ಕಾರವಾರ: ಅಲಿಗದ್ದಾದಲ್ಲಿರುವ ಆಹಾರ ಇಲಾಖೆಯ ಗೋದಾಮಿನಲ್ಲಿ ಅನುಮತಿ ಇಲ್ಲದೆ ಅಕ್ಕಿ, ಇತರ ಧಾನ್ಯ ಸಂಗ್ರಹಿಸಬಾರದು. ಸಂಗ್ರಹಿಸಿದರೆ ಗೋದಾಮನ್ನೇ ಸೀಜ್ ಮಾಡುವುದಾಗಿ ತಹಸೀಲ್ದಾರ್ ಎನ್.ಎಫ್. ನರೊನಾ ಎಚ್ಚರಿಸಿದ್ದಾರೆ.
ಅಲಿಗದ್ದಾ ಗೋದಾಮಿನಲ್ಲಿ ಧಾನ್ಯ ಸಂಗ್ರಹದಿಂದ ಹುಳಗಳು ಆಗಿ ಸಮೀಪದ ಮನೆಗಳಲ್ಲಿ ವಾಸಕ್ಕೆ ತೊಂದರೆ ಆಗುತ್ತಿತ್ತು. ಆ ಹಿನ್ನೆಲೆಯಲ್ಲಿ ಗೋದಾಮಿನಲ್ಲಿ ಧಾನ್ಯ ಸಂಗ್ರಹ ಮಾಡದಂತೆ ಈ ಹಿಂದೆ ಎಚ್ಚರಿಕೆ ನೀಡಲಾಗಿತ್ತು. ಆದರೂ, ಮತ್ತೆ ಧಾನ್ಯ ಸಂಗ್ರಹ ಮಾಡಿದ್ದರಿಂದ ಹುಳಗಳು ಸೃಷ್ಟಿಯಾಗಿ ಸಮೀಪದ ಮನೆಗಳನ್ನು ಆವರಿಸಿಕೊಂಡಿದೆ. ಅದರಿಂದ ಸ್ಥಳೀಯರು ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಬಂದ ತಹಸೀಲ್ದಾರ್ ಎನ್.ಎಫ್. ನರೊನಾ, ಗೋದಾಮಿನಲ್ಲಿ ಧಾನ್ಯ ಸಂಗ್ರಹ ಮಾಡದಂತೆ ತಾಕೀತು ಮಾಡಿದರು. ಈಗಿರುವ ಗೋಧಿ, ಅಕ್ಕಿಯನ್ನು ಭಾನುವಾರದೊಳಗೆ ಖಾಲಿ ಮಾಡಬೇಕು. ಇಲ್ಲದೇ ಇದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮತ್ತೆ ಇದೇ ಗೋದಾಮಿನಲ್ಲಿ ಧಾನ್ಯ ಸಂಗ್ರಹಿಸುವುದಾದರೆ ತಹಸೀಲ್ದಾರ ಅವರಿಂದ ಅನುಮತಿ ಪಡೆಯಬೇಕು ಎಂದು ತಿಳಿಸಲಾಗಿದೆ ಎಂದು ತಹಸೀಲ್ದಾರ್ ತಿಳಿಸಿದರು. ಅಲಿಗದ್ದಾದಲ್ಲಿರುವ ಗೋದಾಮಿನಲ್ಲಿ ಇಟ್ಟಿರುವ ಧಾನ್ಯದಿಂದ ಹುಟ್ಟಿಕೊಂಡ ಹುಳುಗಳು ಅಕ್ಕ-ಪಕ್ಕದ ಮನೆಯ ಊಟದ ತಟ್ಟೆಯಲ್ಲಿ ಬೀಳುತ್ತಿವೆ. ಮಕ್ಕಳ ಕಿವಿಯೊಳಗೆ ಸೇರುತ್ತಿವೆ. ಇದರ ಸಮಸ್ಯೆ ತಾಳಲಾರದೆ ಸ್ಥಳೀಯರು ಅನೇಕ ಬಾರಿ ತಾಲೂಕು ಆಡಳಿತಕ್ಕೆ ತಿಳಿಸಿದ್ದರು. ಸಮಸ್ಯೆ ಪುನರಾವರ್ತನೆ ಆಗಿದ್ದರಿಂದ ಮತ್ತೊಮ್ಮೆ ಆಕ್ರೋಶ ಹೊರಹಾಕಿದರು.