ಕಾರವಾರ: ಮೀನುಗಾರರು ಮೀನುಗಾರಿಕೆಯನ್ನಷ್ಟೇ ಅಲ್ಲ ಮಾರಾಟವನ್ನೂ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಮೀನುಗಾರರಿಗೆ ವಾಹನ ಕೊಡುವ ಬಗ್ಗೆ ಯೋಚನೆ ಮಾಡಲಾಗಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ವಾಹನ ಕೊಡುವ ಸಂಬಂಧ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಅದಕ್ಕೆ ಸ್ಥಳೀಯ ಶಾಸಕರು, ಸಂಸದ, ಸ್ಥಳೀಯರ ಮಾಹಿತಿ ಅಗತ್ಯ ಇತ್ತು. ಅದಕ್ಕಾಗಿ ಉತ್ತರ ಕನ್ನಡ ಜಿಲ್ಲೆಯ ಕೆಲ ಸ್ಥಳಗಳಿಗೆ ಭೇಟಿ ಮಾಡಿದ್ದೇನೆ. ಮೀನುಗಾರಿಕೆಗೆ ಹೂಳಿನ ಸಮಸ್ಯೆ ಇರುವ ಬಗ್ಗೆ ಹೇಳಿದ್ದಾರೆ. ಸಭೆ ಮಾಡಿಯೂ ಮಾಹಿತಿ ಸಂಗ್ರಹಿಸಲಾಗಿದೆ. 20 ದಿನಗಳು ಕಳೆದ ನಂತರ ಮತ್ತೆ ಜಿಲ್ಲೆಗೆ ಬಂದು ಪ್ರಗತಿ ಪರಿಶೀಲನೆ ಮಾಡುವುದಾಗಿ ತಿಳಿಸಿದರು.
ಹೊನ್ನಾವರ ಬಂದರು ವಿಚಾರ ಕೂಡ ಸಭೆಯಲ್ಲಿ ಚರ್ಚೆಯಾಗಿದೆ. ಕಾಲಮಿತಿಯೊಳಗೆ ಕಾಮಗಾರಿ ಮುಗಿಸಬೇಕು. ಅಲ್ಲಿ ಜನರ ವಿರೋಧ ಇದ್ದರೂ, ಅಭಿವೃದ್ಧಿ ಕೆಲಸಕ್ಕೆ ಜನರು ಸಹಕಾರ ಕೊಡಬೇಕು. ಜನರಿಗೆ ಒಂದಷ್ಟು ತೊಂದರೆ ಆದರೂ ಕೂಡ ಮೀನುಗಾರರ ಹಿತವನ್ನು ಇಟ್ಟುಕೊಂಡೇ ಯೋಜನೆ ಮಾಡಲಾಗಿದೆ ಎಂದು ಹೊನ್ನಾವರದಲ್ಲಿ ನಿರ್ಮಾಣವಾಗುತ್ತಿರುವ ಖಾಸಗಿ ಬಂದರು ಯೋಜನೆಯನ್ನು ಸಮರ್ಥಿಸಿಕೊಂಡರು.