ಕಾರವಾರ: ಉತ್ತರ ಕನ್ನಡ ಹಾಗೂ ಹೊರ ಜಿಲ್ಲೆಗಳಲ್ಲಿ ಅಪರಾಧ ಕೃತ್ಯಗಳನ್ನು ನಡೆಸಿ ಪೋಕ್ಸೋ, ಅಕ್ರಮ ಜಾನುವಾರು ಸಾಗಾಟ, ಗಾಂಜಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರಿಗೆ ಬೇಕಾಗಿದ್ದ ಇಬ್ಬರು ಖತರ್ನಾಕ್ ಅಂತರಾಜ್ಯ ಖದೀಮರನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸರು 10 ತಂಡಗಳಾಗಿ ಮಂಗಳವಾರ ಭಟ್ಕಳದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಭಟ್ಕಳ ತಾಲೂಕಿನ ಬಿಲಾಲಖಂಡದ ಅಕ್ರಮ ಸಯ್ಯದ ಮೊಹಮ್ಮದ ಹುಸೇನ್ (20) ಹಾಗೂ ಗೋಪಾಲಕೃಷ್ಣ ರೋಡ್ನ ನಿವಾಸಿ ಮೊಹಮ್ಮದ ಇಮ್ರಾನ್ ಮೊಹಮ್ಮದ ಬಾಷಾ ಶೇಖ(33) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿ ಅಕ್ರಮ ಸಯ್ಯದ ಈತನು ಭಟ್ಕಳ ಶಹರ ಪೊಲೀಸ್ ಠಾಣೆ, ಭಟ್ಕಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಜಾನುವಾರು ಸಾಗಾಟ, ಗಾಂಜಾ ಸಾಗಾಟ, ಮನೆಕಳ್ಳತನ ಮತ್ತು ಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದರೋಡೆ ಪ್ರಕರಣ ಹಾಗೂ ಉಡುಪಿ ಜಿಲ್ಲೆಯಲ್ಲಿ ಪೊಕ್ಸೋ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದನು.
ಇನ್ನು ಆರೋಪಿ ಮೊಹಮ್ಮದ ಇಮ್ರಾನ್ ಈತನು ಭಟ್ಕಳ ಶಹರ ಪೊಲೀಸ್ ಠಾಣೆ, ಭಟ್ಕಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಜಾನುವಾರು ಸಾಗಾಟ, ಗಾಂಜಾ ಸಾಗಾಟ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದನು.