ಕಾರವಾರ: ಶಿರಸಿ ಜಿಲ್ಲೆ ಬೇಡಿಕೆಯ ಬಗ್ಗೆ ಹೋರಾಟ ಸಮಿತಿಯವರು ಮನವಿ ಸಲ್ಲಿಸಿದ್ದಾರೆ. ಪ್ರತ್ಯೇಕ ಜಿಲ್ಲೆ ಬೇಡಿಕೆ ಬಗ್ಗೆ ಚರ್ಚಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಶಿರಸಿಯಲ್ಲಿ ಹೇಳಿದ್ದಾರೆ.
ಈ ರೀತಿಯ ಬೇಡಿಕೆ ರಾಜ್ಯದಲ್ಲಿ ಹಲವಾರಿದೆ. ಹೀಗಾಗಿ ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳುತ್ತೇವೆ ಎಂದರು. ಇಡೀ ದೇಶದ ಎಲ್ಲಾ ರಾಜ್ಯಗಳು ಅರಣ್ಯ ಹಕ್ಕಿನ ಸಮಸ್ಯೆ ಎದುರಿಸುತ್ತಿದ್ದು, ಹೀಗಾಗಿ ಈ ಸುಪ್ರೀಂ ಕೋರ್ಟ್ ನಲ್ಲಿದೆ. ಕೇಂದ್ರ ಸರ್ಕಾರ ಕೂಡ ಈ ವಿಚಾರದ ಬಗ್ಗೆ ನಮ್ಮನ್ನು ಕೇಳಿದ್ದು, ಮೂರು ತಲೆಮಾರಿನ ಬದಲು ಒಂದು ತಲೆಮಾರಿನ ಆಧಾರ ಪರಿಗಣಿಸಿ ಅವರನ್ನ ಅರಣ್ಯವಾಸಿಗಳೆಂದು ಹಕ್ಕು ಪತ್ರ ವಿತರಿಸಬೇಕು ಎಂದು ರಾಜ್ಯದ ಸ್ಪಷ್ಟ ಅಭಿಪ್ರಾಯವನ್ನ ಕೇಂದ್ರಕ್ಕೆ ಕಳುಹಿಸಿದ್ದೇವೆ. ಅದು ಕೇಂದ್ರದಿಂದ ಸುಪ್ರೀಂ ಕೋರ್ಟ್ ಗೆ ಮಂಡನೆಯಾಗಲಿದೆ ಎಂದರು.
ರಾಜ್ಯದ ಎಲ್ಲೆಲ್ಲಿ ಅರಣ್ಯವಾಸಿಗಳಿದ್ದಾರೋ ಅವರನ್ನು ಯಾವ ಕಾರಣಕ್ಕೂ ನಮ್ಮ ರಾಜ್ಯ ಸರ್ಕಾರ ಒಕ್ಕಲೆಬ್ಬಿಸಲ್ಲ. ಈಗಾಲೇ ಅಧಿಕಾರಿಗಳ ಸಭೆಯನ್ನೂ ನಡೆಸಿದ್ದು, ಸುಪ್ರೀಂ ತೀರ್ಪಿನವರೆಗೂ ಅಧಿಕಾರಿಗಳು ಕೂಡ ಅರಣ್ಯವಾಸಿಗಳಿಗೆ ತೊಂದರೆ ನೀಡದಂತೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಕಳಸಾ- ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ಗೋವಾದವರು ಎಲ್ಲಿಗೆ ಬೇಕಾದರೂ ಹೋಗಲಿ. ನಾವು ಸುಪ್ರೀಂ ಕೋರ್ಟ್ ನಿರ್ದೇಶಿತ ಪೀಠದ ವರದಿಯಂತೆ ಕಾಮಗಾರಿಗಳನ್ನ ನಡೆಸಲಿದ್ದೇವೆ. ಗೋವಾದವರು ಈಗಾಗಲೇ ಸುಪ್ರೀಂ ಕೋರ್ಟ್ ಗೆ ಹೋಗಿ ವಾಪಸ್ಸು ಬಂದಿದ್ದಾರೆ. ಸುಪ್ರೀಂ ಕೋರ್ಟ್ ನಿರ್ದೇಶಿತ ಪೀಠ ರಚನೆಯಾಗಿ, ಅದರ ವರದಿಯ ಆಧಾರದಲ್ಲಿ ನೋಟಿಫಿಕೇಶನ್ ಮಾಡಲಾಗಿದೆ. ಡಿಪಿಆರ್ ಒಪ್ಪಿಗೆ ನೀಡಿದೆ. ಹೀಗಾಗಿ ಸುಪ್ರೀಂ ಕೋರ್ಟ್ ನ ಆದೇಶ ಹಾಗೂ ಪೀಠದ ವರದಿಯಂತೆ ಕಾಮಗಾರಿಗಳನ್ನ ನಡೆಸಲಿದ್ದೇವೆ ಎಂದು ತಿಳಿಸಿದರು. ಕಾರವಾರದಲ್ಲಿ ವೈದ್ಯಕೀಯ ಕಾಲೇಜು ಈಗಾಗಲೇ ಇದೆ.
ಘಟ್ಟದ ಭಾಗದ ಜನರಿಗೆ ಅನುಕೂಲವಾಗುವಂತೆ, ಸಾರಿಗೆ ಸಂಪರ್ಕ ನೋಡಿ, ಜನಾಭಿಪ್ರಾಯದಂತೆ ಕುಮಟಾದಲ್ಲಿ ಆಸ್ಪತ್ರೆ ಮಾಡಲು ತೀರ್ಮಾನಿಸಲಾಗಿದ್ದು, ಆದಷ್ಟು ಬೇಗ ಆದೇಶಿಸಿ ನಾನೇ ಅದಕ್ಕೆ ಅಡಿಗಲ್ಲು ಹಾಕುತ್ತೇನೆ ಎಂದು ಭರವಸೆ ನೀಡಿದರು. ಹೈಕಮಾಂಡ್ ಸೂಚನೆ ನೀಡುತ್ತಿದ್ದಂತೆ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇವೆ. ಕೆಲವು ನಿಗಮಗಳ ಅವಧಿ ಮುಗಿದಿವೆ, ಕೆಲವರದ್ದು ಆಗಿಲ್ಲ. ಇವೆಲ್ಲವನ್ನೂ ಪರಿಶೀಲಿಸಿ ಅಧ್ಯಕ್ಷರು, ಸದಸ್ಯರ ನೇಮಕ ಮಾಡುತ್ತೇವೆ ಎಂದರು.