ಕಾರವಾರ: ಅಳಿವಿನಂಚಿನಲ್ಲಿರುವ ಕಡಲಾಮೆಗಳ ಸಂರಕ್ಷಣೆಗೆ ಕೇಂದ್ರ ಸರಕಾರ ಯೋಜನೆ ತರಬೇಕು ಎಂದು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಕಾರಿ ಕುಮಾರ ಪುಷ್ಕರ್ ಹೇಳಿದರು.
ನಗರದ ಕೋಡಿಭಾಗದ ವನಸಿರಿ ಭವನದಲ್ಲಿ ಗುರುವಾರ ಆಯೋಜಿಸಿದ್ದ ಆಮೆ ಉತ್ಸವದಲ್ಲಿ ಅವರು ಮಾತನಾಡಿದ ಅವರು ಮಾನವನಿಗೆ ಹಿಂದಿನಿಂದಲೂ ಆಮೆಗಳ ಬಗ್ಗೆ ತಿಳಿದಿದೆ. ಆದರೆ ಅವುಗಳಿಂದ ಸಮುದ್ರ, ಪರಿಸರಕ್ಕೆ ಆಗುವ ಲಾಭ ಹಾಗೂ ಅವುಗಳ ಜೀವನ ಶೈಲಿಯನ್ನು ತಿಳಿದುಕೊಳ್ಳಲು ಮುಂದಾಗಲಿಲ್ಲ. ಸದ್ಯ ಅಳಿವಿನಂಚಿನಲ್ಲಿರುವ ಆಲಿವ್ ರಿಡ್ಲಿ ಆಮೆ ಕೆಲವೇ ಭಾಗಗಳಲ್ಲಿ ಕಂಡುಬರುತ್ತಿದ್ದು ಅರಣ್ಯ ಇಲಾಖೆಯು ಅವುಗಳ ರಕ್ಷಣೆಗೆ ನಿಂತಿದೆ. ಅದಕ್ಕ ಸ್ಥಳೀಯ ಮೀನುಗಾರರು, ಸಾರ್ವಜನಿಕರು ಸಹಾಯ ಮಾಡಬೇಕು ಎಂದರು.
ಶಿರಸಿ ಕೆನರಾ ವೃತ್ತದ ಅರಣ್ಯ ಸಂರಕ್ಷಣಾಕಾರಿ ವಸಂತರೆಡ್ಡಿ ಕೆ.ವಿ. ಮಾತನಾಡಿ, ಬಹಳ ಹಿಂದಿನಿಂದಲೂ ಹೊನ್ನಾವರದಲ್ಲಿ ಆಮೆಗಳ ರಕ್ಷಣೆ ಆಗುತ್ತಿದೆ. ಈಗಾಗಲೇ 10 ಸಾವಿರಕ್ಕೂ ಹೆಚ್ಚು ಆಮೆ ಮರಿಗಳನ್ನು ರಕ್ಷಣೆ ಮಾಡಿದ್ದಾರೆ. ಇನ್ನೆರಡು ತಿಂಗಳಲ್ಲಿ ಹೊನ್ನಾವರ ವಲಯದಲ್ಲಿಯೂ ಕೋಸ್ಟಲ್ ಮರೈಲ್ ಕೋಶ ಆರಂಭಿಸುತ್ತೇವೆ ಎಂದರು. ಕಾರವಾರ ವಲಯದ ಉಪ ಅರಣ್ಯ ಸಂರಕ್ಷಣಾಕಾರಿ ಡಾ. ಪ್ರಶಾಂತ ಕೆ.ಸಿ ಮಾತನಾಡಿ, ಈ ವರ್ಷ 40 ಕಡಲಾಮೆಯ ಗೂಡುಗಳನ್ನು ರಕ್ಷಣೆ ಮಾಡಲಾಗಿದೆ. ಜತೆಗೆ ಕಾಂಡ್ಲಾ ಕಾಡುಗಳ ರಕ್ಷಣೆ, ಕಡಲತೀರಗಳ ಉನ್ನತೀಕರಣ, ಆಮೆಗಳು ಹಾಗೂ ಅಳಿವಿನಂಚಿನ ಜೀವಿಗ ಬಗ್ಗೆ ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು. ಕಡಲ ತೀರಗಳಲ್ಲಿ ಕಾಮಗಾರಿಗಳು ಹೆಚ್ಚಾಗುವುದರಿಂದ ಆಮೆಗಳು ಬರುವುದು ಕಡಿಮೆಯಾಗಲಿದೆ ಎನ್ನುವ ಭಾವನೆ ಇದೆ. ಹೀಗಾಗಿ ಆಮೆಗಳಿಗೆ ಸ್ಯಾಟಲೈಟ್ ಟ್ಯಾಗಿಂಗ್ ಮಾಡುವ ಯೋಚನೆ ಇದೆ ಎಂದರು.
ಕಡಲ ಜೀವಶಾಸ್ತ್ರ ಸ್ನಾತ್ತಕೋತ್ತರ ಕೇಂದ್ರದ ಪ್ರಾಂಶುಪಾಲ ಜಿ.ಎಲ್ ರಾಠೋಡ ಮಾತನಾಡಿ, ಭೂಮಿ ನಮಗೆ ಮಾತ್ರ ಎನ್ನುವ ಭಾವನೆ ನಮ್ಮಲಿದೆ. ಆದರೆ ನಾವು ಭೂಮಿಯ ಒಂದು ಭಾಗ ಮಾತ್ರ ಎಂದರು. ಕಡಲ ಜೀವ ವೈವಿಧ್ಯತೆ ಕುರಿತ ಚಿತ್ರಕಲಾ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಹಾಗು ಕಡಲಾಮೆಗಳ ಮೊಟ್ಟೆಗಳ ಬಗ್ಗೆ ಮಾಹಿತಿ ನೀಡಿದ ಮೀನುಗಾರರಿಗೆ ಪ್ರಶಸ್ತಿ ಪತ್ರ ನೀಡಲಾಯಿತು.