ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿ, ಯುವ ಜನತೆಗೆ ಉದ್ಯೋಗ, ಜಿಲ್ಲೆಯ ಆರ್ಥಿಕ ಚಟುವಟಿಕೆಗಳ ಹೆಚ್ಚಳ ಮತ್ತಿತರ ಕಾರಣಗಳಿಂದ ಹುಬ್ಬಳ್ಳಿ ಅಂಕೋಲಾ ರೈಲ್ವೆ ಮಾರ್ಗ ನಿರ್ಮಾಣವಾಗಲೇಬೇಕು ಎಂದು ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್.ನಾಯ್ಕ ಆಗ್ರಹಿಸಿದರು. ಹುಬ್ಬಳ್ಳಿ ಅಂಕೋಲಾ ರೈಲ್ವೆ ಮಾರ್ಗ ಕುರಿತ ವನ್ಯಜೀವಿ ಮಂಡಳಿ ರಚಿಸಿದ ಕೇಂದ್ರ ಉನ್ನತ ಅಧಿಕಾರಿಗಳು ನಡೆಸಿದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡ ಅವರು, ಅರಣ್ಯ, ವನ್ಯಜೀವಿಗಳ ಬಗ್ಗೆ ನಮಗೂ ಕಾಳಜಿ ಇದೆ. ಅವುಗಳ ರಕ್ಷಣೆಗೆ ಕ್ರಮ ಕೈಗೊಂಡಿದ್ದೇವೆ. ಈಗ ಜನರಿಗೆ ಅನುಕೂಲ ಕಲ್ಪಿಸಿ ಜನತೆಯ ಹಿತಾಸಕ್ತಿ ಕಾಪಾಡಬೇಕಾಗಿದೆ ಎಂದರು.
ಈ ರೈಲು ಮಾರ್ಗ ನಿರ್ಮಾಣ ಮಾಡುವ ಮೂಲಕ ಕೈಗಾರಿಕೆಗಳು ಬರಲಿವೆ. ಯುವ ಜನತೆಗೆ ಉದ್ಯೋಗಾವಕಾಶ ದೊರೆಯಲಿದೆ. ಕರಾವಳಿಯಿಂದ ರಾಜಧಾನಿಗೆ ನೇರ ಸಂಪರ್ಕ ಕಲ್ಪಿತವಾಗಲಿದೆ. ಬಡಜನರು ಬೆಂಗಳೂರಿಗೆ ಹೋಗಬೇಕೆಂದರೆ 2 ಸಾವಿರ ರೂ. ಟಿಕೆಟ್ ದರ ತೆರಬೇಕಾದ ಸ್ಥಿತಿ ಇದೆ.ಕೈಗಾ ಅಣು ವಿದ್ಯುತ್ ಸ್ಥಾವರ, ಕದಂಬ ನೌಕಾನೆಲೆ, ವಿಮಾನ ನಿಲ್ದಾಣ ಹಾಗೂ ಕೊಂಕಣ ರೈಲು ಯೋಜನೆಗೆ ಜಾಗವನ್ನು ನೀಡಿದ್ದೇವೆ. ಉದ್ಯೋಗವಿಲ್ಲದೆ ಯುವ ಜನತೆ ಪರದಾಡುತ್ತಿದ್ದಾರೆ. ಈ ಯೋಜನೆಯಾದರೆ ನಮ್ಮ ಜಿಲ್ಲೆಯ ಯುವಕರಿಗೆ ಉದ್ಯೋಗ ಸಿಗುತ್ತದೆ ಎಂದರು.
ಯೋಜನೆಗೆ ವಿರೋಧ ಮಾಡುವವರು ಬೆರಳೆಣಿಕೆಯಷ್ಟು ಜನರಿದ್ದಾರೆ. ಅದೂ ಬೇರೆಲ್ಲೋ ಕುಳಿತು ಆಕ್ಷೇಪಿಸುತ್ತಿದ್ದಾರೆ. ಇವರು ಯೋಜನೆ ನಿಲ್ಲಿಸುವ ಮಾತುಗಳನ್ನಷ್ಟೇ ಆಡುತ್ತಾರೆ. ಆದರೆ ನಮ್ಮ ಯುವ ಜನತೆಯ ಕೈಗೆ ಉದ್ಯೋಗ ಕೊಡುವ ಬಗ್ಗೆ ಮೌನ ವಹಿಸುತ್ತಾರೆ. ನಮ್ಮ ವಾಣಿಜ್ಯ ವ್ಯವಹಾರಗಳ ಹೆಚ್ಚಳದ ಬಗ್ಗೆ ತುಟಿ ಬಿಚ್ಚುವುದಿಲ್ಲ. ಬಡವರು ಹೇಗೆ ಬೆಂಗಳೂರಿಗೆ ಹೋಗಬೇಕೆಂಬ ಪ್ರಶ್ನೆಗೆ ಉತ್ತರ ಇಲ್ಲ. ಜಿಲ್ಲೆಯ ಆರೋಗ್ಯ, ಶಿಕ್ಷಣ, ಅಭಿವೃದ್ಧಿ ಯಾವುದರ ಬಗ್ಗೂ ಕಾಳಜಿ ಇಲ್ಲದೆ ಇದ್ದರೆ ಹೇಗೆ ಎಂದು ಪ್ರಶ್ನಿಸಿದರು. ಆಧುನಿಕ ತಂತ್ರಜ್ಞಾನ ಬಳಸಿ ನಮ್ಮ ಅರಣ್ಯ, ವನ್ಯಜೀವಿಗೆ ಉಂಟಾಗುವ ಹಾನಿಯ ಪ್ರಮಾಣವನ್ನು ಆದಷ್ಟೂ ಕಡಿಮೆ ಮಾಡಿ ಜನತೆಗೆ ಅನುಕೂಲವಾದ ರೈಲು ಮಾರ್ಗವನ್ನು ಮಾಡಬಹುದಾಗಿದೆ. 2000ನೇ ಇಸ್ವಿಯಲ್ಲಿ ದಿ.ಅಟಲ್ ಜೀ ಶಿಲಾನ್ಯಾಸ. ಕಲಘಟಗಿ ತನಕ ಮಾರ್ಗ ಆಗಿದೆ.
ಈಗ ಕೇಂದ್ರ ಹಾಗೂ ರಾಜ್ಯ ಸರ್ಕಾರ ಯೋಜನೆಗೆ ಪೂರಕವಾಗಿದೆ. ನಾನು ಈ ಯೋಜನೆಗೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಈಗಾಗಲೇ ಕೇಂದ್ರ ಸಚಿವ ಅಮಿತ್ ಶಹಾಜೀ, ಪ್ರಹ್ಲಾದ ಜೋಶಿಜೀ, ಸೇರಿದಂತೆ ಸಂಬಂಧಪಟ್ಟ ಸಚಿವರ ಗಮನ ಸೆಳೆದಿದ್ದೇನೆ. ನಮ್ಮ ಜಿಲ್ಲೆ, ನನ್ನ ಕ್ಷೇತ್ರದ ಜನತೆ ಪಕ್ಷಾತೀತವಾಗಿ ಯೋಜನೆಯನ್ನು ಬೆಂಬಲಿಸುತ್ತಿದ್ದಾರೆ. ನನ್ನ ಕ್ಷೇತ್ರ, ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಈ ರೈಲು ಯೋಜನೆ ಜಾರಿಯಾಗಬೇಕು ಎಂದು ಒತ್ತಾಯಿಸಿದರು. ನಂತರ ರೈಲ್ವೆ ಅಧ್ಯಯನ ಉನ್ನತಾಧಿಕಾರ ಸಮಿತಿಗೆ ಹುಬ್ಬಳ್ಳಿ-ಅಂಕೋಲಾ ಸಂಪರ್ಕ ಕಲ್ಪಿಸುವ ರೈಲು ಮಾರ್ಗ ಆಗಬೇಕು ಎಂಬ ಲಿಖಿತ ರೂಪದಲ್ಲಿಯೂ ಮನವಿಯನ್ನು ಸಲ್ಲಿಸಿದರು.