ಕಾರವಾರ: ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡದಿಕ್ಕಿನಲ್ಲಿರುವ ವಿದ್ಯುತ್ ಪರಿವರ್ತಕಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರ್ಗೆ ಬೆಂಕಿಹೊತ್ತಿಕೊಂಡು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು,ಓರ್ವ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಅಂಕೋಲಾದ ಹಾರವಾಡ ರೈಲ್ವೆ ಬ್ರಿಡ್ಜ್ ಬಳಿ ಸಂಭವಿಸಿದೆ.
ಆಂಧ್ರಪ್ರದೇಶದ ಅನಂತಪುರ ನಿವಾಸಿ ರವಿತೇಝ್ ಉಪ್ಪಾರ (21) ಸಾವನ್ನಪ್ಪಿದ ಪದವಿ ವಿದ್ಯಾರ್ಥಿ ಚಾಲಕ ಪವನ ಬಿ., ಬಾಲಚಂದ್ರ ಕೈತಾವರ, ಮೋಹನ ಸಾಯಿ, ಬೊಯಿಜ್ ಕುಮಾರ್ ಗಾಯಗೊಂಡವರು. ಇವರು ಆಂಧ್ರಪ್ರದೇಶದ ಸೆಂಟ್ರಲ್ ಯುನಿರ್ವಸಿಟಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಕಾರಿನಲ್ಲಿ ಗೋವಾಕ್ಕೆ ಪ್ರವಾಸಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಅವಘಡ ನಡೆದಿದೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಘಟನಾ ಸ್ಥಳಕ್ಕೆ ಪಿಐ ಸಂತೋಷ ಶೆಟ್ಟಿ, ಪಿಎಸ್ ಐ ಪ್ರವೀಣಕುಮಾರ ಆರ್. ಭೇಟಿ ನೀಡಿದರು. ಪಿಎಸ್ ಐ ಮಹಾಂತೇಶ ವಾಲ್ಮೀಕಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.