ಕಾರವಾರ: ವೀರ ಸೇನಾನಿ ಕಾರವಾರದ ಹೆಂಜಾ ನಾಯ್ಕ ಜಯಂತಿಯನ್ನು ಬುಧವಾರ ಅಭಿಮಾನಿ ಬಳಗ ಹಾಗೂ ವಿವಿಧ ಸಮಾಜದ ಜನರು ಸೇರಿ ನಗರದಲ್ಲಿ ಅದ್ದೂರಿಯಾಗಿ ಆಚರಿಸಿದರು. ಹೆಂಜಾ ನಾಯ್ಕ ಅವರ ಸಮಾಧಿಗೆ ಪೂಜೆ ಸಲ್ಲಿಸಿ ಬೃಹತ್ ಮೆರವಣಿಗೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಕೋಡಿಭಾಗದಿಂದ ಮಾಲಾದೇವಿ ಮೈದಾನದವರೆಗೆ ಬಂದ ಮೆರವಣಿಯೊಂದಿಗೆ ಡೊಳ್ಳು ಕುಣಿತ ಸೇರಿದ ವಿವಿಧ ಕಲಾತಂಡಗಳು ಸೇರಿಕೊಳ್ಳುವುದರಿಂದ ಮೆರವಣಿಗೆ ಅದ್ದೂರಿಯಾಗಿ ಕಾರವಾರ ಕೋಡಿಭಾಗ ರಸ್ತೆ ಮೂಲಕ ಸಾಗಿತು. ಇಲ್ಲಿನ ಹೂವಿನಚೌಕ್ನಲ್ಲಿರುವ ವೃತ್ತಕ್ಕೆ ಹೆಂಜಾ ನಾಯ್ಕ ವೃತ್ತ ಎಂದು ನಾಮಕರಣ ಮಾಡಲಾಗಿದ್ದು, ಶಾಸಕಿ ರೂಪಾಲಿ ನಾಯ್ಕ ಹಾಗೂ ಕೋಮಾರಪಂತ ಸಮಾಜದ ಮುಖಂಡರು, ಹೆಂಜಾ ನಾಯ್ಕ ಅಭಿಮಾನಿಗಳು ಕೇಕ್ ಕತ್ತರಿಸಿದರು. ಬಳಿಕ ಮೆರವಣಿಗೆಯು ಸವಿತಾ ವೃತ್ತ, ಸುಭಾಷ ವೃತ್ತ ಹಾಗೂ ಗ್ರೀನ್ ಸ್ಟ್ರೀಟ್ ರಸ್ತೆಯ ಮೂಲಕ ನಗರಸಭೆ ಉದ್ಯಾನವನ್ನು ತಲುಪಿತು.
ಉದ್ಯಾನದಲ್ಲಿದ್ದ ಹೆಂಜಾ ನಾಯ್ಕ ಪ್ರತಿಮೆಗೆ ಅವರ ಕುಟುಂಬಸ್ಥರಿಂದ ಹಾಲಿನ ಅಭಿಷೇಕ ನಡೆಯಿತು. ಉದ್ಯಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಹೆಂಜಾ ನಾಯ್ಕ ಅಭಿಮಾನಿಗಳನ್ನು ಉದ್ದೇಶಿಸಿ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಹೆಂಜಾ ನಾಯ್ಕ ಅವರು ಬ್ರಿಟಿಷರೊಂದಿಗೆ ಹೋರಾಡಿದ್ದು, ಅವರ ಹೋರಾಟ ಇಂದಿನ ಯುವಕರಿಗೆ ಸ್ಪೂರ್ತಿ ಯಾಗಿದೆ. ಅಪ್ರತಿಮ ಹೋರಾಟಗಾರರನನ್ನು ನಾವು ನೆನಪಿಸಿಕೊಳ್ಳುತ್ತಿರಬೇಕು ಎಂದರು. ಹೆಂಜಾ ನಾಯ್ಕ ಅವರು ಎಲ್ಲಾ ಸಮಾಜದ ಆಸ್ತಿ ಅದಕ್ಕಾಗಿ ಅವರ ಸವಿನೆನಪಿಗಾಗಿ ಅವರ ಹೆಸರು ಚಿರಕಾಲವಾಗಿ ಇರುವಂತೆ ಅವರ ಹೆಸರನ್ನು ಬಿಜೆಪಿ ಸರ್ಕಾರ ಬಂದ ಮೇಲೆ ಕೋಡಿಬಾಗ ರಸ್ತೆಗೆ ನಾಮಕರಣ ಮಾಡಲಾಗಿದೆ ಎಂದು ಶಾಸಕಿ ರೂಪಾಲಿ ನಾಯ್ಕ ತಿಳಿಸಿದರು.
ಸರ್ಕಾರದಿಂದ ಕಾರವಾರದಲ್ಲಿ ಹೆಂಜಾ ನಾಯ್ಕ ಹೆಸರಿನಲ್ಲಿ ಸೈನಿಕ ತರಬೇತಿ ಶಾಲೆಯನ್ನು ಆರಂಭಿಸಿದ್ದೆವೆ ಇದಕ್ಕೆ ಸಹಕಾರ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ಅಭಿನಂದನೆಗಳನ್ನು ಅವರು ಸಲ್ಲಿಸಿದರು.
ಯುವಕರಿಂದ ದೇಶ ಕಟ್ಟಲು ಸಾಧ್ಯ ಎನ್ನಲು ಹೆಂಜಾ ನಾಯ್ಕ ಅವರೇ ಉದಾಹರಣೆಯಾಗಿದ್ದಾರೆ. ಕಷ್ಟ ಕಾಲದಲ್ಲಿ ನಮ್ಮ ಜನರನ್ನು ರಕ್ಷಣೆ ಮಾಡಿದ್ದಲ್ಲದೆ ಚಾಣಾಕ್ಷತನದಿಂದ ಬ್ರೀಟಿಷರ ಸೈನ್ಯದ ವಿರುದ್ಧ ಹೋರಾಡಿದ್ದಾರೆ ಎಂದರು. ಸರಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೇನಾ ತರಬೇತಿ ಶಾಲೆ ನಡೆಯುತ್ತಿದೆ. ಆದಷ್ಟು ಬೇಗ ಸ್ವಂತ ಕಟ್ಟಡ ನಿರ್ಮಿಸಿ, ಅಲ್ಲಿ ಶಾಲೆ ನಡೆಸಲಾಗುವುದು. ಕೇಂದ್ರ ರಕ್ಷಣಾ ಸಚಿವರಿಂದಲೇ ಈ ಶಾಲೆ ಉದ್ಘಾಟನೆ ಮಾಡಿಸುತ್ತೇವೆ ಎಂದು ಶಾಸಕರು ಹೇಳಿದರು.
ನಗರಸಭೆ ಅಧ್ಯಕ್ಷ ಡಾ. ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ ಪಿ. ನಾಯ್ಕ, ಹೆಂಜಾ ನಾಯ್ಕ ಅಭಿಮಾನಿ ಬಳಗದ ಅಧ್ಯಕ್ಷ ರಾಘು ನಾಯ್ಕ, ಗೌರವಾಧ್ಯಕ್ಷ ಡಾ. ಗಜೇಂದ್ರ ನಾಯ್ಕ, ಸಮಾಜ ಸೇವಕ ಮಾಧವ ನಾಯಕ ಹಾಗೂ ಸಾರ್ವಜನಿಕರು ಇದ್ದರು.