ಕಾರವಾರ: ಜಿಲ್ಲೆಯ ಕಾರವಾರ ತಾಲೂಕಿನ ವೈಲವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಖಾರ್ಗೆಜೂಗ ಮಜಿರೆಯಲ್ಲಿ ನರೇಗಾದಡಿ ಕೈಗೊಂಡಿರುವ ನೀರು ಕಾಲುವೆ ಅಭಿವೃದ್ಧಿ ಕಾಮಗಾರಿ ಸ್ಥಳದಲ್ಲಿ ಬುಧವಾರ ಐಇಸಿ ಚಟುವಟಿಕೆಯಡಿ ಜಲ ಸಂಜೀವಿನಿ ಜಾಗೃತಿ, ವಿಶೇಷ ಮಹಿಳಾ ಗ್ರಾಮ ಸಭೆ, ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನ ಹಾಗೂ ನರೇಗಾ ಯೋಜನೆಯ ಮಾಹಿತಿ ವಿನಿಮಯ ಕಾರ್ಯಕ್ರಮ ನಡೆಸಲಾಯಿತು.
ಈ ವೇಳೆ ಗ್ರಾಪಂ ಪಿಡಿಒ ನಟರಾಜ್ ಎನ್. ಮಾತನಾಡಿ, ಗ್ರಾಮೀಣ ಜನರಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ತುಂಬಾ ಸಹಕಾರಿಯಾಗಿದೆ.
ಹೀಗಾಗಿ ಗ್ರಾಮದ ಜನತೆ ನರೇಗಾದಡಿ ಲಭ್ಯವಿರುವ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಸದುಪಯೋಗ ಪಡೆದುಕೊಳ್ಳಬೇಕು. ಈ ಮೂಲಕ ಸರ್ವಾಂಗೀಣ ಅಭಿವೃದ್ಧಿಗೆ ಮುಂದಾಗಬೇಕು ಎಂದರು.
ತಾಂತ್ರಿಕ ಸಹಾಯಕ ಇಂಜಿನಿಯರ್ ಅರ್ಜುನ್ ನಾಯ್ಕ ಮಾತನಾಡಿ, ಪ್ರಸಕ್ತ ಸಾಲಿನಿಂದ ನೀರು, ಮಣ್ಣು ಹಾಗೂ ಪರಿಸರ ಸಂರಕ್ಷಣೆಗೆ ಪೂರಕವಾದ ಕಾಮಗಾರಿ ಕೈಗೊಳ್ಳಲು ನರೇಗಾದಡಿ 2023-24ನೇ ಸಾಲಿನ ಜಲ ಸಂಜೀವಿನಿ ಆಯವ್ಯಯ ತಯಾರಿಕೆ ಪ್ರಕ್ರಿಯೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಪ್ರಗತಿಯಲ್ಲಿದೆ.
ತಾಲೂಕ ಐಇಸಿ ಸಂಯೋಜಕ ಫಕೀರಪ್ಪ ತುಮ್ಮಣ್ಣನವರ ಮಾತನಾಡಿ, ನರೇಗಾ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಲಭ್ಯವಿರುವ ನೀರು, ನೆರಳು, ಆರೋಗ್ಯ ಸೌಲಭ್ಯಗಳು, ಇ-ಶ್ರಮ್ ಕಾರ್ಡ್ ಪ್ರಯೋಜನ, ಹಿರಿಯ ನಾಗರಿಕರು, ಗರ್ಭಿಣಿಯರು, ಬಾಣಂತಿಯರು, ಲಿಂಗತ್ವ ಅಲ್ಪಸಂಖ್ಯಾತರಿಗೆ ಕೆಲಸದ ಪ್ರಮಾಣದಲ್ಲಿ ಸಿಗಬಹುದಾದ ಶೇ. 50ರಷ್ಟು ರಿಯಾಯಿತಿ ಕುರಿತು ತಿಳಿಸಿದರು.
ಜೊತೆಗೆ ನರೇಗಾ ಉದ್ಯೋಗ ಚೀಟಿ, ಕೂಲಿ ಕೆಲಸ ಹಾಗೂ ಕಾಮಗಾರಿ ಪಡೆದುಕೊಳ್ಳಲು ಗ್ರಾಮ ಪಂಚಾಯತಿ ಅಧಿಕಾರಿ, ಸಿಬ್ಬಂದಿಗೆ ಸಂಪರ್ಕಿಸಿ ಬೇಡಿಕೆ ಸಲ್ಲಿಸುವಂತೆ ಹೇಳಿದರು.