ಕಾರವಾರ:ಮೀನುಗಾರಿಕೆ ಮತ್ತು ಮೀನುಗಾರಿಕೆ ಮಾರುಕಟ್ಟೆಯನ್ನು ಹಾಗೂ ಮೀನುಗಾರರ ಸರ್ವತೋಮುಖ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ಪ್ರಾಥಮಿಕ ಹಂತದಿಂದಲೇ ಕ್ರಮವಹಿಸಿದೆ ಎಂದು ಕೇಂದ್ರ ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವ ಪರಷೋತ್ತಮ ರುಪಾಲ ಹೇಳಿದರು.
ಸಾಗರ ಪರಿಕ್ರಮ ಜಲಯಾನ-2023 ಕಾರ್ಯಕ್ರಮದ ಭಾಗವಾಗಿ ನಗರದ ಜಿಲ್ಲಾ ರಂಗಮದಿರದಲ್ಲಿ ಜಿಲ್ಲೆಯ ಮೀನುಗಾರರಿಗೆ ಮತ್ಸ್ಯ ಸಂಪದ ಯೋಜನೆಯಡಿ ಫಲಾನುಭವಿಗಳಿಗೆ ವಿವಿಧ ಸೌಲಭ್ಯ ವಿತರಿಸಿ ಮಾತನಾಡಿದ ಅವರು, ಮೀನುಗಾರಿಕೆಯನ್ನು ಅಭಿವೃದ್ಧಿಪಡಿಸುವುದೇ ಕೇಂದ್ರ ಸರ್ಕಾರದ ಮುಖ್ಯ ಧ್ಯೇಯವಾಗಿದೆ ಇದಕ್ಕಾಗಿಯೇ ಸರ್ಕಾರವು ನೀಲಿ ಕ್ರಾಂತಿಯನ್ನು ಜಾರಿಗೊಳಿಸಿ ಆರು ಸಾವಿರ ಕೋಟಿ ಅನುದಾನ ಘೋಷಣೆ ಮಾಡಿದೆ. ಮೀನುಗಾರಿಕೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿಯೇ ಪ್ರಧಾನ ಮಂತ್ರಿಗಳು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯನ್ನು ಜಾರಿಗೊಳಿಸಿದ್ದಾರೆ ಎಂದರು.
ಕೇವಲ ರೈತರಿಗೆ ಮಾತ್ರ ಇದ್ದ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಮೀನುಗಾರರಿಗೂ ವಿಸ್ತರಿಸುವ ಮೂಲಕ ಕೇಂದ್ರ ಸರ್ಕಾರ ಮೀನುಗಾರರ ಅರ್ಥಿಕ ಮಟ್ಟ ಸುಧಾರಣೆಗೆ ಮತ್ತು ಅವರ ಸ್ವಾವಲಂಬಿ ಜೀವನಕ್ಕೆ ದಾರಿ ಮಾಡಿಕೊಟ್ಟಿದೆ. ಮಾಜಾಳಿ ಮತ್ತು ಅಂಕೋಲಾ ತಾಲ್ಲೂಕಿನ ಬೆಳಾಬಂದರ್ ಮೀನುಗಾರಿಕೆ ಜಟ್ಟಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೆಲವು ತೊಂದರೆ ಗಳಿರುವುದು ಗಮನಕ್ಕೆ ಬಂದಿದೆ. ಪರಿಕ್ರಮ ಯಾತ್ರೆ ಮುಗಿದು ದೆಹಲಿಗೆ ಹೋದ ತಕ್ಷಣವೇ ಅಡೆತಡೆಗಳನ್ನು ನಿವಾರಿಸುವ ಕೆಲಸ ಮಾಡುತ್ತೇನೆ ಎಂದರು.
ಕರ್ನಾಟಕವು ಮೀನುಗಾರಿಕೆಗೆ ತನಗೆ ಆದ ಕೊಡುಗೆಯನ್ನು ನೀಡಿದೆ ಅಲ್ಲದೆ ಕರ್ನಾಟಕವು ಪ್ರಾಚೀನ ಕಾಲದ ಇತಿಹಾಸ, ಆಧುನಿಕ ಕಾಲದ ಇತಿಹಾಸ, ವಿಜ್ಞಾನ, ತಂತ್ರಜ್ಞಾನ, ಸಂಸ್ಕೃತಿ ಮತ್ತು ಸಂಪನ್ಮೂಲಗಳಿಗೆ ಹೆಸರಾಗಿದೆ. ಮೀನುಗಾರರು ನಿತ್ಯವೂ ಸಮುದ್ರದೊಂದಿಗೆ ಸಂಘರ್ಷ ಮಾಡಿದ ಜೀವನ ಸಾಗಿಸುತ್ತಾರೆ. ಮೀನುಗಾರಿಕೆ ಹೋದವರು ಮರಳಿ ಬರುತ್ತಾರೆ ಎನ್ನುವುದೂ ಹೇಳಲು ಕಷ್ಟಸಾಧ್ಯ. ರಕ್ಷಣಾ ಪಡೆಗಳ ಸೈನಿಕರು ಸಮವಸ್ತçದಲ್ಲಿ ದೇಶಕಾಯುವ ಕೆಲಸ ಮಾಡಿದರೆ ಮೀನುಗಾರ ಸಮವಸ್ತçವಿಲ್ಲದೇ ದೇಶಕಾಯುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು.
ಸಾಗರ ಪರಿಕ್ರಮ ಯಾತ್ರೆಯ ಮೂಲಕ ಮೀನುಗಾರರ ಸಮಸ್ಯೆ ಏನು ಎನ್ನುವುದನ್ನು ಲಿಖಿತವಾಗಿ ಅಲ್ಲ ವಾಸ್ತವವಾಗಿ ತಿಳಿಯಲು ಅವಕಾಶ ಸಿಕ್ಕಿದೆ. ಇಲ್ಲಿಯ ಮೀನುಗಾರರ ಸಮಸ್ಯೆಗಳನ್ನು ತಿಳಿದುಕೊಳ್ಳಲು ನಾನಷ್ಟೇ ಅಲ್ಲ ಅಧಿಕಾರಿಗಳು ನನ್ನೊಂದಿಗೆ ಬಂದಿದ್ದು ಇಡೀ ಮೀನುಗಾರಿಕೆ ಸಚಿವಾಲಯವೇ ಇಲ್ಲಿದೆ ಎಂದು ತಿಳಿಸಿದರು. ಮೀನುಗಾರಿಕೆ ಸಚಿವರಾದ ಅಂಗಾರ್ ಅವರು ಮಾತನಾಡಿ, ಒಳನಾಡು ಮೀನುಗಾರಿಕೆ ಅಂದರೆ ಕೃತಕವಾಗಿ ಮೀನುಗಾರಿಕೆಗೆ ಇಂದು ಹೆಚ್ಚು ಒತ್ತು ನೀಡುವುದು ಅವಶ್ಯಕವಾಗಿದೆ ಕರ್ನಾಟಕಕ್ಕೆ 60 ಕೋಟಿ ಮೀನು ಮರಿ ಅವಶ್ಯಕತೆ ಅದರಲ್ಲಿ 40 ಕೋಟಿ ಮೀನು ಮರಿ ಉತ್ಪಾದಿಸಲಾಗಿದೆ ಉಳಿದ 20 ಕೋಟಿ ಮೀನು ಮರಿ ಬೇಡಿಕೆಯಿದೆ ಎಂದರು.
ಬಾಗಲಕೋಟ್ ಜಿಲ್ಲೆಯ ಆಲಮಟ್ಟಿಯಲ್ಲಿ 25 ಹೆಕ್ಟರ್ ಪ್ರದೇಶದಲ್ಲಿ ಮೀನು ಮರಿ ಉತ್ಪಾದನೆಗೆ ಈಗಾಗಲೇ ಅವಕಾಶ ನೀಡಿದ್ದಾರೆ ಮುಂದಿನ ದಿನಗಳಲ್ಲಿ ರಾಜ್ಯದ ನಾನಾ ಕಡೆಗಳಲ್ಲಿ ಮೀನು ಮರಿ ಉತ್ಪಾದನಾ ಕೇಂದ್ರವನ್ನು ಆರಂಭಿಸಲಾಗುವುದು ಆಗ ಕರ್ನಾಟಕವು ಇಡೀ ದೇಶದಲ್ಲಿಯೇ ಮೀನು ಉತ್ಪಾದನೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಆಶಯ ಹೊಂದಿದ್ದೇವೆ ಎಂದರು.
ಕೋಸ್ಟ್ಗಾರ್ಡ್ ಅಧಿಕಾರಿ ಮನೋಜ್ ಬಾಡ್ಕರ್ ಮಾತನಾಡಿ ಪ್ರತಿ ಬಾರಿ ನಾವುಗಳು ಇಲ್ಲಿನ ಮೀನುಗಾರರ ಸಮಸ್ಯೆಗಳನ್ನು ಮಂತ್ರಿಗಳ ಗಮನಕ್ಕೆ ತರುತ್ತಿದ್ದೇವೆ ಹಾಗೆಯೇ ಮೀನುಗಾರಿಕೆಯ ವ್ಯಾಪಾರವನ್ನು ಹೇಗೆ ಹೆಚ್ಚಿಸಿಕೊಳ್ಳಬೇಕು, ಮಾರುಕಟ್ಟೆಯನ್ನು ಹೇಗೆ ಬೆಳೆಸಿಕೊಳ್ಳಬೇಕು ಮೀನುಗಾರರ ಸರ್ವತೋಮುಖ ಅಭಿವೃದ್ಧಿಗೆ ಯಾವೆಲ್ಲ ಮಾರ್ಗಗಳನ್ನು ಅನುಸರಿಸಬೇಕು ಎಂಬುದನ್ನು ಮಂತ್ರಿಗಳ ಗಮನಕ್ಕೆ ತಂದು ಎಲ್ಲಾ ಸಮಸ್ಯೆಗಳ ಪರಿಹಾರಿಸುವುದಕ್ಕೆ ಕ್ರಮ ವಹಿಸಲಾಗುವುದು ಎಂದರು.
ಶಾಸಕಿ ರೂಪಾಲಿ ನಾಯ್ಕ, ಮೀನುಗಾರಿಕೆ ಜಂಟಿ ನಿರ್ದೇಶಕ ಜೆ ಬಾಲನಿಧಿ, ಮೀನುಗಾರಿಕೆ ಮುಖ್ಯ ಕಾರ್ಯದರ್ಶಿ ಜತಿಂದ್ರ ಶೋಯಲ್, ಮೀನುಗಾರಿಕೆ ಜಂಟಿ ನಿರ್ದೇಶಕ ರವೀಂದ್ರ ತಳೆಕರ, ಉಪ ನಿರ್ದೇಶಕ ಪ್ರತೀಕ್, ನಗರ ಸಭೆ ಅಧ್ಯಕ್ಷ ನಿತೀನ್ ಪಿಕಳೆ, ಉತ್ತರ ಕನ್ನಡ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ ಹಾಗೂ ಜಿಲ್ಲಾ ಮಟ್ಟದ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.