ಕಾರವಾರ: ಲೇಡಿಸ್ ಬೀಚ್ಗೆ ತೆರಳಲು ಬೈತಖೋಲ ಗುಡ್ಡ ಅಗೆದು ನೌಕಾನೆಲೆಯಿಂದ ರಸ್ತೆ ಕಾಮಗಾರಿ ನಡೆಸುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಸ್ಥಳೀಯ ನಿವಾಸಿಗಳು ಬುಧವಾರ ಪ್ರತಿಭಟನೆ ನಡೆಸಿ ಕಾಮಗಾರಿ ತಡೆದರು.
ಬೈತಖೋಲ ಜನವಸತಿ ಪ್ರದೇಶದ ಗುಡ್ಡದಲ್ಲಿ ಕಳೆದ ಆರು ತಿಂಗಳಿಂದ ರಸ್ತೆ ಮಾಡಲು ಗುಡ್ಡ ಅಗೆಯುವ ಪ್ರಕ್ರಿಯೆ ನಡೆಯುತ್ತಿದೆ. ಸ್ಥಳೀಯ ನಿವಾಸಿಗಳು ಈ ಹಿಂದೆಯೂ ರಸ್ತೆಗಾಗಿ ಗುಡ್ಡ ಅಗೆಯದಂತೆ ಆಕ್ಷೇಪ ಮಾಡಿದ್ದರು. ಸ್ವಲ್ಪ ದಿನ ನಿಂತಿದ್ದ ಕಾಮಗಾರಿ ಮತ್ತೆ ಆರಂಭವಾಗಿದ್ದರಿಂದ ಬುಧವಾರ ನಿವಾಸಿಗಳು ಕಾಮಗಾರಿ ಸ್ಥಳಕ್ಕೆ ತೆರಳಿ ಪ್ರತಿಭಟನೆ ನಡೆಸಿದರು. ಜೆಸಿಬಿ ವಾಹನಗಳನ್ನು ವಾಪಸ್ ಕಳುಹಿಸಿದರು.
ಅಲ್ಲದೆ, ರಸ್ತೆ ಕಾಮಗಾರಿ ನಡೆಸುತ್ತಿದ್ದ ಗುತ್ತಿಗೆದಾರನನ್ನು ತಮ್ಮೊಂದಿಗೆ ಕರೆತಂದು ಸ್ಥಳೀಯ ಭೂದೇವಿ ದೇವಸ್ಥಾನದಲ್ಲಿ ಇಟ್ಟರು. ನೌಕಾನೆಲೆ ಅಧಿಕಾರಿಗಳು ಬರುವವರೆಗೆ ಬಿಡುವುದಿಲ್ಲ ಎಂದು ಹಠ ಹಿಡಿದರು. ಬಳಿಕ ನೌಕಾನೆಲೆ ಅಧಿಕಾರಿಯೊಬ್ಬರು ಬಂದು ಸ್ಥಳೀಯರೊಂದಿಗೆ ಸಭೆ ನಡೆಸಿದರು. ಗುಡ್ಡ ಅಗೆಯಲು ಅನುಮತಿ ಕೊಟ್ಟವರು ಯಾರು ಎಂದು ಸ್ಥಳೀಯರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಗುಡ್ಡ ಸದೃಢವಾಗಿದೆ. ರಸ್ತೆ ಮಾಡಲು ಬೇಕಾದ ಎಲ್ಲ ಅನುಮತಿಗಳು ಇವೆ. ಜಿಲ್ಲಾಧಿಕಾರಿ ಕಚೇರಿಗೆ ಬಂದರೆ ಎಲ್ಲ ದಾಖಲೆ ತೋರಿಸುವುದಾಗಿ ನೌಕಾನೆಲೆ ಅಧಿಕಾರಿ ತಿಳಿಸಿದರು. ಅದಕ್ಕಾಗಿ ಜಿಲ್ಲಾಧಿಕಾರಿ ಕಚೇರಿಗೆ ಬರುವುದಿಲ್ಲ. ಇಲ್ಲಿಯೇ ತೋರಿಸಬೇಕು ಎಂದು ಪ್ರತಿಭಟನಾಕಾರರು ಹಠ ಹಿಡಿದರು.
ಗುರುವಾರ ಅನುಮತಿ ಪತ್ರಗಳನ್ನು ತೋರಿಸುವುದಾಗಿ ಅಧಿಕಾರಿ ಮಾಹಿತಿ ನೀಡಿದರು. ಗುಡ್ಡದ ಅಂಚಿನಲ್ಲಿ ಸಾವಿರಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿವೆ. ರಸ್ತೆಗಾಗಿ ಅವೈಜ್ಞಾನಿಕವಾಗಿ ಗುಡ್ಡ ಅಗೆಯುವುದರಿಂದ ಮಳೆಗಾಲದಲ್ಲಿ ಕುಸಿತ ಆಗುವ ಅಪಾಯ ಇದೆ. ಹಾಗಾಗಿ ಯಾವುದೇ ಕಾರಣಕ್ಕೂ ಅವೈಜ್ಞಾನಿಕ ಕಾಮಗಾರಿ ನಡೆಸಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಬೈತಖೋಲ ನಿವಾಸಿಗಳು ಇದ್ದರು.