ಕಾರವಾರ: ಕೃಷಿ ಮಾಡಿಕೊಂಡು ಜೀವನ ನಡೆಸುವ ಜಮೀನನ್ನೆ ನಂಬಿಕೊಂಡಿರುವ ರೈತರಿಗೆ ಸಾಗುವಳಿ ಚೀಟಿ ನೀಡಲು ಸರ್ಕಾರಕ್ಕೆ ಒತ್ತಾಯಿಸಿ ಡಿ. ೨೬ ರಂದು ಬೆಳಿಗ್ಗೆ ೧೧ ಗಂಟೆಗೆ ಬೆಂಗಳೂರಿನ ಪ್ರೀಡ್ಂ ಪಾರ್ಕನಲ್ಲಿ ಬೆಂಗಳೂರು ಚಲೋ ಎಂಬ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಅಹಿಂದ ರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಆರ್. ಕಿರಣಕುಮಾರ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸದ ಅವರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುವುದು. ಇದು ಸಾಂಕೇತಿಕ ಪ್ರತಿಭಟನೆಯಾಗಿದೆ. ತಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೇ ಕಾರವಾರದಿಂದ ಬೆಂಗಳೂರಿಗೆ ಪಾದಯಾತ್ರೆ ಹೊರಡಲು ಸಹ ನಾವು ಸಿದ್ಧರಿದ್ದೇವೆ ಎಂದು ಹೇಳಿದರು.
ಉತ್ತರ-ಕನ್ನಡ ಜಿಲ್ಲೆಯ ಮುಂಡಗೋಡ, ಯಲ್ಲಾಪುರ ಸೇರಿದಂತೆ ಅನೇಕ ಕಡೆ ತಲೆತಲಾಂತರದಿಂದ ರೈತರು ವ್ಯವಸಾಯ ಮಾಡಿಕೊಂಡು ಬಂದಿದ್ದಾರೆ. ಹೀಗಿರುವಾಗ ಸಾಗುವಳಿ ಮಾಡಿಕೊಂಡು ಬಂದಿರುವ ಕೆಲವು ರೈತರ ಜಮೀನನ್ನು ಅರಣ್ಯ ಇಲಾಖೆಯವರು ರೈತರಿಂದ ಕಿತ್ತುಕೊಂಡಿದ್ದು, ಕೆಲವರಿಗೆ ಸಾಗುವಳಿಗೆ ನೀಡಿ, ಇನ್ನೂ ಕೆಲವರಿಗೆ ಸಾಗುವಳಿಗೆ ನೀಡದೆ ಅನ್ಯಾಯ ಮಾಡಿದ್ದಾರೆ. ಮೊದಲೆ ಕೈಗಾರಿಕೆಗಳಿಲ್ಲದ ಕಾರಣ ಜಿಲ್ಲೆಯಲ್ಲಿ ಉದ್ಯೋಗವಕಾಶ ಕಡಿಮೆ. ರೈತರಿಗೆ ಬೇಸಾಯ ಮಾಡಲು ಅವಕಾಶ ನೀಡಬೇಕು. ಅದಕ್ಕಾಗಿ ಡಿ. ೨೬ ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುತ್ತಿದ್ದು ಈ ಧರಣಿಗೆ ರಾಜ್ಯದ ಎಲ್ಲ ರೈತ ಮಿತ್ರರು, ಬುದ್ದಿಜೀವಿಗಳು, ಪ್ರಜ್ಞಾವಂತರು, ದಲಿತಪರ ಸಂಘಟನೆಗಳು, ರೈತಪರ ಸಂಘಟನೆಗಳು, ಒಗ್ಗಟ್ಟಿನಿಂದ ಭಾಗವಹಿಸಿ ಉಳುಮೆ ಮಾಡುತ್ತಿರುವ ರೈತರಿಗೆ ಸಾಗುವಳಿ ಕೊಡಿಸಿ ಕೊಡಲು ಸಹಕಾರ ನೀಡಬೇಕು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಚಿದಾನಂದ ಎಚ್ ರೈತರಿಗೆ ಸ್ವಾಭಿಮಾನದಿಂದ ಬದುಕುವಂತಾಗಲು ಸರ್ಕಾರ ಜಮೀನಿನ ಪಟ್ಟಾ ನೀಡಬೇಕು. ಅದನ್ನು ಬಿಟ್ಟು ಸರ್ಕಾರ ರೈತರ ಮೂಗಿಗೆ ತುಪ್ಪ ಸವರುವ ಕಾರ್ಯ ಮಾಡುತ್ತಿದ್ದು, ಚುನಾವಣಾ ಸಂದರ್ಭದಲ್ಲಿ ಭರವಸೆ ನೀಡಿ, ಮತಗಳಿಕೆಗಾಗಿ ಬಳಸಿಕೊಳ್ಳುತ್ತಿದೆ. ಅದಕ್ಕಾಗಿ ಬೃಹತ್ ಪ್ರತಿಭಟನೆಗೆ ಮುಂದಾಗಿದ್ದು, ಅದಕ್ಕೆ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರುಸೇನೆ, ಕರ್ನಾಟಕ ಅಹಿಂದ ರಕ್ಷಣಾ ಸಮಿತಿ, ದಲಿತ ಸಂಘರ್ಷ ಸಮಿತಿ (ಕೆಂಪುಸೇನೆ) ಸೇರಿದಂತೆ ಅನೇಕ ಸಂಘಟನೆಗಳು ಬೆಂಬಲವನ್ನು ನೀಡುತ್ತಿದೆ. ಉಳುಮೆ ಮಾಡುತ್ತಿದ್ದ ಭೂಮಿಯನ್ನು ಅರಣ್ಯ ಇಲಾಖೆ ರೈತರಿಂದ ಕಿತ್ತುಕೊಂಡಿರುವುದನ್ನು ಖಂಡಿಸಿ, ಈ ಕೂಡಲೇ ರೈತರಿಗೆ ಸಾಗುವಳಿ ಚೀಟಿ ನೀಡುವಂತೆ ಒತ್ತಾಯಿಸಿ ಡಿ. ೨೬ ರಂದು ಬೆಂಗಳೂರಿನಲ್ಲಿ ಅರಣ್ಯ ಅತಿಕ್ರಮಣದಾರರ ನಡೆ, ಬೆಂಗಳೂರು ಕಡೆ ಎಂಬ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಮುಖಂಡರಾದ ವಿ.ವಿ.ರಾಮಚಂದ್ರ, ಬಾಬಾನ್ ಸಾಹೇಬ ರಾಯಚೂರು, ಆರ್. ನಾರಾಯಣ ಸ್ವಾಮಿ, ಬಿ.ಜಿ. ವೆಂಕಟರಾಜು, ಅಹಿಂದ ಸಜ್ಜನ, ಆರ್. ಮಂಜುನಾಥ ಸೇರಿದಂತೆ ಅನೇಕರು ಇದ್ದರು.