ಕಾರವಾರ: 18 ಗ್ರಾಮಗಳ ಒಡೆಯ ಬಾಡದ ಮಹಾದೇವರ ಮಹಾದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ರವಿವಾರ ವಿಜೃಂಭಣೆಯಿಂದ ಆರಂಭಗೊಂಡಿದೆ. ಸಮಾರೋಪಗೊಳ್ಳಲಿದೆ.
ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ವಿವಿಧ ಪೂಜೆ-ಪುರಸ್ಕಾರಗಳು ನಡೆದವು.ಮಹಾದೇವರಿಗೆ ಇಷ್ಟವಾದ ಬಿಲ್ವಪತ್ರೆ ಸಮರ್ಪಣೆ, ಅಭಿಷೇಕಗಳು ನಡೆದು, ಭಕ್ತರಿಂದ ಹೂವು-ಹಣ್ಣುಕಾಯಿ ಸೇವೆ, ತುಲಾಭಾರ ಸೇವೆಗಳು ನಡೆದವು. ಇದೇ ವೇಳೆ ದೇವಸ್ಥಾನದ ಕಮಿಟಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಅನೇಕರು ಉತ್ಸಾಹದಿಂದ ಪಾಲ್ಗೊಂಡರು.
ಮಹಾದೇವರ ಪಲ್ಲಕ್ಕಿಯು ದೇಗುಲದಿಂದ ದೇವಳಿವಾಡ ಮಾರ್ಗದಲ್ಲಿ ಹಬ್ಬುವಾಡದ ಗಣಪತಿ ದೇವಸ್ಥಾನಕ್ಕೆ ನೂರಾರು ಭಕ್ತರ ಹರ್ಷೊಧ್ಘಾರದಲ್ಲಿ ತೆರಳಿತು. ಅಲ್ಲಿ ವನಭೋಜನ ಪೂರೈಸಿದ ದೇವರು ಪಲ್ಲಕ್ಕಿಯಲ್ಲೇ ಸೋಮವಾರ ಬೆಳಗಿನ ಜಾವ ದೇವಸ್ಥಾನಕ್ಕೆ ಮರಳಿತು. ಮಧ್ಯಾಹ್ನ ದಹಿಂಕಾಲ ನಡೆಯಲಿದ್ದು, ರಾತ್ರಿ ದಿ.ಮಾರುತಿ ಬಾಡಕರ್ ಅವರ ನೆನಪಿನಲ್ಲಿ, ಅವರೇ ವಿರಚಿತ ‘ಸೇಡಿನ ಜ್ವಾಲೆ’ ಎಂಬ ನಾಟಕ ಪ್ರದರ್ಶನ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.