ಆರೋಗ್ಯ ಸೂತ್ರಗಳ ಕುರಿತು ಕಾರ್ಯಕ್ರಮ ನಡೆಸಿದರು.
ಕಾಮಗಾರಿ ಸ್ಥಳದಲ್ಲಿ ಯೋಗ ದಿನ ಆಚರಿಸುವ ಮೂಲಕ ಕೂಲಿಕಾರರಿಗೆ ಆರೋಗ್ಯದ ಅರಿವು, ಕಾಮಗಾರಿ ಮಹತ್ವ, ಸಾರ್ವಜನಿಕರಿಗೆ ನರೇಗಾ ಯೋಜನೆಯ ಮಾಹಿತಿ ಹಾಗು ಅಭಿವೃದ್ಧಿ ಕಾರ್ಯಗಳಲ್ಲಿ ಸಾರ್ವಜನಿಕರ ಪಾತ್ರದ ಕುರಿತು ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ರು, ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಶಾಲಾ ಮಕ್ಕಳು, ಸಾರ್ವಜನಿಕರು ಹಾಜರಿದ್ದರು.