News Karnataka Kannada
Friday, May 10 2024
ಉತ್ತರಕನ್ನಡ

ಕಾರವಾರ: ಕೆಟಿಪಿಪಿ ಕಾಯ್ದೆಯ ಮಾರ್ಗಸೂಚಿಗಳನ್ನ ಅರಿತು ಕಾರ್ಯ ನಿರ್ವಹಿಸಿ- ಪ್ರಿಯಾಂಗಾ ಎಂ

Karawara
Photo Credit : By Author

ಕಾರವಾರ: ಸಾರ್ವಜನಿಕರ ಹಣವನ್ನ ಸರಿಯಾದ ರೀತಿಯಲ್ಲಿ ಕಾನೂನುಬದ್ಧವಾಗಿ ಉಪಯೋಗಿಸುವ ನಿಟ್ಟಿನಲ್ಲಿ ಸರಕಾರ ಕೆಟಿಪಿಪಿ ಕಾಯ್ದೆ ಜಾರಿಗೊಳಿಸಿದ್ದು, ಪ್ರತಿಯೊಬ್ಬ ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತುಕೊಂಡು ಸರಕಾರದಿಂದ ವಿವಿಧ ಇಲಾಖೆಗಳಿಗೆ ಬರುವ ಅನುದಾನವನ್ನು ಪೂರ್ವ ನಿಯೋಜಿತ ಯೋಜನಾಬದ್ಧವಾಗಿ ಕೆಟಿಪಿಪಿ ಕಾಯ್ದೆಯ ನಿಯಮಾನುಸಾರ ಖರ್ಚು ಮಾಡಬೇಕಾಗುತ್ತದೆ ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ರಿಯಾಂಗಾ ಎಂ ಅವರು ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಪಂಚಾಯತ್‌ನ ಸಭಾಂಗಣದಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಜಿಲ್ಲಾ ಕಚೇರಿಗಳ ಮುಖ್ಯಸ್ಥರು, ತಾಲೂಕು ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ಲೆಕ್ಕಾಧಿಕಾರಿಗಳು, ಲೆಕ್ಕಪತ್ರ ನಿರ್ವಹಣೆ ಮಾಡುತ್ತಿರುವ ಸಿಬ್ಬಂದಿಗೆ ಲೆಕ್ಕಪತ್ರ, ಕೆಟಿಪಿಪಿ, ಐಟಿ/ಜಿಎಸ್‌ಟಿ ಮತ್ತು ಲೆಕ್ಕಪರಿಶೋಧನಾ ಕಾರ್ಯದ ಕುರಿತು ಜಿಲ್ಲಾ ಪಂಚಾಯತ್‌ನಿಂದ ಗುರುವಾರ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿ ವರ್ಷವೂ ಲೆಕ್ಕಪತ್ರ, ಕೆಟಿಪಿಪಿ, ಐಟಿ/ಜಿಎಸ್‌ಟಿ ಮತ್ತು ಲೆಕ್ಕಪರಿಶೋಧನಾ ಕಾರ್ಯ ಹಾಗೂ ನಿರ್ವಹಣೆಯಲ್ಲಿ ಸಮಸ್ಯೆಗಳು ತಲೆದೂರುತಿವೆ. ಈ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿವೆ. ಈ ದೂರುಗಳ ನಿವಾರಣೆಗೆ ಒಂದಿಲ್ಲೊಂದು ಅಡೆತಡೆಗಳಿವೆ. ಇಂತಹ ಸಮಸ್ಯೆಗಳ ನಿವಾರಣೆಗೆ ಪೂರಕವಾಗಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಈ ಕಾರ್ಯಗಾರ ಆಯೋಜಿಸಲಾಗಿದೆ. ಇದೊಂದು ಉತ್ತಮ ಅವಕಾಶವಾಗಿದ್ದು, ಈ ಕಾರ್ಯಗಾರದಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬರು ತಮಗಿರುವ ಸಮಸ್ಯೆ, ಸಂದೇಹಗಳಿಗೆ ವಿಷಯ ಪರಿಣಿತರಿಂದ ಮಾಹಿತಿ ಪಡೆದುಕೊಡು ತಮ್ಮ ಹಂತದಲ್ಲಿನ ಆಡಳಿತ ಸುಧಾರಣೆಗೆ ಹೆಚ್ಚಿನ ಆಧ್ಯತೆ ನೀಡಬೇಕು ಎಂದರು.

ತರಬೇತುದಾರರಾದ ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ಮುಖ್ಯ ಲೆಕ್ಕಾಧಿಕಾರಿಗಳಾದ ಟಿ.ಆರ್. ಶೋಭಾ ಅವರು ಮಾತನಾಡಿ, ಸರ್ಕಾರದ ಬಜೆಟ್, ಯೋಜನೆಗಳ ಅನುಷ್ಠಾನ, ಹಣಕಾಸು ಹಾಗೂ ಸಂಬಂಧಿಸಿದ ಇಲಾಖೆಯ ಆದೇಶ ಪ್ರತಿಯನ್ನ ಮುಂದಿಟ್ಟುಕೊಂಡು ಅಧಿಕಾರಿಗಳು ಕಾರ್ಯನಿರ್ವಹಿಸಬೇಕು.

ಸರ್ಕಾರದಿಂದ ಬಿಡುಗಡೆಯಾಗುವ ಪ್ರತೀ ಅನುದಾನವನ್ನು ಕೆಟಿಪಿಪಿ ಕಾಯ್ದೆಯ ಮಾರ್ಗಸೂಚಿಗಳ ಅನುಸಾರವೇ ಕಾರ್ಯ ನಿರ್ವಹಿಸಬೇಕಿದ್ದು, ಪ್ರತಿಯೊಬ್ಬ ಅಧಿಕಾರಿಗಳು ಕೆಟಿಪಿಪಿ ಕಾಯ್ದೆ ಎಲ್ಲಿ ಅನ್ವಯಿಸುತ್ತದೆ. ಎಲ್ಲಿ ಅನ್ವಯಿಸವುದಿಲ್ಲ ಎಂಬುವುದನ್ನ ಅರಿತುಕೊಂಡಿರಬೇಕು. ಜೊತೆಗೆ ಕೆಟಿಪಿಪಿ ಕಾಯ್ದೆಯ ಪ್ರತಿಯೊಂದು ಸೆಕ್ಷನ್‌ಗಳ ಕುರಿತು ಸಮಗ್ರವಾಗಿ ಅರಿತುಕೊಂಡು ಉತ್ತಮವಾಗಿ ಆಡಳಿತ ನಡೆಸಲು ಅಧಿಕಾರಿಗಳು ಪ್ರಯತ್ನಿಸಬೇಕು. ಜಿಲ್ಲಾ ಮಟ್ಟದ ತರಬೇತಿಯಲ್ಲಿ ಪಾಲ್ಗೊಂಡವರು ಕೆಟಿಪಿಪಿ ಕಾಯ್ದೆಯ ಬಗ್ಗೆ ತಿಳಿದುಕೊಂಡ ಅಂಶಗಳನ್ನ ತಮ್ಮ ಅಧೀನದಲ್ಲಿನ ಸಿಬ್ಬಂದಿಗೆ ವಿವರಿಸಿ ಆಡಳಿತ ಸುಧಾರಣೆಗೆ ಮುಂದಾಗಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್‌ನ ಮುಖ್ಯ ಲೆಕ್ಕಾಧಿಕಾರಿ ಸತೀಶ್ ಪವಾರ್ ಮಾತನಾಡಿ, ಜಿಲ್ಲೆಯಲ್ಲಿರುವ 229 ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ ಲೆಕ್ಕಪತ್ರ, ಕೆಟಿಪಿಪಿ, ಐಟಿ/ಜಿಎಸ್‌ಟಿ ಮತ್ತು ಲೆಕ್ಕಪರಿಶೋಧನಾ ಕಾರ್ಯದ ಕುರಿತು ಈಗಾಗಲೇ ತರಬೇತಿ ನೀಡಲಾಗಿದೆ. ಜೊತೆಗೆ ಅಗತ್ಯ ಮಾಹಿತಿಯನ್ನು ಒದಗಿಸಲಾಗಿದ್ದು, ರಾಜ್ಯದಲ್ಲಿ ಪ್ರಥಮ ಬಾರಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಆಯೋಜಿಸಿರುವ ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ನಂತರದಲ್ಲಿ ತರಬೇತುದಾರರಾದ ಬೆಂಗಳೂರಿನ ಚಾರ್ಟರ್ಡ್ ಅಕೌಂಟೆಂಟ್ಸ್‌ಗಳಾದ ಸುಬ್ಬರಾಯ ಹೆಗಡೆ ಅವರು ಜಿಎಸ್‌ಟಿ ಹಾಗೂ ಐಟಿ ವಿಷಯ ಕುರಿತು, ಜಿಲ್ಲಾ ಪಂಚಾಯತ್‌ನ ಮುಖ್ಯ ಲೆಕ್ಕಾಧಿಕಾರಿಗಳಾದ ಸತೀಶ್ ಜಿ. ಪವಾರ ಮತ್ತು ಲೆಕ್ಕಾಧಿಕಾರಿಗಳಾದ ಡಾ. ಆನಂದಸಾ ಮೋ. ಹಬೀಬಾ ಅವರು ಲೆಕ್ಕಪರಿಶೋಧನಾ ಕಾರ್ಯ ವಿಷಯ ಕುರಿತು ತರಬೇತಿ ನೀಡಿದರು.

ಕಾರ್ಯಗಾರದಲ್ಲಿ ಜಿಲ್ಲಾ ಪಂಚಾಯತ್‌ನ ಆಡಳಿತ ವಿಭಾಗದ ಉಪ ಕಾರ್ಯದರ್ಶಿಗಳಾದ ನಾಗೇಶ್ ರಾಯ್ಕರ್, ಅಭಿವೃದ್ಧಿ ವಿಭಾಗದ ಉಪ ಕಾರ್ಯದರ್ಶಿಗಳಾದ ಡಿ.ಎಂ. ಜಕ್ಕಪ್ಪಗೋಳ್, ಮುಖ್ಯ ಯೋಜನಾಧಿಕಾರಿಗಳಾದ ವಿನೋದ್ ಅಣ್ವೇಕರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಐಇಸಿ ಸಂಯೋಜಕರಾದ ಫಕ್ಕೀರಪ್ಪ ತುಮ್ಮಣ್ಣನವರ ಹಾಗೂ ಜಿಲ್ಲಾ ಪಂಚಾಯತ್‌ನ ಸಿಬ್ಬಂದಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು